ಕತ್ತಿ ವರಸೆಗೆ ಮಣಿದ ಹೈಕಮಾಂಡ್, ಬಿಜೆಪಿಯ ಮತ್ತಿಬ್ಬರಿಗೆ ಸಚಿವ ಸ್ಥಾನ?
ಬೆಂಗಳೂರು, ಆಗಸ್ಟ್ 24: ಅತೃಪ್ತರನ್ನು ಹೊರತುಪಡಿಸಿ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಶುಕ್ರವಾರ ವರಿಷ್ಠರ ಜೊತೆ ಚರ್ಚೆ ನಡೆದಿದೆ.
ಮುಂದಿನ ವಾರ ಉಮೇಶ್ ಕತ್ತಿ ಹಾಗೂ ಅರವಿಂದ್ ಲಿಂಬಾವಳಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ.
ಯಡಿಯೂರಪ್ಪ ದೆಹಲಿಯಿಂದ ವಾಪಸ್, ಲಿಂಬಾವಳಿಗೆ ಹೈಕಮಾಂಡ್ ಬುಲಾವ್
ಈ ಹಿಂದೆಯೇ ಉಮೇಶ್ ಕತ್ತಿ ಅಭಿವೃದ್ಧಿ ತಾರತಮ್ಯವನ್ನು ನೀಗಿಸಲು ಉತ್ತರ ಕರ್ನಾಟಕದ 13 ಜಿಲ್ಲೆಗಳನ್ನು ಸ್ವತಂತ್ರ್ಯ ರಾಜ್ಯವನ್ನಾಗಿ ಘೋಷಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಬೇಡಿಕೆ ಕಾಲಾನಂತರದಲ್ಲಿ ತಣ್ಣಗಾಗಿತ್ತು. ಆದರೆ, ಇದೀಗ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷೆಯಾಗಿದ್ದ ಅವರಿಗೆ ಬಿಜೆಪಿ ನಾಯಕರು ಸ್ಥಾನ ನೀಡಿಲ್ಲ.
ಸಚಿವ ಸ್ಥಾನದಿಂದ ವಂಚಿತರಾದ ಅನೇಕ ನಾಯಕರು ಈಗಾಗಲೇ ಅಪಸ್ವರ ಎತ್ತಿದ್ದಾರೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ ಪ್ರಬಲ ನಾಯಕ ಉಮೇಶ್ ಕತ್ತಿ ಪಕ್ಷವನ್ನೇ ಒಡೆಯುವ ಬೆದರಿಕೆ ಒಡ್ಡಿದ್ದರು.
ಇನ್ನೊಂದು ಕಡೆ ಉಮೇಶ್ ಕತ್ತಿ ರಮೇಶ್ ಜಾರಕಿಹೊಳಿಯ ಪಾತ್ರವನ್ನು ಬಿಜೆಪಿಯಲ್ಲಿ ನಿಭಾಯಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಒತ್ತಡಕ್ಕೆ ಮಣಿದು ಬಿಜೆಪಿ ನಾಯಕರು ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸೂಚನೆ?
ಸಚಿವ ಲಕ್ಷ್ಮಣ ಸವದಿ ಕೂಡ ಈ ಕುರಿತು ಮಾತನಾಡಿದ್ದು, ಪಕ್ಷದಲ್ಲಿ ಎಲ್ಲರಿಗೂ ಸಚಿವರಾಗುವ ಅರ್ಹತೆ ಇರುತ್ತದೆ ಆದರೆ ಸಚಿವ ಸ್ಥಾನ ಕೈತಪ್ಪಿದಾಗ ಭಿನ್ನಾಭಿಪ್ರಾಯ ಮೂಡುವುದು ಸಹಜ, ಮುಂದಿನ ದಿನಗಳಲ್ಲಿ ಸಚಿವಸ್ಥಾನದಿಂದ ವಂಚಿತರಾದವರಿಗೆ ಸ್ಥಾನ ಸಿಗಲಿದೆ ಎಂದು ಹೇಳಿದ್ದರು. ಇದು ಹಲವು ಅನುಮಾನಗಳಿಗೆ ಪುಷ್ಠಿ ನೀಡಿದಂತಾಗಿತ್ತು.