ಚಿತ್ರಗಳು : ಸೂರ್ಯ ಕಿರಣ್ ವಿಮಾನಗಳ ಡಿಕ್ಕಿ, ಪೈಲೆಟ್ ಸಾವು
ಬೆಂಗಳೂರು, ಫೆಬ್ರವರಿ 19 : ಬೆಂಗಳೂರಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆಯಾಗುವ ಒಂದು ದಿನ ಮೊದಲು ದುರಂತವೊಂದು ನಡೆದಿದೆ. ತರಬೇತಿ ವೇಳೆ ಎರಡು ವಿಮಾನಗಳು ಡಿಕ್ಕಿಯಾಗಿದ್ದು, ಒಬ್ಬ ಪೈಲೆಟ್ ಮೃತಪಟ್ಟಿದ್ದಾರೆ.
ಬುಧವಾರದಿಂದ ಏರೋ ಇಂಡಿಯಾ ವೈಮಾನಿನ ಪ್ರದರ್ಶನ 2019 ಆರಂಭವಾಗಲಿದೆ. ಮಂಗಳವಾರ ತರಬೇತಿ ನಡೆಸುವ ವೇಳೆ ಎರಡು ಸೂರ್ಯ ಕಿರಣ್ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಪೈಲೆಟ್ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಏರ್ ಶೋ : ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಸೂರ್ಯಕಿರಣ್ ವಿಮಾನ
ಎರಡು ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಇಬ್ಬರು ಪೈಲೆಟ್ಗಳಿದ್ದರು. ಸ್ವ್ಕಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್, ವಿಂಗ್ ಕಮಾಂಡರ್ ವಿಜಯ್ ಶೇಲ್ಕೆ, ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ (36) ವಿಮಾನದಲ್ಲಿದ್ದರು. ಇವರಲ್ಲಿ ಸಾಹಿಲ್ ಗಾಂಧಿ ಮೃತಪಟ್ಟಿದ್ದಾರೆ.
ಸೂರ್ಯ ಕಿರಣ್ ವಿಮಾನಗಳ ಡಿಕ್ಕಿ, ಪೈಲೆಟ್ ಸಾವು
ಏರೋ ಇಂಡಿಯಾ ವೈಮಾನಿನ ಪ್ರದರ್ಶನ 2019ಕ್ಕೆ ಬುಧವಾರ ಯಲಹಂಕ ವಾಯುನೆಲೆಯಲ್ಲಿ ಚಾಲನೆ ಸಿಗಲಿದೆ. ಆದರೆ, ಉದ್ಘಾಟನೆಗೂ ಒಂದು ದಿನ ಮೊದಲು ಈ ದುರ್ಘಟನೆ ಸಂಭವಿಸಿದೆ. ಪರಸ್ಪರ ಡಿಕ್ಕಿಯಾಗಲು ಕಾರಣವೇನು? ಎಂದು ತನಿಖೆ ಆರಂಭಿಸಲಾಗಿದೆ.
ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ
ತರಬೇತಿ ವೇಳೆ ದುರಂತ
ಫೆ.19ರ ಮಂಗಳವಾರ ಬೆಳಗ್ಗೆ ಯಲಹಂಕ ವಾಯುನೆಲೆ ಬಳಿ ಸೂರ್ಯ ಕಿರಣ್ ತಂಡ ತಾಲೀಮು ಆರಂಭಿಸಿತ್ತು. ಗಂಟಿಗಾನಹಳ್ಳಿ ಬಳಿ ವಿಮಾನ ಹಾರಾಟ ನಡೆಸುವಾಗ ಡಿಕ್ಕಿಯಾಗಿದ್ದು, ಎರಡೂ ವಿಮಾನಗಳು ನೆಲಕ್ಕೆ ಬಿದ್ದಿವೆ.
ಮನೆಯ ಮೇಲೆ ಬಿದ್ದ ವಿಮಾನ
ವಿಮಾನಗಳು ಡಿಕ್ಕಿಯಾಗುತ್ತಿದ್ದಂತೆ ಇಬ್ಬರು ಪೈಲೆಟ್ಗಳು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಜಿಗಿದಿದ್ದಾರೆ. ಒಂದು ವಿಮಾನದಲ್ಲಿದ್ದ ಮತ್ತೊಬ್ಬರು ಸಹ ಪೈಲೆಟ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರು ಪೈಲೆಟ್ಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ಬಳಿಕ ವಿಮಾನ ಮನೆಯ ಮೇಲೆ ಬಿದ್ದಿದೆ.
ಬೆಂಕಿ ನಂದಿಸಿದ ಸಿಬ್ಬಂದಿ
ಡಿಕ್ಕಿ ಬಳಿಕ ನೆಲಕ್ಕೆ ಬಿದ್ದ ವಿಮಾನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ವಿಮಾನಗಳ ಅವಶೇಷಗಳನ್ನು ತೆರವು ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಏರ್ ಶೋಗೆ ಸಕಲ ಸಿದ್ಧತೆ
ಯಲಹಂಕ ವಾಯುನೆಲೆಯಲ್ಲಿ ಫೆ.20ರ ಬುಧವಾರದಿಂದ ಏರ್ ಶೋ 2019 ಆರಂಭವಾಗಲಿದೆ. ಏರ್ ಶೋಗೆ ಎಲ್ಲಾ ರೀತಿಯ ತಯಾರಿ ಆರಂಭವಾಗಿದೆ. ಏರ್ ಶೋ ಅಂಗವಾಗಿ ತರಬೇತಿ ನಡೆಸುವಾಗ ವಿಮಾನಗಳು ಡಿಕ್ಕಿಯಾಗಿವೆ.