ಚಿತ್ರಗಳು : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ
ಬೆಂಗಳೂರು, ನವೆಂಬರ್ 11 : ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಸಿಲುಕಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮೇಯರ್ ಗಂಗಾಬಿಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರ ಸಂಜೆ ತ್ಯಾಗರಾಜನಗರದಲ್ಲಿ ಸಾಯಿ ಗ್ರ್ಯಾಂಡ್ ಅಪಾರ್ಟ್ಮೆಂಟ್ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿ ಸುಫೇಲ್ ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳದವರು ಮೃತ ದೇಹವನ್ನು ಹೊರತೆಗೆದಿದ್ದಾರೆ.
ಕೋಲ್ಕತ್ತದ ಪಾರ್ಕ್ ಸ್ಟ್ರೀಟ್ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ
ಮೃತಪಟ್ಟ ಸುಫೇಲ್ ಶಿವಮೊಗ್ಗ ಮೂಲದವರು ಎಂದು ತಿಳಿದುಬಂದಿದೆ. ಅವರ ಜೊತೆ ಸಬೀರ್ ಎಂಬುವವರು ಕೆಲಸ ಮಾಡುತ್ತಿದ್ದರು. ಕಟ್ಟಡ ಬಲಕ್ಕೆ ವಾಲುತ್ತಿದ್ದ ವೇಳೆಯಲ್ಲಿ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಚೆನ್ನೈ : ನಿರ್ಮಾಣ ಹಂತದ ಕಟ್ಟಡ ಕುಸಿತ, ಓರ್ವ ಸಾವು
ಸಾಯಿ ಗ್ರ್ಯಾಂಡ್ ಅಪಾರ್ಟ್ಮೆಂಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಎಲೆಕ್ಟ್ರಿಕ್ ಮತ್ತು ಸುಣ್ಣ-ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿ ಇತ್ತು. ಆದರೆ, ಅಷ್ಟರಲ್ಲೇ ಕಟ್ಟಡ ಕುಸಿದು ಬಿದ್ದಿದೆ.
ಕಸವನಹಳ್ಳಿ ಕಟ್ಟಡ ದುರಂತ : 15 ಕಾರ್ಮಿಕರ ರಕ್ಷಣೆ
4 ಅಂತಸ್ತಿತ ಅಪಾರ್ಟ್ಮೆಂಟ್
ಕುಮಾರ್ ಎಂಬುವವರಿಗೆ ಸೇರಿದ 26*60 ಅಡಿ ಜಾಗದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗುತ್ತಿತ್ತು. ಕಟ್ಟಡದ ಪಕ್ಕದ ಖಾಲಿ ಜಾಗದಲ್ಲಿ ಹೊಸ ಕಟ್ಟಡದ ನಿರ್ಮಾಣಕ್ಕಾಗಿ ಯಂತ್ರದ ಸಹಾಯದಿಂದ ಪಾಯ ತೋಡಲಾಗಿತ್ತು. ಇದರಿಂದಾಗಿ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಧಕ್ಕೆ ಆಗಿತ್ತು. ಅದನ್ನು ಸರಿಪಡಿಸಲು ಸುಫೇಲ್ ಮತ್ತು ಸಬೀರ್ ಅವರನ್ನು ಕರೆಸಿ ಕೆಲಸ ಮಾಡಿಸಲಾಗುತ್ತಿತ್ತು.
ಬಲಕ್ಕೆ ವಾಲಿದ ಕಟ್ಟಡ
ಶನಿವಾರ ಸಂಜೆ 4.40ಕ್ಕೆ ಜೋರಾದ ಸದ್ದಾಯಿತು. ನಾಲ್ಕು ಅಂತಸ್ತಿನ ಕಟ್ಟಡ ಬಲಕ್ಕೆ ವಾಲಿತು. ಕಟ್ಟಡ ಕುಸಿಯಿತು. ಸ್ಥಳದಲ್ಲಿ ದಟ್ಟವಾದ ಧೂಳು ಎದ್ದಿತು. ಅವಶೇಷಗಳಡಿ ಸಿಲುಕಿ ಸುಫೇಲ್ ಮೃತಪಟ್ಟರು. ಅಗ್ನಿ ಶಾಮಕದಳ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತುದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಶವವನ್ನು ಹೊರತೆಗೆದರು.
ಬಿಬಿಎಂಪಿ ಹೇಳುವುದೇನು?
'ಖಾಲಿ ಜಾಗದ ಮಾಲೀಕ ನಡೆಸುತ್ತಿದ್ದ ಪಾಯದ ಕಾಮಗಾರಿಯಿಂದಾಗಿ ಅಪಾರ್ಟ್ಮೆಂಟ್ ಕಟ್ಟಡ ಕುಸಿದಿದೆ. ಜಾಗದ ಮಾಲೀಕ ಪರಾರಿಯಾಗಿದ್ದಾನೆ. ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಕ್ರಮ ಕೈಗೊಳ್ಳುತ್ತೇವೆ' ಎಂದು ಬಿಬಿಎಂಪಿ ಜಂಟಿ ದಕ್ಷಿಣ ವಲಯದ ಜಂಟಿ ಆಯುಕ್ತ ಡಾ.ವಿಶ್ವನಾಥ್ ಹೇಳಿದ್ದಾರೆ.
ಮೇಯರ್ ಭೇಟಿ
ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಅವಘಟದ ಕುರಿತು ತನಿಖೆ ನಡೆಸುತ್ತೇವೆ. ಖಾಲಿ ಜಾಗದ ಮಾಲೀಕನದ್ದು ತಪ್ಪು ಎಂದು ಸಾಬೀತಾದರೆ, ಆತನಿಂದಲೇ ಕುಟುಂಬಕ್ಕೆ ಪರಿಹಾರ ಧನ ಕೊಡಿಸುತ್ತೇವೆ' ಎಂದು ಹೇಳಿದ್ದಾರೆ.