ಗಾಂಜಾ ಮಾರಾಟ: ಇಬ್ಬರು ಆರೋಪಿಗಳನ್ನು ಬಂಧಿಸಿದ ಕೋರಮಂಗಲ ಪೊಲೀಸರು !
ಬೆಂಗಳೂರು, ಏಪ್ರಿಲ್ 14: ಅಂಧ್ರ ಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 84 ಲಕ್ಷ ರೂ. ಮೌಲ್ಯದ 141 ಕೆ.ಜಿ. ಗಾಂಜಾ ಮತ್ತು ಇಚರ್ ಟೆಂಪೋ ವಶಪಡಿಸಿಕೊಂಡಿದ್ದಾರೆ.
Recommended Video
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಚಡ್ಡಕೃಷ್ಣನ್ ಅಲಿಯಾಸ್ ಸಂತೋಷ್ ಮತ್ತು ಚಾಮರಾಜನಗರ ಜಿಲ್ಲೆಯ ಮಂಚಾಪುರ ನಿವಾಸಿ ಮೂರ್ತಿ ಬಂಧಿತ ಆರೋಪಿಗಳು. ವಿಶಾಖಪಟ್ಟಣಂನ ಬುಡಕಟ್ಟು ಜನಾಂಗದವನ್ನು ಭೇಟಿ ಮಾಡಿ ಅಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ದ ಚಡ್ಡ ಕೃಷ್ಣನ್ ಚಾಮರಾಜನಗರದ ಮೂರ್ತಿ ನೆರವಿನಿಂದ ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದರು. ಇದರ ಭಾಗವಾಗಿಯೇ ಅಲ್ಲಿಂದೆ ಇಚರ್ ಟೆಂಪೋನಲ್ಲಿ ತಂದು ಬೆಂಗಳೂರಿನ ಕೋರಮಮಂಗಲದ ಬಳ್ಳಾರಿ ಕಾಲೋನಿಯಲ್ಲಿ ಜನರಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೋರಮಂಗಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಲಾಂಗ್, ನಾಲ್ಕು ಸಾವಿರ ನಗದು, ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಬೆಂಗಳೂರಿನ ಡ್ರಗ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಕೆ.ಆರ್. ಪುರ, ಎಚ್.ಎಸ್.ಆರ್ ಲೇಔಟ್, ಕೋಮಮಂಗಲ ಸುತ್ತ ಮುತ್ತ ಪ್ರದೇಶದಲ್ಲಿ ಗಿರಾಕಿಗಳನ್ನು ಹೊಂದಿದ್ದರು. ಬಂಧಿತ ಆರೋಪಿಗಳ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ಬಂಧಿಸಲಾಗಿದೆ. ಪೊಲೀಸರ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ಶ್ಲಾಘಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಕೆ.ಬಿ. ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.