ಮಳೆಗೆ ಇಬ್ಬರು ಕಾರ್ಮಿಕರು ಬಲಿ - ನಿರ್ಲಕ್ಷ್ಯ ತೋರಿದ ನಾಲ್ವರ ವಿರುದ್ದ ಎಫ್ಐಆರ್
ಬೆಂಗಳೂರು , ಮೇ18: ಕಾವೇರಿ ಐದನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಪೈಪ್ ಲೈನ್ ನಿರ್ಮಾಣ ಕಾರ್ಯದಲ್ಲಿ ತೊಡಿದ್ದ ಕಾರ್ಮಿಕರು ಅತೀ ಹೆಚ್ಚು ನೀರು ಹರಿದ ಪರಿಣಾಮ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಮೂವರು ಕಾರ್ಮಿಕರು ಕೊಚ್ಚಿ ಹೋಗುವ ವೇಳೆ ಓರ್ವನನ್ನು ರಕ್ಷಿಸಲಾಗಿದೆ.
ಉಲ್ಲಾಳ ಉಪನಗರದ ಸಮೀಪದಲ್ಲಿ ನಡೆದಿರುವ ಘಟನೆಯಲ್ಲಿ ಬಿಹಾರ ಮೂಲದ ದೇವದತ್ತ್, ಉತ್ತರ ಪ್ರದೇಶ ಮೂಲದ ಅಂಕಿತ್ ಕುಮಾರ್ ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಇಬ್ಬರು ಕಾರ್ಮಿಕರು ಕಾವೇರಿ ಐದನೇ ಹಂತದ ಕಾಮಗಾರಿಯಲ್ಲಿ ಹಲವಾರು ತಿಂಗಳಿಂದ ಕೆಲಸವನ್ನು ಮಾಡುತ್ತಿದ್ದರು. ನಿನ್ನೆ ಪೈಪ್ ಲೈನ್ ಅಳವಡಿಸುವ ವೇಳೆ ಭಾರೀ ಮಳೆ ಬಂದು ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಾವೇರಿ ಐದನೇ ಹಂತದ ಕಾಮಗಾರಿಯನ್ನು ನಡೆಸುತ್ತಿದ್ದ ವೇಳೆ ನಡೆದ ಅನಾಹುತವಾಗಿದ್ದರಿಂದ ಉತ್ತರ ಪ್ರದೇಶ ಮೂಲದ ತ್ರಿಲೋಕಿ ಎಂಬಾತ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ದೂರಿನ ಅನ್ವಯ ಪ್ರೋಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಇಂಜಿನಿಯರ್ ಹರೀಶ್ ರೆಡ್ಡಿ, ಹೆಚ್ ಆರ್ ಮ್ಯಾನೇಜರ್ ನರಸಿಂಹ ರಾಜು, ಕಾರ್ಮಿಕರನ್ನು ಕಳುಹಿಸುವ ಮನೋಜ್ ಯಾದವ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 304(a) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಉತ್ತರ ಪ್ರದೇಶ ಮೂಲದ ತ್ರಿಲೋಕಿಯಿಂದ ಪ್ರಕರಣದ ವಿವರಣೆ
ಕಾರ್ಮಿಕರು ಸಂಜೆ ಆರು ಗಂಟೆಗೆ ಕೆಲಸ ಮುಗಿಸಿ ಹೊರಟು ಹೋದರು. ಸೈಟ್ ಇಂಜಿನಿಯರ್ ಹರೀಶ್ ರೆಡ್ಡಿ, ಪ್ರಾಜೆಕ್ಟ್ ಮ್ಯಾನೇಜರ್ ಶಿವಕುಮಾರ್, ಹೆಚ್ ಆರ್ ಮ್ಯಾನೇಜರ್ ನರಸಿಂಹ ರಾಜು, ಲೇಬರ್ ಕಂಟ್ರಾಕ್ಟರ್ ಮನೋಜ್ ಯಾದವ್ ರವರು ಕೆಲಸ ಮುಗಿಸುವಂತೆ ಹೇಳಿ ಕಾವೇರಿ ನೀರಿನ ಪೈಪ್ ನ ಮ್ಯಾನ್ ಹೋಲ್ ನಲ್ಲಿ ದೇವ್ ಭರತ್ ಮತ್ತು , ಕುಶ್ವಾಸ್ , ಮತ್ತು ಅಂಕಿತ್ ಕುಮಾರ್ರನ್ನು ಯಾವುದೇ ಏಣಿಯ ಸಹಾಯವಿಲ್ಲದೇ ಕೆಲಕ್ಕೆ ಇಳಿಸಿದ್ದರು. ಮಳೆ ಬರುತ್ತಿದ್ದರಿಂದ ನಾನು ಬೇಕಾದ ಸಲಕರಣೆಯನ್ನು ಕೊಡುತ್ತ ಮೇಲಿದ್ದೆ. ಈ ವೇಳೆ ಜೋರಾದ ಮಳೆ ಬಂದು ಪೈಪ್ ಅಳವಡಿಕೆಗೆ ತೋಡಿದ್ದ ಸುಮಾರು ಆರು ಅಡಿಯಷ್ಟು ಹಳ್ಳದಲ್ಲಿ ನೀರು ತುಂಬಿಕೊಳ್ಳುತ್ತಾ ಹೋಯ್ತು. ನಾನು ಮೇಲೆ ಬರಲು ಸೂಚಿಸಿದೆ ಆದರೆ ಮೇಲೆ ಬರಲು ಸಾಧ್ಯವಾಗಲಿಲ್ಲ. ನನ್ನೊಬ್ಬನಿಂದ ಎಲ್ಲರನ್ನು ಎಳೆದು ರಕ್ಷಿಸಲು ಸಾಧ್ಯವಾಗಲಿಲ್ಲ. ಏಣಿ ಇಲ್ಲದಿರೋದು ಸಮಸ್ಯೆಯಾಯಿತು. ಮೇಸ್ತ್ರಿಗೆ ಕರೆ ಮಾಡಲು ನನ್ನ ಬಳಿ ಫೋನ್ ಕೂಡ ಇರಲಿಲ್ಲ ಎಂದು ದೂರಿನಲ್ಲಿ ತ್ರಿಲೋಕಿ ಉಲ್ಲೇಖಿಸಿದ್ದಾನೆ.
ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ
ಉಲ್ಲಾಳದಲ್ಲಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವುದಕ್ಕೆ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
Recommended Video