ಉಡುಪಿ ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್ ಪ್ರಕರಣ; ಸಿಓಡಿ ತನಿಖೆಗೆ ಅರಗ ಜ್ಞಾನೇಂದ್ರ ಸೂಚನೆ
ಉಡುಪಿ, ಜನವರಿ 1: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ಕುಟುಂಬ ದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣದ ಬಗ್ಗೆ ಸಿಓಡಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶನಿವಾರ ಕೋಟತಟ್ಟು ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಅರಗ ಜ್ಞಾನೇಂದ್ರ, ಸಂತ್ರಸ್ತರಿಗೆ ಎರಡು ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದರು. ಇದೇ ವೇಳೆ ಪೊಲೀಸ್ ಲಾಠಿ ಚಾರ್ಜ್ ನಲ್ಲಿ ಗಾಯಗೊಂಡವರ ಕುಟುಂಬಕ್ಕೆ 50,000 ರೂಪಾಯಿ ಪರಿಹಾರ ವಿತರಿಸಿದರು.
ಕೊರಗ ಕಾಲೋನಿಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ: ಲಾಠಿ ಬೀಸಿದ ಪೊಲೀಸರು
ಇಡೀ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ಅರಗ ಜ್ಞಾನೇಂದ್ರ, ಕೊರಗ ಕುಟುಂಬದ ವೈವಾಹಿಕ ಸಮಾರಂಭದಲ್ಲಿ ಲಾಠಿಚಾರ್ಜ್ ನಡೆಸಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೇಸ್ ವಾಪಸ್:
ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಕುಟುಂಬ ಸದಸ್ಯರ ವಿರುದ್ಧ ದಾಖಲಾದ ಪೊಲೀಸ್ ಮೊಕದ್ದಮೆಯನ್ನೂ ಹಿಂಪಡೆಯುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇದೇ ವೇಳೆ ರಾಜ್ಯ ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಏನಿತು ಪ್ರಕರಣದ ಹಿನ್ನೆಲೆ:
ಕೊರಗ ಕಾಲೊನಿಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ ಮಾಡಿದ ಕಾರಣಕ್ಕಾಗಿ ಪೊಲೀಸರು ಲಾಠಿ ಚಾರ್ಚ್ ಮಾಡಿದ ಘಟನೆ ಈಗ ತೀವ್ರ ಸ್ವರೂಪ ಪಡೆಯಿತು. ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೊನಿಯಲ್ಲಿ ಸೋಮವಾರ ರಾತ್ರಿ ಕೊರಗ ಸಮುದಾಯಕ್ಕೆ ಸೇರಿದ ರಾಜೇಶ್ ಎಂಬುವವರ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಮೆಹಂದಿಗೆ ಬಂದವರು, ಡಿಜೆ ಹಾಕಿ ಕುಣಿಯುತ್ತಿದ್ದರು. ಈ ವೇಳೆ ಡಿಜೆ ಸದ್ದು ಜೋರಾಗಿ ಪ್ಲೇ ಮಾಡಿದನ್ನೇ ನೆಪವಾಗಿ ಇಟ್ಟುಕೊಂಡು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ ಕೋಟ ಪೊಲೀಸರು ಮದುಮಗ ರಾಜೇಶ್ ಸೇರಿದಂತೆ ಎಲ್ಲರಿಗೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಎಸ್ಐ ಸಂತೋಷ್ ನಡೆಗೆ ಆಕ್ರೋಶ:
ಇನ್ನು ಘಟನೆ ನಡೆದ ಸ್ಥಳದಲ್ಲಿ ಕೊರಗ ಸಮುದಾಯದವರು ಸೇರಿದಂತೆ ನೂರಾರು ಮಂದಿ ಸೇರಿ, ಕೋಟ ಎಸ್ಐ ಸಂತೋಷ್ ನಡೆಯನ್ನು ಖಂಡಿಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಭೇಟಿ ಸೂಕ್ತ ತನಿಖೆ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ. ಇನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವರದಿ ಬಂದು ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿದೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿಜೆ ಸದ್ದು ಜೋರಾಗಿ ಹಾಕಿದ ಹಿನ್ನಲೆಯಲ್ಲಿ ಸ್ಥಳೀಯರು ದೂರು ನೀಡಿದ್ದರು. ಈ ವೇಳೆ ಪೊಲೀಸರು ಸ್ಥಳಕ್ಕೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಸ್ಥಳದಿಂದ ತೆರಳಿದ ಬಳಿಕ ಮತ್ತೆ ಜೋರಾಗಿ ಡಿಜೆ ಹಾಕಿದ್ದಾರೆ. ಸ್ಥಳೀಯರು 112ಗೆ ಕರೆಮಾಡಿ ದೂರು ನೀಡಿದ್ದಾರೆ. ಲಾಠಿ ಚಾರ್ಚ್ ಆದ ಬಗ್ಗೆ ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದರು.
Recommended Video