ಕೇರಳಕ್ಕೆ ಕಯಾಕಿಂಗ್ ಹೋಗಿದ್ದ ಇಬ್ಬರು ನದಿ ಪ್ರವಾಹಕ್ಕೆ ಸಿಲುಕಿ ಸಾವು
ಬೆಂಗಳೂರು, ಸೆಪ್ಟೆಂಬರ್ 9: ಕಯಾಕಿಂಗ್ ಅಭ್ಯಾಸಕ್ಕೆ ತೆರಳಿದ್ದ ಸಂದರ್ಭ ಕಡಾಂತರ ನದಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಕೋಯಿಕ್ಕೋಡ್ ನ ಕುಟ್ಟಿಯಾಡಿಯಲ್ಲಿ ನಡೆದಿದೆ.
ಬೆಂಗಳೂರಿನ ಸುಲ್ತಾನಪಾಳ್ಯದ ನವೀನ್ ಶೆಟ್ಟಿ (41) ಮತ್ತು ಮೂಲತಃ ಕೇರಳ ಅಲಪ್ಪುಜದ, ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನೆಲೆಸಿರುವ ಎಲ್ವಿನ್ ಲೋನನ್ (40), ನದಿಯಲ್ಲಿ ಮುಳುಗಿ ಮೃತಪಟ್ಟವರು.
ಹಂಪೆಯ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಐದು ಮಂದಿಯ ತಂಡವೊಂದು ಕಯಾಕಿಂಗ್ ಅಭ್ಯಾಸಕ್ಕೆ ಪೆರುವನ್ನಮುಝಿಗೆ ಬಂದಿದ್ದು, ಈ ಘಟನೆ ಕುಟ್ಟಿಯಾಡಿಯಲ್ಲಿನ ಪೂಝಿತೊಡೆಯಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ನಡೆದಿದೆ. ಕಯಾಕಿಂಗ್ ಗೆಂದು ನದಿ ನೀರಿನಲ್ಲಿ ಇಳಿದಿದ್ದಾಗ ನೀರಿನ ಹರಿವು ಹೆಚ್ಚಾಗಿದ್ದು, ಐದೂ ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಅದರಲ್ಲಿ ಬೆಂಗಳೂರಿನ ಮನಿಕ್ ತನೇಜಾ, ಉತ್ತರಖಾಂಡ್ ನ ಅಮಿತ್ ಪಪ್ಪ ಹಾಗೂ ದೆಹಲಿಯ ಭವ್ ಪ್ರೀತ್ ಎಂಬ ಮೂವರು ಪಾರಾಗಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದ ಕಾರಣ ನವೀನ್ ಹಾಗೂ ಎಲ್ವಿನ್ ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
"ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಹೆಚ್ಚಾದಾಗ ಕಯಾಕಿಂಗ್ ಹೋಗಲು ನಿರ್ಧರಿಸಿದೆವು. ಮೊದಲು, ಅಮಿತ್, ಭವ್, ನವೀನ್ ಹಾಗೂ ನಾನು ಹೋದೆವು. ಇದ್ದಕ್ಕಿದ್ದಂತೆ ನದಿಯ ಸೆಳೆತ ಹೆಚ್ಚಾಯಿತು. ನವೀನ್ ಆ ಸೆಳೆತದೊಂದಿಗೇ ಸಾಗುತ್ತಿದ್ದ. ಎಲ್ವಿನ್ ಬೋಟ್ ನಿಂದ ಆಯ ತಪ್ಪಿ ಬಿದ್ದ. ನಾನು ಅವನ ಹತ್ತಿರ ಹೋದೆ. ಅವನು ನನ್ನ ಬೋಟ್ ಹಿಡಿದುಕೊಂಡ. ಇಬ್ಬರೂ ಒಟ್ಟಿಗೆ ನೀರಿನಲ್ಲಿ ಹೋಗುತ್ತಿದ್ದಾಗ ನನಗೆ ಒಂದು ಕಮರಿ ಸಿಕ್ಕಿತು. ಆ ಸಂದರ್ಭ ನಾನು ಅವನು ಬೇರ್ಪಟ್ಟೆವು. ಅವನು ನೀರಿನ ರಭಸಕ್ಕೆ ಕೊಚ್ಚಿ ಹೋದ" ಎಂದು ತಿಳಿಸಿದ್ದಾರೆ ಈ ತಂಡದ ನೇತೃತ್ವ ವಹಿಸಿದ್ದ ಮನಿಕ್.
ಚಿಂತಾಮಣಿ: ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು
"ನವೀನ್ ಕೊಂಬೆಯೊದನ್ನು ಹಿಡಿದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಮಿತ್ ಅವರ ಹಿಂದೆ ಹೋಗಿ ಕಾಪಾಡುವ ಪ್ರಯತ್ನಕ್ಕೆ ಮುಂದಾದರು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ. ಸ್ಥಳೀಯರು ಕಾರ್ಯಾಚರನೆ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ತೊಟ್ಟಿಲ್ ಪಾಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.