ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರ ಸೆರೆ , 6 ಕೆ.ಜಿ. ಚಿನ್ನ ಪತ್ತೆ
ಬೆಂಗಳೂರು, ನವೆಂಭರ್ 21: ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ವಂಚಿಸಿ ಚಿನ್ನ ಸ್ಮಗ್ಲಿಂಗ್ ಮಾಡುವ ದಂಧೆಯನ್ನು ಇಬ್ಬರು ಪೊಲೀಸ್ ಪೇದೆಗಳು ಬಯಲಿಗೆ ಎಳೆದಿದ್ದಾರೆ. ಕರ್ತವ್ಯ ನಿಷ್ಠೆ ಮೆರೆದ ಪೊಲೀಸರು ತೆರಿಗೆ ವಂಚಿಸಿ ರವಾನಿಸುತ್ತಿದ್ದ ಮೂರು ಕೋಟಿ ಮೌಲ್ಯದ 6 ಕೆ.ಜಿ. ಚಿನ್ನದ ಆಭರಣಗಳನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಈ ಕರ್ತವ್ಯ ನಿಷ್ಠೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
Recommended Video
ಸಾಮಾನ್ಯವಾಗಿ ಪೊಲೀಸರನ್ನು ರಾತ್ರಿ ಪಾಳಿಗೆ ನಿಯೋಜಿಸಲಾಗುತ್ತದೆ. ರಾತ್ರಿ ಪಾಳಿಯಲ್ಲಿರುವ ಪೊಲೀಸರು ಜೀಪಿನಲ್ಲಿ ಕೂತು ಕಾಲ ಕಳೆಯುವುದೇ ಜಾಸ್ತಿ. ಆದ್ರೆ ಕೆ.ಆರ್. ಮಾರ್ಕೆಟ್ ಠಾಣೆಯ ಹನುಮಂತ ಮತ್ತು ಆನಂದ ಹೆಸರಿನ ಪೇದೆಗಳಿಬ್ಬರು ತಮ್ಮ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಚಿನ್ನದ ಸ್ಮಗ್ಲಿಂಗ್ ಜಾಲ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾತ್ರಿ ಪಾಳಿಗೆ ನಿಯೋಜಿಸಿದ್ದ ಹನುಮಂತ ಮತ್ತು ಆನಂದ ಅವರು ದೊಡ್ಡಪೇಟೆ ವೃತ್ತದಲ್ಲಿ ಅನುಮಾನಸ್ಪದವಾಗಿ ಚಲಿಸುತ್ತಿದ್ದ ಹೋಡಾ ಆಕ್ಟೀವಾ ಬೈಕ್ ನಿಲ್ಲಿಸಿದ್ದಾರೆ.
ಮುಂಬಯಿ ಮೂಲದ ದಳಪತಿ ಸಿಂಗ್ ಮತ್ತು ರಾಜಸ್ಥಾನ ಮೂಲದ ವಿಕಾಸ್ ಎಂಬುವರನ್ನು ಪ್ರಶ್ನಿಸಿದಾಗ, ಶಿವಾಜಿನಗರ ಗೋಲ್ಡ್ ಪ್ಲೇಟೆಡ್ ಆಭರಣ ಎಂದು ದಿಕ್ಕು ತಪ್ಪಿಸಿದ್ದಾರೆ. ಆದ್ರೆ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಆರು ಕೆ.ಜಿ. ಅಸಲಿ ಚಿನ್ನ ಎಂಬುದು ಗೊತ್ತಾಗಿದೆ.ಪೊಲೀಸರು ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ದಾಖಲೆಗಳನ್ನು ಒದಗಿಸಿದ ದಳಪತಿ ಸಿಂಗ್ ಮತ್ತು ವಿಕಾಸ್ ತಡಬಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಶಂಕಿತರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಶಿವಾಜಿನಗರದ ಗೋಲ್ಡ್ ಪ್ಲೇಟೆಡ್ ಚಿನ್ನ ಅಲ್ಲ. ಅದು ಅಸಲಿ ಚಿನ್ನ ಎಂಬುದು ಗೊತ್ತಾಗಿದ್ದು, ತೆರಿಗೆ ವಂಚಿಸಿ ಚಿನ್ನವನ್ನು ಮುಂಬಯಿನಿಂದ ಬೆಂಗಳೂರಿಗೆ ತರಿಸಿದ್ದು ಎಂಬ ಸತ್ಯ ಗೊತ್ತಾಗಿದೆ. ಆರೋಪಿಗಳಾದ ದಳಪತಿ ಸಿಂಗ್ ಮತ್ತು ವಿಕಾಸ್ ಅವರನ್ನು ಬಂಧಿಸಿದ್ದು, ಆರು ಕೆ.ಜಿ. ಚಿನ್ನದ ಆರಭಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಚಿನ್ನ ಖರೀದಿ ಮಾಡಿದರೆ ಶೇ. 30 ರಷ್ಟು ತೆರಿಗೆ ಕಟ್ಟಬೇಕು. ಆದರೆ ತೆರಿಗೆ ವಂಚಿಸುವ ಸಲುವಾಗಿ ಚಿನ್ನವನ್ನು ಕೊರಿಯರ್ ಮೂಲಕ ತರಿಸಿ ಬೆಂಗಳೂರಿನ ಜ್ಯುವೆಲರಿ ಶಾಪ್ ಗೆ ಸಾಗಿಸುತ್ತಿದ್ದ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಬರೋಬ್ಬರಿ 65 ನಕ್ಲೇಸ್, 7 ಜತೆ ಚಿನ್ನದ ಬಳೆ, 150 ಗ್ರಾಂ ಚಿನ್ನದ ಓಲೆ, ಒಟ್ಟು 6 ಕೆ.ಜಿ. ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಈ ಚಿನ್ನ ನಗರ್ತಪೇಟೆಯ ಎಸ್.ಎಸ್. ಜ್ಯುವೆಲರಿಗೆ ಸೇರಿದ್ದ ಆಭರಣ ಎಂದು ಹೇಳಿದ್ದು, ಅದರ ಮಾಲೀಕರನ್ನು ವಿಚಾರಣೆ ನಡೆಸಿದಾಗ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ತೆರಿಗೆ ವಂಚಿಸಿ ಮುಂಬಯಿನಿಂದ ಚಿನ್ನವನ್ನು ತರಿಸುತ್ತಿದ್ದ ಜ್ಯುವೆಲರಿ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ತೆರಿಗೆ ವಂಚಿಸಿ ಮಾರಾಟ ಮಾಡುವ ಸಲುವಾಗಿ ಮುಂಬಯಿನಿಂದ ಕೊರಿಯರ್ ಮೂಲಕ ತರಿಸಿರುವ ಸಂಗತಿ ಗೊತ್ತಾಗಿದ್ದು, ತೆರಿಗೆ ವಂಚಿಸಿ ಚಿನ್ನ ತರಿಸಿ ಮಾರಾಟ ಮಾಡುವ ಜಾಲದ ಪತ್ತೆಗೆ ಕೆ.ಆರ್. ಮಾರ್ಕೆಟ್ ಪೊಲೀಸರು ಮುಂದಾಗಿದ್ದಾರೆ. ಚಿನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿಗಳಾದ ದಳಪತ್ ಸಿಂಗ್ ಮತ್ತು ವಿಕಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತೆರಿಗೆ ವಂಚಿಸಿ ಚಿನ್ನದ ಅಕ್ರಮ ಸಾಗಣೆ ಮಾಡಿದರೆ ಒಂದು ಕೋಟಿ ಮೌಲ್ಯದ ಚಿನ್ನಾಭರಣಕ್ಕೆ 70 ಲಕ್ಷ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ವಂಚಿಸಿ ಚಿನ್ನ ಸ್ಮಗ್ಲಿಂಗ್ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸಹ ತನಿಖೆ ಮಾಡಲಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪೊಲೀಸರ ಕರ್ತವ್ಯ ನಿಷ್ಠೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.