ಬೆಂಗಳೂರಿನಲ್ಲಿ ಒಂದೇ ದಿನ ಇಬ್ಬರು IISC ವಿದ್ಯಾರ್ಥಿಗಳ ಸಾವು !
ಬೆಂಗಳೂರು, ಮಾರ್ಚ್ 03: ಪೋಷಕರೇ ಎಚ್ಚರ.. ತಮ್ಮ ಮಕ್ಕಳನ್ನು ಓದಿನ ಒತ್ತಡಕ್ಕೆ ಸಿಲುಕಿಸಬೇಡಿ. ಅವರಿಗೆ ಇಷ್ಟವಾದ ಓದು ಆಯ್ಕೆ ಮಾಡಿಕೊಳ್ಳಲಿಕ್ಕೆ ಅವಕಾಶ ಕೊಡಿ. ಒತ್ತಡದ ಓದಿನಲ್ಲಿ ಸಿಲುಕಿಸಿದರೆ ನಿಮ್ಮ ಮಕ್ಕಳು ನಿಮ್ಮಿಂದ ಶಾಶ್ವತವಾಗಿ ದೂರವಾಗಬಹುದು. ಹೌದು ರಾಜಧಾನಿಯಲ್ಲಿ ಕಳೆದ ಮೂರು ದಿನದಲ್ಲಿ ಮೂರು ಕಾಲೇಜು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಓದಿನ ಒತ್ತಡದಿಂದಲೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮೊರೆ ಹೋಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಇತ್ತೀಚೆಗೆ ಇಂಜಿನಿಯರಿಂಗ್ ಪದವೀಧರ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ ಇಬ್ಬರು ಪಿಜಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಒಬ್ಬ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಬ್ಬ ವಿದ್ಯಾರ್ಥಿ ಫುಟ್ಬಾಲ್ ಆಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನ್ಯೂರೋ ಸೈನ್ಸ್ ವಿಭಾಗದಲ್ಲಿ ಪಿಎಚ್ ಡಿ ಪದವಿ ವ್ಯಾಸಂಗ ಮಾಡುತ್ತಿದ್ದ ರಣಧೀರ್ ಖಿನ್ನತೆಗೆ ಒಳಗಾಗಿದ್ದರು. ಮಾ. 2 ರಂದು ರಾತ್ರಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತಂಗಿದ್ದ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಷ್ಟೊತ್ತಾದರೂ ಹೊರಗೆ ಬಾರದ ರಣಧೀರ್ನನ್ನು ವಿಚಾರಿಸಲು ಗೆಳೆಯರು ಹೋದಾಗ ಆತ್ಮಹತ್ಮೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಅವಘಡಕ್ಕೂ ಮುನ್ನ ಉತ್ತರ ಭಾರತ ಮೂಲದ ಎಂಟೆಕ್ ವಿದ್ಯಾರ್ಥಿ ರಾಹುಲ್ ಎಂಬಾತ ಫುಟ್ಬಾಲ್ ಆಟುವಾಗ ಹೃದಯ ಬಡಿತ ಸ್ಥಗಿತಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಾವನ್ನಪ್ಪಿರುವುದು ಭಾರತೀಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿ ವಲಯದಲ್ಲಿ ಸಂಚಲನ ಮೂಡಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳನ್ನು ಸದಾಶಿವನಗರ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂತಾಪ: ಒಂದೇ ದಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮೊರೆ ಹೋಗಬಾರದು. ಯಾವುದೇ ಒತ್ತಡಕ್ಕೆ ಒಳಗಾದರೆ, ಮನೋ ವೈದ್ಯರ ನೆರವು ಪಡೆದುಕೊಳ್ಳಿ. ನಾನಾ ವಿಭಾಗದಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆ ಕಾರ್ಯ ನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ವಿಜ್ಞಾನ ಸಂಸ್ಥೆ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ: ಎರಡು ದಿನದ ಹಿಂದೆಯಷ್ಟೇ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಪದವಿಯಲ್ಲಿ ಓದುತ್ತಿದ್ದ ಜಯಂತ್ ರೆಡ್ಡಿ ಶಾಲಾ ಕಟ್ಟಡದ ಮೇಲಿನಿಂದ ಕುಸಿದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರು ತನಿಖೆ ನಡೆಸಿದಾಗ ಜಯಂತ್ ರೆಡ್ಡಿ ಕೂಡ ಇಂಜಿನಿಯರಿಂಗ್ ಪದವಿ ಯಲ್ಲಿ ಓದಲಾಗದೇ ಖಿನ್ನತೆಗೆ ಒಳಗಾಗಿದ್ದ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ನಾಗುತ್ತಿದ್ದ ಜಯಂತ್ ರೆಡ್ಡಿ ಏಕಾ ಏಕಿ ಆತ್ಮಹತ್ಯೆ ತೀರ್ಮಾನ ತೆಗೆದುಕೊಂಡು ಕಾಲೇಜು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದ.
ಆತ್ಮಹತ್ಯೆ ಪರಿಹಾರ ವಲ್ಲ: ಆತ್ಮಹತ್ಯೆಯೇ ಪರಿಹಾರವಲ್ಲ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಜೀವನ ಎಂಬುದು ದೊಡ್ಡದು. ಯಾವುದೇ ಒತ್ತಡಕ್ಕೆ ಸಿಲುಕಿದರೆ, ಸ್ನೇಹಿತರ ಜತೆ ಇಲ್ಲವೇ ಪೋಷಕರ ಜತೆ ಹೇಳಿಕೊಂಡು ಹಗುರವಾಗಬೇಕು. ಆತ್ಮಹತ್ಯೆ ಮಾಡಿಕೊಂಡು ಸಾಧನೆ ಮಾಡುವಂತಾದೂ ಏನು ಎಂಬ ಮೂಲ ಅಂಶ ವಿದ್ಯಾರ್ಥಿಗಳಲ್ಲಿ ಮನೆ ಮಾಡಿರಬೇಕು. ತಲೆ ಹೋಗುವ ಸಮಸ್ಯೆ ಎದುರಾದರೂ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳಬಾರದು. ಓದಿನಲ್ಲಿ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಜೀವ, ಜೀವನ ಅಮೂಲ್ಯವಾದುದು. ಇನ್ನು ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಏನಾದರೂ ಏರು ಪೇರಾದರೂ ಪೋಷಕರು ಗಮನ ಹರಿಸಬೇಕು. ಒತ್ತಡ ಆಗುವಂತಹ ಓದಿಗೆ ಮಕ್ಕಳನ್ನು ಬಲವಂತವಾಗಿ ದೂಡಬಾರದು ಎಂದು ಮನೋ ವೈದ್ಯ ಡಾ. ಶಿವಕುಮಾರ್ ಸಲಹೆ ಮಾಡಿದ್ದಾರೆ.
ನಮ್ಮ ಪರಿಸರದ ಒತ್ತಡ ಕಾರಣ: ವಿದ್ಯಾರ್ಥಿಗಳ ಆತ್ಮಹತ್ಯೆ ಹಿಂದಿನ ಕಾರಣ ನೋಡಬೇಕು. ಅದರಲ್ಲಿ ಆರ್ಥಿಕ, ಸಾಮಾಜಿಕ, ವೈಯಕ್ತಿಕಮ ಸಾಂಸ್ಕೃತಿಕ ಕಾರಣಗಳಿರುತ್ತವೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ವ್ಯಕ್ತಿತ್ವ ವಿಕಸನ ಆಗಬೇಕು. ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಾಟಕ ಆಡುವುದು, ರಂಗ ಕಲೆಯುವುದು ಲೈಬ್ರೆರಿಗೆ ಹೋಗುವುದು, ಸಿನಿಮಾಗೆ ಹೋಗುವುದು, ಬಯಲಾಟ ಜನಪದ ಸಾಹಿತ್ಯ ಕಲಿಯಬೇಕು. ಇವೆಲ್ಲವೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೂರ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪ. ಪ್ರತಿ ಹಂತದಲ್ಲೂ ಒಬ್ಬೊಬ್ಬ ಮಾನಸಿಕ ಬೆಳವಣಿಗೆಗೆ ಬೇಕಾದ ಪರಿಸರ ಇರಬೇಕು. ಇವತ್ತಿನ ನಮ್ಮ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವ್ಯವಸ್ಥೆಗಳು ವಯಸ್ಕರರ ವ್ಯಕ್ತಿತ್ವ ಬೆಳೆಸುವ ಅಂಶ ಬಿತ್ತುತ್ತಿಲ್ಲ ಎಂದು ಮನೋವೈದ್ಯರಾದ ಡಾ. ಎ. ಶ್ರೀಧರ್ ಅಭಿಪ್ರಾಯ ಪಟ್ಟಿದ್ದಾರೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777