ಐಪಿಎಸ್ ಅಧಿಕಾರಿ ರೂಪಾ ಜತೆ ಪಟಾಕಿ ವಾಗ್ವಾದ; ಟ್ರೂ ಇಂಡಾಲಜಿ ಖಾತೆ ಬ್ಯಾನ್
ಬೆಂಗಳೂರು ನ. 18: ಪಟಾಕಿ ನಿಷೇಧ ವಿಚಾರವಾಗಿ ಐಪಿಎಸ್ ಅಧಿಕಾರಿ ರೂಪಾ ಮತ್ತು ಟ್ರೂ ಇಂಡಾಲಜಿ ಜತೆ ನಡೆದ ವಾಗ್ವಾದ ತಾರಕಕ್ಕೇರಿದೆ. ಟ್ರೂ ಇಂಡಾಲಜಿಯ ವಾದದ ಮುಂದೆ ಸಮರ್ಥಿಸಿಕೊಳ್ಳಲಾಗದೇ ರೂಪಾ ಅವರು ಟ್ರೂ ಇಂಡಾಲಜಿ ಟ್ವಿಟ್ಟರ್ ಖಾತೆಯನ್ನು ಅಮಾನತು ಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಪಟಾಕಿ ನಿಷೇಧ ವಿಚಾರವಾಗಿ ರೂಪಾ ಅವರು ಟಿಟ್ವರ್ ಖಾತೆಯಲ್ಲಿ ಹಂಚಿಕೊಂಡಿದ್ದ ಮಾಹಿತಿ ತಪ್ಪು ಎಂದು ದಾಖಲೆಗಳ ಸಮೇತ ಸಮರ್ಥನೆ ನೀಡಿದ ಟ್ರೂ ಇಂಡಾಲಜಿ ಟಿಟ್ವರ್ ಖಾತೆ ಕಾರಣವಿಲ್ಲದೇ ಅಮಾನತು ಆಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಟ್ರೂ ಇಂಡಾಲಜಿ, ಬೆಂಗಳೂರಿನ ಒಬ್ಬ ಐಪಿಎಸ್ ಅಧಿಕಾರಿ ತನ್ನ ಟಿಟ್ವರ್ ಖಾತೆಯಲ್ಲಿ ದೀಪಾವಳಿಗೆ ಪಟಾಕಿ ಹೊಡೆಯುವುದು ನಿಷೇಧಿಸಬೇಕು. ಪಟಾಕಿ ಹೊಡೆಯುವುದು ಹಿಂದು ಸಂಪ್ರದಾಯದಲ್ಲಿ ಉಲ್ಲೇಖಿಸಿಲ್ಲ ಎಂದು ಟ್ವೀಟ್ ಮಾಡಿದ್ದರು.
ಇದನ್ನು ನಾನು ಒಪ್ಪದೇ ಆನಂದ ರಾಮಾಯಣ ಮತ್ತು ಸ್ಕಂದ ಪುರಾಣ ಉಲ್ಲೇಖ ಮಾಡಿ ಪಟಾಕಿ ಹೊಡೆಯುವ ಸಂಪ್ರದಾಯ ಹಿಂದೂಗಳಲ್ಲಿ ಇರುವ ಬಗ್ಗೆ ಪ್ರಸ್ತಾಪಿಸಿದ್ದೆ. ನನ್ನ ವಾದ ಒಪ್ಪಿಕೊಳ್ಳದ ಆ ಅಧಿಕಾರಿ ನನ್ನ ವೈಯಕ್ತಿಕ ವಿವರ ಕೇಳಿದರು. ನಾನು ನನ್ನ ವೈಯಕ್ತಿಕ ವಿವರಗಳನ್ನು ನೀಡಲಿಲ್ಲ. ಇದಾದ ಐದು ನಿಮಿಷದಲ್ಲಿ ನನ್ನ ಟಿಟ್ವರ್ ಖಾತೆ ಅಮಾನತು ಆಗಿದೆ. ಟ್ರೂ ಇಂಡಾಲಜಿ ಟಿಟ್ವರ್ ಖಾತೆ ಅಮಾನತು ಮಾಡಿರುವ ಮೇಲ್ ಬಂದಿಲ್ಲ. ಸದ್ಯ ನನ್ನನ್ನು ಸಾಮಾಜಿಕ ಜಾಲ ತಾಣದಿಂದ ಇಲ್ಲದಂತೆ ಮಾಡಲಾಗಿದೆ. ಒಂದು ವೇಳೆ ನಾನು ನನ್ನ ವೈಯಕ್ತಿಕ ವಿವರ ನೀಡಿದ್ದರೆ ನಾನು ಉಳಿಯುತ್ತಿದ್ದನೇ ಎಂದು ಟ್ರೂ ಇಂಡಾಲಜಿ ಪ್ರಶ್ನೆ ಮಾಡಿದೆ.
ರೂಪಾ ಕ್ರಮಕ್ಕೆ ಆಕ್ರೋಶ: ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿ ಬಗ್ಗೆ ಯಾರಾದರೂ ಅಜ್ಞಾನ ಮಾಹಿತಿ ಪ್ರಚಾರ ಮಾಡಿದರೆ ಅಂತಹ ಮಾಹಿತಿ ವಿರುದ್ಧ ಟ್ರೂ ಇಂಡಾಲಜಿ ಸಾಕ್ಷಾಧಾರಗಳ ಸಮೇತ ಸುಳ್ಳು ಎಂದು ಚರ್ಚೆ ಆರಂಭಿಸುತ್ತದೆ. ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯ ಹೊರತು ಪಡಿಸಿ ಯಾರ ಚಾರಿತ್ರ್ಯವಧೆಗೂ ಟ್ರೂ ಇಂಡಾಲಜಿ ಮುಂದಾಗಿಲ್ಲ. ಈ ಖಾತೆ ನಿರ್ವಹಣೆ ಮಾಡುವ ಅನಾಮಿಕ ವ್ಯಕ್ತಿ ಎಲ್ಲೂ ತನ್ನ ವಿವರಗಳನ್ನು ಕೂಡ ಬಹಿರಂಗ ಪಡಿಸಿಕೊಂಡಿಲ್ಲ. ಇಂತಹ ಟ್ರೂ ಇಂಡಾಲಜಿ ಖಾತೆ ಅಮಾನತು ಆಗಿರುವ ಬೆನ್ನಲ್ಲೇ ರೂಪಾ ಹಾಗೂ ಟ್ರೂ ಇಂಡಾಲಜಿ ಪಟಾಕಿ ನಿಷೇಧ ಬಗೆಗಿನ ಚರ್ಚೆ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ಚರ್ಚೆ ಹುಟ್ಟು ಹಾಕಿದೆ.
ರೂಪಾ ಐಪಿಎಸ್ ಅಧಿಕಾರಿ. ಸರ್ಕಾರ ಪಟಾಕಿ ನಿಷೇಧ ಮಾಡಿದ್ದರೆ, ಅದನ್ನು ಅನುಷ್ಠಾನ ಮಾಡುವ ಅಧಿಕಾರ ಇದ್ದರೆ ಅದನ್ನು ಮಾಡಬೇಕು. ಪಟಾಕಿ ಹೊಡೆಯುವುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಹೇಳುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ದಾಖಲೆಗಳನ್ನು ನೀಡಿದರೆ ಅವನ್ನು ಒಪ್ಪಿಕೊಳ್ಳದೇ ಟಿಟ್ವರ್ ಖಾತೆ ರದ್ದು ಮಾಡಿಸುವುದು ಎಷ್ಟು ಸರಿ ? ಒಬ್ಬ ಐಪಿಎಸ್ ಅಧಿಕಾರಿಗೆ ಶೋಭೆ ತರುವ ವಿಚಾರವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.