ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಇಬ್ಬರು ಮಹಿಳೆಯರು ಬಲಿ
ಬೆಂಗಳೂರು, ಮೇ.27: ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ ಸೃಷ್ಟಿಸಿದ ಅವಾಂತರಗಳಿಂದ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ.
ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಲಕ್ಷ್ಮಿದೇವಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಬಿದ್ದು 22 ವರ್ಷದ ಶಿಲ್ಪಾ ಎಂಬ ಯುವತಿ ಪ್ರಾಣ ಬಿಟ್ಟಿದ್ದಾರೆ. ಇತ್ತೀಚಿಗಷ್ಟೇ ಪದವಿ ಪೂರ್ಣಗೊಳಿಸಿದ್ದ ಶಿಲ್ಪಾ ಅವರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ಭಾರಿ ಮಳೆ; ಇನ್ನೂ ಒಂದು ವಾರ ಮಳೆ ಮುನ್ಸೂಚನೆ
ಇನ್ನೊಂದೆಡೆ ಸಂಜೆ ಆಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಮರದ ರಂಬೆ ಬಿದ್ದು ಸ್ಥಳದಲ್ಲೇ 45 ವರ್ಷದ ಹೇಮಾ ಎಂಬ ಮಹಿಳೆ ಸಾವನ್ನಪ್ಪಿರುವ ಘಟನೆ ಬೊಮ್ಮನಹಳ್ಳಿಯ ಬೇಗೂರಿನಲ್ಲಿ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ ನೆಲಕಚ್ಚಿದ 60ಕ್ಕೂ ಹೆಚ್ಚು ಮರಗಳು:
ಕಳೆದ ಮಂಗಳವಾರ ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆ ಭಾರೀ ಅವಾಂತರಗಳನ್ನೇ ಸೃಷ್ಟಿಸಿದೆ. ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆಗಳಲ್ಲಿ 60ಕ್ಕೂ ಹೆಚ್ಚು ಮರಗಳು ನೆಲ ಕಚ್ಚಿವೆ. ಚಾಮರಾಜಪೇಟೆ, ಜಯನಗರ, ಶ್ರೀನಗರ, ಮೈಸೂರು ರಸ್ತೆ, ನಾಯ್ಡು ಹಳ್ಳಿ, ಯಶವಂತಪುರ, ಈಜಿಪುರ, ಹನುಮಂತನಗರ, ಬಸವನಗುಡಿ, ಜೆಸಿ ರಸ್ತೆ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಮತ್ತು ಅಂಡರ್ಪಾಸ್ಗಳೆಲ್ಲ ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಬಿಸುವಂತಾಗಿತ್ತು.