ಸಿದ್ಧಾಪುರ ಡಾನ್ ಪಟ್ಟಕ್ಕಾಗಿ ಲಿಂಗ ಹಾಗೂ ನಾಗನ ಗ್ಯಾಂಗ್ ನಡುವೆ ವಾರ್
ಬೆಂಗಳೂರು, ಜು. 06: ಬೆಂಗಳೂರು ಭೂಗತ ಲೋಕದಲ್ಲಿ ಅಚ್ಚಳಿಯದ ಹೆಸರು ಶಾಂತಿನಗರ, ಸಿದ್ಧಾಪುರ. ದಶಕಗಳಿಂದಲೂ ರೌಡಿ ಸಾಮ್ರಾಜ್ಯದ ನಾಯಕರನ್ನು ಹುಟ್ಟು ಹಾಕಿದ್ದೇ ಶಾಂತಿನಗರ ಹಾಗೂ ಸಿದ್ದಾಪುರ. ಶಾಂತಿನಗರ ಲಿಂಗನ ಹತ್ಯೆ ನಂತರ ಸಿದ್ಧಾಪುರ ಪಾತಕ ಲೋಕದ ಸಾಮ್ರಾಜ್ಯ ವಿಸ್ತರಣೆಗೆ ಕೈ ಹಾಕಿರುವುದೇ ಎದುರಾಳಿ ಗ್ಯಾಂಗ್ ನ ನಾಗ. ಇಡೀ ಬೆಂಗಳೂರು ಡಾನ್ ಪಟ್ಟಕ್ಕಾಗಿ ಹಪಿ ಹಪಿಸುತ್ತಿದ್ದ ನಾಗನನ್ನ ಮುಗಿಸಲು ಶಾಂತಿನಗರ ಲಿಂಗನೇ ಪ್ಲಾನ್ ರೂಪಿಸಿದ್ದ. ಆದರೆ, ಹಾಸನದ ಫಾರ್ಮ ಹೌಸ್ ನಲ್ಲಿ ಲಿಂಗನನ್ನೇ ಬರ್ಬರವಾಗಿ ಹತ್ಯೆ ಮಾಡಿಸಿದ್ದ ನಾಗ. ಇದೀಗ ಲಿಂಗನ ಬಲಗೈ ಬಂಟ ಮಹೇಶ್ ಫೀಲ್ಡಿಗೆ ಇಳಿದಿದ್ದಾನೆ. ಸಿದ್ದಾಪುರ ನಾಗ ಮತ್ತು ಗ್ಯಾಂಗ್ ಗೆ ಹಣಕಾಸು ನೆರವು ನೀಡುತ್ತಿದ್ದ ಫೈನಾನ್ಸಿಯರ್ ಮದನ್ ಎಂಬಾತನ ಕೊಲೆ ಪ್ರಕರಣ ಬೆಂಗಳೂರಿನ ಭೂಗತ ಲೋಕದನ ಮಹತ್ವದ ಬೆಳವಣಿಗೆಯ ರಹಸ್ಯಗಳನ್ನು ಹೊರ ಹಾಕಿದೆ.
ಸಿದ್ದಾಪುರದ ಡಾನ್ ಎನಿಸಿಕೊಳ್ಳಲು ರೌಡಿ ಪಾಳಯದಲ್ಲಿ ಕಾದಾಟ ಶುರುವಾಗಿದೆ. ಅದಕ್ಕಾಗಿ ಶಾಂತಿನಗರ ಲಿಂಗನ ಹತ್ಯೆ ನಡೆದು ಹೋಯಿತು. ಇದೀಗ ಲಿಂಗನ ಶಿಷ್ಯ ಎದುರಾಳಿ ಗ್ಯಾಂಗ್ ನಾಗನಿಗೆ ಹಣಕಾಸು ಒದಗಿಸುತ್ತಿದ್ದ ಮದನ್ ನನ್ನು ಮುಗಿಸಿದ್ದಾರೆ. ಶಾಂತಿನಗರ ಹಾಗೂ ಸಿದ್ಧಾಪುರದ ದಾದಾಗಿರಿ ಪಟ್ಟಕ್ಕಾಗಿ ನಡೆಯುತ್ತಿರುವ ರೌಡಿ ಕಾಳಗದ ಭಾಗವಾಗಿಯೇ ಮದನ್ ಹತ್ಯೆ ಆಗಿರೋದು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೊಲೀಸರ ಗುಂಡೇಟು ತಿಂದಿರುವ ರೌಡಿ ಮಹೇಶ್ ಕುರಿತ ಪೂರ್ಣ ಸ್ಟೋರಿ ಇಲ್ಲಿದೆ.
ವಕೀಲರ ಸೋಗಿನಲ್ಲಿ ಕೋರ್ಟ್ಗೆ ಶರಣಾಗಿದ್ದ ಕೊಲೆ ಆರೋಪಿಗಳ ಕಾಲಿಗೆ ಗುಂಡು!
ಶಾಂತಿನಗರ ಲಿಂಗನ ಹತ್ಯೆ
ಸೈಲೆಂಟ್ ಸುನೀಲ, ಒಂಟೆ ರೋಹಿತ್ ಹಾಗೂ ಶಾಂತಿನಗರ ಲಿಂಗ ಸಹೋದರರ ರೀತಿ ಇದ್ದರು. ಹಾಸನದ ತೋಟದ ಬಳಿ ಶಾಂತಿನಗರದ ಲಿಂಗನನ್ನು ಹತ್ಯೆ ನಡೆದು ಹೋಯಿತು. ಹಾಸನದ ಸಮೀಪ ತೋಟದ ಮನೆಯಲ್ಲಿದ್ದ ಶಾಂತಿನಗರ ಲಿಂಗ ಎದುರಾಳಿ ಸ್ಪಾಟ್ ನಾಗನ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಇದು ಗೊತ್ತಾಗಿ ನಾಗನೇ ಲಿಂಗನ ಹತ್ಯೆಗೆ ಮುಹೂರ್ತ ಇಟ್ಟಿದ್ದ. ಅದರಂತೆ ತೋಟದ ಮನೆಯಲ್ಲಿ ಲಿಂಗನನ್ನು ಮುಗಿಸಿತ್ತು ನಾಗನ ಗ್ಯಾಂಗ್. ಈ ಶಾಂತಿನಗರ ಲಿಂಗನ ಬಲಗೈ ಬಂಟ ಮಹೇಶ್. ಫೈನಾನ್ಸಿಯರ್ ಮದನ್ ಕೊಲೆ ಪ್ರಕರಣದಲ್ಲಿ ಕಾಲಿಗೆ ಗುಂಡು ಹೊಡೆಸಿಕೊಂಡಿರುವ ಮಹೇಶ್ ಕೂಡ ಶಾಂತಿನಗರ ಏರಿಯಾ ಡಾನ್ ಪಟ್ಟಕ್ಕೇರಲು ಹವಣಿಸುತ್ತಿದ್ದಾನೆ. ತನ್ನ ಗುರು ಹತ್ಯೆ ಮಾಡಿದ ನಾಗನ ಬಲಗೈ ಬಂಟನಾಗಿದ್ದ, ಹಣಕಾಸು ನೆರವು ನೀಡುತ್ತಿದ್ದ ಮದನ್ನನ್ನು ಹಾಡ ಹಗಲೇ ಹತ್ಯೆ ಮಾಡಿ ಮಹೇಶ್ ಇದೀಗ ಜೈಲು ಸೇರಿದ್ದಾನೆ. ಈತ ಜೈಲು ಸೇರುವ ಹಿಂದೆಯೂ ಒಂದು ರೊಚಕ ಸಂಗತಿಯಿದೆ.
ಶಾಂತಿನಗರ ಪಟ್ಟಕ್ಕಾಗಿ ಕದನ
ಶಾಂತಿನಗರ ಲಿಂಗನ ಆಪ್ತನಾಗಿದ್ದ ಮಹೇಶನನ್ನೇ ಸಿದ್ಧಾಪುರ ಏರಿಯಾ ಡಾನ್ ಮಾಡಲು ಪ್ರಯತ್ನ ನಡೆದಿತ್ತು. ಮಹೇಶನನ್ನು ಸಿದ್ಧಾಪುರ ಏರಿಯಾ ಕಿಂಗ್ ಮಾಡ್ತೀನಿ ಎಂದು ಶಾಂತಿನಗರ ಲಿಂಗರಾಜು ಸ್ವತಃ ಘೋಷಣೆ ಮಾಡಿದ್ದ. ಎದುರಾಳಿ ನಾಗನನ್ನು ಮುಗಿಸುವ ಪರೋಕ್ಷ ಹೇಳಿಕೆ ನೀಡಿದ್ದ ಲಿಂಗರಾಜುನನ್ನು ಹಾಸನದ ತೋಟದ ಮನೆ ಬಳಿ ನಾಗನ ಶಿಷ್ಯಂದಿರೇ ಹತ್ಯೆ ಮಾಡಿ ಮುಗಿಸಿದರು. ಗುರುವನ್ನೇ ಮುಗಿಸಿದ ನಾಗನ ವಿರುದ್ಧ ಸೇಡು ತೀರಸಿಕೊಳ್ಳಲು ಮಹೇಶ್ ಹೊಂಚು ಹಾಕುತ್ತಿದ್ದ. ಸಿದ್ದಾಪುರದ ನಾಗನನ್ನು ಹತ್ಯೆ ಮಾಡಿ, ಸಿದ್ದಾಪುರ ಕಿಂಗ್ ಪಟ್ಟಕ್ಕೆ ಏರಲು ರೌಡಿ ಮಹೇಶ್ ಮತ್ತು ಟೀಂ ಪ್ಲಾನ್ ರೂಪಿಸಿತ್ತು. ಇದು ನಾಗನಿಗೆ ಗೊತ್ತಾಗಿ, ರೌಡಿ ಮಹೇಶ್ ಹತ್ಯೆಗೆ ನಾಗ ಜೈಲಿನಿಂದಲೇ ಮುಹೂರ್ತ ಫಿಕ್ಸ್ ಮಾಡಿದ್ದಾನೆ ಎನ್ನಲಾಗಿದೆ.
ಜೈಲಿಗೆ ಹೋಗಲು ಮದನ್ ಕೊಲೆ ಮಾಡಿದ ಮಹೇಶ್
ಜೈಲಿನಲ್ಲಿರುವ ಸಿದ್ದಾಪುರದ ನಾಗನ ಹಿಟ್ ಲಿಸ್ಟ್ ನಲ್ಲಿರುವ ಮಹೇಶ್ಗೆ ಜೈಲಿಗೆ ಹೋಗುವುದು ಸೇಫ್ ಅನ್ನಿಸಿತ್ತು. ಹೀಗಾಗಿ ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ನಾಗನಿಗೆ ಫೈನಾನ್ಸ್ ಮಾಡ್ತಿದ್ದ ಮದನ್ ಹತ್ಯೆ. ಬನಶಂಕರಿ ಮೆಟ್ರೋ ಸ್ಟೇಷನ್ ಬಳಿ ಇದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಮದನ್ ನನ್ನು ಕೊಲೆ ಮಾಡಿದ್ದಾರೆ. ಮಹೇಶ್ ಗೆ ಸಾಥ್ ನೀಡಿದ್ದ ಎಸ್.ಆರ್. ನಗರದ ಗಿರಿ, ಪ್ರಕಾಶ್ ತಲೆ ಮರೆಸಿಕೊಂಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಅವರು ಮಹೇಶ್ನ ಕಾಲಿಗೆ ಗುಂಡು ಇಳಿಸಿ ಹಾಸಿಗೆಯಲ್ಲಿ ಮಲಗಿಸಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಲು ಹೋಗಿ ಮಹೇಶ್ ಮೊಣಕಾಲಿಗೆ ಗುಂಡು ಹೊಡೆಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ತನ್ನ ಸಮುದಾಯದ ರೌಡಿಗಳನ್ನು ಒಗ್ಗೂಡಿಸಿ ನಾಯಕನಾಗಲು ಹೊರಟಿರುವ ನಾಗ ಸ್ಕೆಚ್ ಹಾಕಿದರೆ ಸದ್ಯಕ್ಕೆ ಉಳಿಯುವುದೇ ಕಷ್ಟ ಎಂಬ ಮಾತು ಭೂಗತ ಲೋಕದಲ್ಲಿ ಚಾಲ್ತಿಯಲ್ಲಿವೆ. ಹೀಗಾಗಿ ಹೊರಗೆ ಇರುವುದಕ್ಕಿಂತಲೂ ಜೈಲಿನಲ್ಲಿರುವುದು ಸೇಫ್ ಎಂದ ತಿಳಿದು ಮದನ್ನನ್ನು ಹತ್ಯೆ ಮಾಡಿದ್ದಾಗಿ ರೌಡಿ ಮಹೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
Recommended Video
ಜೈಲಿನಲ್ಲಿದ್ದರೆ ಸುರಕ್ಷೆ ಎಂದಿದ್ದ ಮಹೇಶ್
ಶಾಂತಿನಗರ ಲಿಂಗನ ಆಪ್ತನಾಗಿದ್ದ ರೌಡಿ ಮಹೇಶ್, ಈ ಹಿಂದೆ ಸುಪಾರಿ ಪಡೆದು ಹಲವರನ್ನು ಮುಗಿಸಿದ್ದ. ವರ್ತೂರಿನ ಕರಾಟೆ ಶಿವನ ಹತ್ಯೆಗೆ 50 ಲಕ್ಷ ರೂ. ಸುಪಾರಿ ಪಡೆದಿದ್ದ ಮಹೇಶ್ ಕೊಲೆ ಮಾಡಿ ಜೈಲಿಗೆ ಹೋಗಿದ್ದ. ಆನಂತರ ವರ್ತೂರಿನ ಸುಹೇಲ್ ಹತ್ಯೆಗೂ ಸುಪಾರಿ ಪಡೆದು ಜೈಲು ಸೇರಿದ್ದ. ಮಹೇಶನ ಧೈರ್ಯ ನೋಡಿದ್ದ ಲಿಂಗ, ನಾಗನನ್ನು ಮುಗಿಸಲು ಮಹೇಶನನ್ನು ಬೆಳೆಸುತ್ತಿದ್ದ. ತನ್ನ ಎದುರಾಳಿ ನಾಗನನ್ನು ಮುಗಿಸಿ ಸಿದ್ಧಾಪುರ ಏರಿಯಾದ ನಂಬರ್ ಒನ್ ಡಾನ್ ಎಂಬ ಪಟ್ಟವನ್ನು ಮಹೇಶನಿಗೆ ಕೊಡಿಸವುದಾಗಿ ಶಾಂತಿನಗರ ಲಿಂಗ ಹೇಳಿಕೊಂಡಿದ್ದ. ಲಿಂಗ ಹತ್ಯೆ ಬಳಿಕ ಡಾನ್ ಆಗಲು ಹೊರಟಿರುವ ಮಹೇಶ್ ಮೊದಲ ಹಂತದಲ್ಲಿ ನಾಗನಿಗೆ ಹಣಕಾಸು ನೆರವು ನೀಡುತ್ತಿದ್ದ ಮದನ್ನನ್ನು ಮುಗಿಸಿ ಜೈಲು ಸೇರಿದ್ದಾನೆ.