ಡ್ರಗ್ಸ್ ತಗೊಂಡಿಲ್ಲ ಸ್ನೇಹತರು ಮಿಕ್ಸ್ ಮಾಡಿರ್ಬೇಕು- ಕತೆ ಕಟ್ಟಿದ ನಟ
ಬೆಂಗಳೂರು, ಜೂನ್ 14: ಸ್ಟಾರ್ ಹೋಟೆಲ್ನಲ್ಲಿ ನಡೆದಿದ್ದ ಪಾರ್ಟಿಯ ವೇಳೆಯಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದ ನಟ ಸಿದ್ದಾಂತ್ ಕಪೂರ್ ಠಾಣಾ ಜಾಮೀನಿನ ಮೇರೆಗೆ ಹಲಸೂರು ಪೊಲೀಸರು ಜೂನ್ 13ರ ರಾತ್ರಿಯೇ ಬಿಟ್ಟು ಕಳುಹಿಸಿದ್ದರು. ವಿಚಾರಣೆ ಹಾಜರಾಗುವಂತೆ ಇಂದು (ಜೂನ್ 14) ನೀಡಿದ್ದ ನೋಟಿಸ್ಗೆ ಕಪೂರ್ ಹಾಜರಾಗಿದ್ದಾನೆ. ಹಲಸೂರು ಪೊಲೀಸರು ರೇವ್ ಪಾರ್ಟಿ ಆಯೋಜಕರು ಸೇರಿ ಹೊಟೇಲ್ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಈವೆಂಟ್ ಕಂಪೆನಿಗಳಾಗಿರುವ ಇಂಡಿವೈಬ್, ಎಲ್ಎ ಪ್ರೊಡಕ್ಷನ್ ಕಂಪೆನಿಯ ಪ್ರತಿನಿಧಿಗಳು ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ. ಎಷ್ಟು ವರ್ಷಗಳಿಂದ ಹೈ-ಎಂಡ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಈ ಹಿಂದೆ ಯಾವ ಯಾವ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಿದ್ದರು. ಡ್ರಗ್ಸ್ ಪೆಡ್ಲಿಂಗ್ ಮಾಡಿದ್ದು ಯಾರು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಲು ಸಿದ್ದತೆ ನಡೆಸಿಕೊಂಡಿದ್ದಾರೆ.
ಡ್ರಗ್ಸ್ ಕೇಸ್: ಸಿದ್ದಾಂತ್ ಕಪೂರ್ ಸೇರಿದಂತೆ ಐವರಿಗೆ ಜಾಮೀನು
ಸಿದ್ದಾಂತ್ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ ಸೋಮವಾರ ಬಂಧನಕ್ಕೊಳಗಾಗಿದ್ದರು. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ದಾಳಿ ನಡೆಸಿದ್ದರು. ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು.
ಬೆಂಗಳೂರಿನಲ್ಲಿ ನನಗೆ ಹಲವಾರು ಸ್ನೇಹಿತರಾಗಿದ್ದಾರೆ
ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡು ಬಂಧನಕ್ಕೆ ಒಳಗಾಗಿದ್ದ ಸಿದ್ದಾಂತ್ ಕಪೂರ್ ಜೂನ್13ರಂದು ನಡೆದ ಸುದೀರ್ಘಾವಧಿ ವಿಚಾರಣೆಯಲ್ಲಿ ಹಲವು ಸಂಗತಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬೆಂಗಳೂರಿನಲ್ಲಿ ನನಗೆ ಹಲವಾರು ಸ್ನೇಹಿತರಾಗಿದ್ದಾರೆ. ಈ ಹಿಂದೆ ನಗರದಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಡಿಜೆಯಾಗಿ ಭಾಗಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ. ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸಿ ಡ್ರಗ್ಸ್ ಹೇಗೆ ಬಂತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಪಾರ್ಟಿಯಲ್ಲಿದ್ದ ಸ್ನೇಹಿತರು ನೀರಿನಲ್ಲಿ ಅಥವಾ ಸಿಗರೇಟಿನಲ್ಲಿ ಡ್ರಗ್ಸ್ ಯಾರೋ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನ ಅರಿಯದೆ ನೀರು ಕುಡಿದು ಸಿಗರೇಟು ಸೇವನೆ ಮಾಡಿದ್ದೆ ಅಷ್ಟೇ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಐದು ಮೊಬೈಲ್ ಜಪ್ತಿ ಎಫ್ಎಸ್ಎಲ್ಗೆ ರವಾನೆ
ಹಲಸೂರು ಪೊಲೀಸರು ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಬಂಧಿಸಿದ್ದರು. ಇವರಿಂದ ಒಟ್ಟು ಐದು ಮೊಬೈಲ್ಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಆಯಾಮದಡಿ ತಾಂತ್ರಿಕವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಜಪ್ತಿ ಮಾಡಿಕೊಂಡಿರುವ ಐದು ಮೊಬೈಲ್ಗಳನ್ನು ರಿಟ್ರೈವ್ ಮಾಡಲು ಎಫ್ಎಸ್ಎಲ್ ಕಳುಹಿಸಲಾಗಿದೆ. ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿ ಇದ್ದಾರಾ? ಎಂಬುದರ ಬಗ್ಗೆ ವರದಿ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಗೋವಾ, ಕೇರಳ ಹಾಗೂ ಮುಂಬೈ ನಡೆದಿರುವ ಡ್ರಗ್ಸ್ ಪಾರ್ಟಿಯಲ್ಲಿ ಈ ಹಿಂದೆ ಭಾಗಿಯಾಗಿದ್ದಾನ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಉದ್ಯೋಗವೇನು?
ಸಿದ್ದಾಂತ್ ಕಪೂರ್ ನಟನಾಗಿದ್ದು ಡಿಜೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ. ಅಖಿಲ್ ಸೋನಿ ಎಂಬಾತ ಮೈಂಡ್ ಫೈಯರ್ ಸಲ್ಯೂಷನ್ನಲ್ಲಿ ಮ್ಯಾನೇಜರ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಹರ್ಜೋತ್ ಸಿಂಗ್ ಲಾಜಿಸ್ಟಿಕ್ ಸ್ಟಾರ್ಟ್ ಅಪ್ ಕಂಪನಿಯಲ್ಲಿ ಆಪರೇಷನ್ನಲ್ ಮುಖ್ಯಸ್ಥರಾಗಿದ್ದಾನೆ. ಹನಿ ರಫೀಕ್ ಡಿಜಿಟಲ್ ಮಾರ್ಕೆಟಿಂಗ್ನಲ್ಲಿದ್ದಾನೆ. ಅಖಿಲ್ ಎಂಬಾತ ಫ್ರೀ ಲ್ಯಾನ್ಸಾರ್ನಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವರೆಲ್ಲರು ಪರಸ್ಪರ ಸಂಪರ್ಕದಲ್ಲಿದ್ದವರೇನಾ ಎಂಬುದು ಮೊಬೈಲ್ ರಿಟ್ರೀವ್ನಿಂದ ತಿಳಿದುಬರುವ ಸಾಧ್ಯತೆಗಳಿವೆ.
ಸೋಮವಾರ ರಾತ್ರಿ ವೇಳೆಗೆ ಠಾಣೆ ಜಾಮೀನು
ಸಿದ್ದಾಂತ್ ಸೇರಿದಂತೆ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕಾನೂನಿನ ಪ್ರಕಾರ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸಿ, ಡ್ರಗ್ಸ್ ಸೇವನೆ ಬಗ್ಗೆ ದೃಢಪಟ್ಟ ಬಳಿಕ ಠಾಣೆಗೆ ಕರೆದೊಯ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು. ಸೋಮವಾರ ರಾತ್ರಿ ವೇಳೆಗೆ ಠಾಣೆ ಜಾಮೀನು ಸಿಕ್ಕಿದ್ದು, ಸಿದ್ಧಾಂತ್ ಕಪೂರ್ ಹೊರ ಬಂದಿದ್ದಾರೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು ಎಂದು ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.