ಸುಳ್ಳು ಕೇಸ್ ಬೆದರಿಕೆ: ಟ್ರಾಫಿಕ್ ಇನ್ಸ್ಪೆಕ್ಟರ್ ಸಸ್ಪೆಂಡ್
ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಕೆಂಗೇರಿ ಸಂಚಾರ ಠಾಣೆ ಇನ್ಸ್ಪೆಕ್ಟರ್ ನಾಗೇಶ್ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಯ್ಯ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ.
ಏನಿದು ಪ್ರಕರಣ? ಒಂದು ತಿಂಗಳ ಹಿಂದೆ ವೈದ್ಯ ಕಿರಣ್ ಎಂಬವರಿಗೆ ಸೇರಿದ್ದ ಕಾರನ್ನು ಅವರ ಅವರ ಭಾಮೈದುನ ಸುನೀಲ್ ಚಲಾಯಿಸಿಕೊಂಡು ಹೋಗಿ ಜ್ಞಾನಭಾರತಿ ಸಮೀಪ ಬೈಕ್ಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಕಾರಿನ ನಂಬರ್ ಬರೆದುಕೊಂಡು ಕೆಂಗೇರಿ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಿರಣ್ ಅವರಲ್ಲಿ ಸುನೀಲ್ ಟ್ರಾಕ್ಟರ್ಗೆ ಡಿಕ್ಕಿ ಹೊಡೆದು ಕಾರಿಗೆ ಹಾನಿಯಾಗಿದೆ ಎಂದು ಹೇಳಿದ್ದರು. ಸುನೀಲ್ ಮಾತನ್ನು ನಂಬಿ ಕಿರಣ್ ಅವರು ಕಾರನ್ನು ರಿಪೇರಿ ಮಾಡಲು ವಿಮಾ ಹಣ ಪಡೆಯಲು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರಲ್ಲಿ ದೂರು ದಾಖಲಿಸಿದ್ದರು.[ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?]
ಇದಾದ ಕೆಲ ದಿನಗಳ ಬಳಿಕ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂಗೆರಿ ಪೊಲೀಸರು ಕಿರಣ್ಗೆ ಕರೆ ಮಾಡಿ ಠಾಣೆಗೆ ಬರಲು ಹೇಳಿದ್ದರು. ಠಾಣೆಗೆ ಬಂದ ಬಳಿಕ ಕಿರಣ್ ಅವರಿಗೆ ಸುನೀಲ್ ಹೇಳಿದ್ದು ಸುಳ್ಳು ಎಂದು ಗೊತ್ತಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ಜಾಮೀನು ಕೂಡ ಪಡೆದಿದ್ದರು.
ಕಿರಣ್ ಕಡೆಯಿಂದ ತಪ್ಪಾಗಿದೆ ಎಂದು ತಿಳಿಯುತ್ತಿದ್ದಂತೆ ಕಾರನ್ನು ವಶಪಡಿಸಿಕೊಂಡ ಪೊಲೀಸರು ಹಣಕ್ಕಾಗಿ ಅವರನ್ನು ಬೆದರಿಸಲು ಪ್ರಾರಂಭಿಸಿದ್ದರು. ಕೆಂಗೇರಿ ಠಾಣಾ ಇನ್ಸ್ಪೆಕ್ಟರ್ ನಾಗೇಶ್ ಕಿರಣ್ ಮೊಬೈಲ್ಗೆ ಕರೆ ಮಾಡಿ ಹಿಟ್ ಆಂಡ್ ರನ್ ಕೃತ್ಯ ಎಸಗಿದ್ದರೂ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ಸುಳ್ಳು ಕೇಸ್ನ್ನು ದಾಖಲಿಸಿದ್ದಿರಿ. ಹೀಗಾಗಿ ಒಂದು ಲಕ್ಷ ರೂ. ನೀಡದಿದ್ದರೆ ನಿಮ್ಮ ವಿರುದ್ಧ ವಂಚನೆ ಕೇಸ್ ಹಾಕಲಾಗುವುದು ಎಂದು ಬೆದರಿಸಿದ್ದರು.
ಕಿರಣ್ ಈ ಫೋನ್ ಕರೆಯನ್ನು ಧ್ವನಿ ಮುದ್ರಿಸಿ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ದೂರು ನೀಡಿದ್ದರು.
ಈ ದೂರಿನ ಸಂಬಂಧ ತನಿಖೆ ನಡೆಸಲು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಡಿಸಿಪಿ. ಗಿರೀಶ್ ಅವರಿಗೆ ಆದೇಶಿಸಿದ್ದರು.ತನಿಖೆ ನಡೆಸಿದ ಗಿರೀಶ್ ಅವರು ಹಿಟ್ ಆಂಡ್ ರನ್ ಪ್ರಕರಣವನ್ನು ಮುಂದಿರಿಸಿ ಟ್ರಾಫಿಕ್ ಇನ್ಸ್ಪೆಕ್ಟರ್ ಲಂಚ ಪಡೆಯಲು ಮುಂದಾಗಿರುವುದು ಸಾಬೀತಾಗಿದೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಕೆಂಗೇರಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಿದ್ದಾರೆ.