ಮಹಿಳಾ ಟಿಕ್ಕಿ ಬೆದರಿಸಿ ಹಣ ದೋಚಿದ್ದ ಖದೀಮರ ಸೆರೆ
ಒರಿಸ್ಸಾದ ಜಗತ್ಪುರ ಮೂಲದ ಮಹಮ್ಮದ್ ಬಿಲಾಲ್(22) ಮತ್ತು ಬೆಂಗಳೂರಿನ ರವಿ(20) ಬಂಧಿತರು. ಬಂಧಿತರು ದೋಚಿದ್ದ ಎಲ್ಲಾ ಆಭರಣಗಳನ್ನು ದೂರುದಾರರಿಗೆ ನೀಡಲಾಗಿದೆ ಎಂದು ಡಿವೈಎಸ್ಪಿ ಕೋನಪ್ಪ ರೆಡ್ಡಿ ತಿಳಿಸಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ: ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಶ್ರೀನಿಧಿ ಬಡಾವಣೆಯ ಒಂದು ಕಿ.ಮೀ ದೂರದಲ್ಲಿರುವ ಕಾರ್ಪೋರೇಷನ್ ಬ್ಯಾಂಕಿನ ಎಟಿಎಂ ಸಿಸಿ ಕ್ಯಾಮೆರಾದಲ್ಲಿ ಆರೋಪಿ ಮಹಮ್ಮದ್ ಬಿಲಾಲ್ ಗುರುತು ಪತ್ತೆ ಹಚ್ಚಿದ್ದರು. ಆರೋಪಿ ಸ್ಥಳೀಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಾಹಿತಿಯನ್ನು ತಿಳಿದು ಪೊಲೀಸರು ಫ್ಯಾಕ್ಟರಿಗೆ ತೆರಳಿದಾಗ ಆತ ಒರಿಸ್ಸಾಕ್ಕೆ ಹೋಗಿದ್ದ. ಬಳಿಕ ಪೊಲೀಸರು ಒರಿಸ್ಸಾಕ್ಕೆ ತೆರಳಿ ಬಿಲಾಲ್ನನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆಗೆ ಒಳಪಡಿಸಿದಾಗ ರವಿ ಜೊತೆ ಸೇರಿ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದ್ದಾನೆ. ಬಂಧಿತರು ಕದ್ದ ಚಿನ್ನವನ್ನು ಮುತ್ತೂಟ್ ಫಿನ್ಕಾರ್ಪ್ನಲ್ಲಿ ಅಡವಿಟ್ಟಿದ್ದರು .
ಏನಿದು ಕಳ್ಳತನ ಪ್ರಕರಣ: ಮಾನ್ಯತಾ ಟೆಕ್ ಪಾರ್ಕ್ ನ ಸಾಫ್ಟ್ವೇರ್ ಕಂಪೆನಿಯೊಂದರ ಉದ್ಯೋಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತೇಜಸ್ವಿನಿ ಭಟ್ ಎಂಬವರ ಮನೆಯಲ್ಲಿ ಜು.22 ರಾತ್ರಿ ಇಬ್ಬರು ದುಷ್ಕರ್ಮಿಗಳು ಕಳ್ಳತನ ಎಸಗಿದ್ದರು. ಮಂಗಳವಾರ ರಾತ್ರಿ 7.30 ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಬಂದು ಬಾಗಿಲು ತೆರೆದು ಒಳಗೆ ಪ್ರವೇಶಿಸುತ್ತಿದ್ದಂತೆ ಹಿಂದಿನಿಂದ ಬಂದ ಕಳ್ಳರು ತೇಜಸ್ವಿನಿ ಅವರ ಕತ್ತಿಗೆ ಚಾಕು ಇಟ್ಟು ಬೆದರಿಸಿ ಆಭರಣವನ್ನು ದೋಚಿದ್ದರು.[ಒಂಟಿ ಮಹಿಳಾ ಟೆಕ್ಕಿ ಮನೆಗೆ ನುಗ್ಗಿ ಸಿನಿಮೀಯ ರೀತಿ ಕಳ್ಳತನ]