ಚಿನ್ನದ ಅಂಗಡಿ ಚೋರರ ಬಗ್ಗೆ ಸುಳಿವು ಕೊಟ್ಟಿದ್ದು ಟಿವಿಎಸ್ XL
ಬೆಂಗಳೂರು, ಜನವರಿ 21: ಟಿವಿಎಸ್ XL ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರದಲ್ಲಿ ಚಿನ್ನದ ಅಂಗಡಿಯಲ್ಲಿ ಆಭರಣ ಕಳುವು ಮಾಡಿದ್ದ ರಾಜಸ್ತಾನ ಮೂಲದ ಕಳ್ಳರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದಲ್ಲಿ ಒಂದು ತಂಡ ಆಭರಣ ಅಂಗಡಿ ದೋಚಿದವರ ಪತ್ತೆ ಕಾರ್ಯದಲ್ಲಿ ತೊಡಗಿತ್ತು. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಕೈಕೊಟ್ಟಿದ್ದವು. ಆದರೆ ಬೀದಿ ಬದಿ ಸಿಕ್ಕಿದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದ ಟಿವಿಎಸ್ ಎಕ್ಸ್ ಎಲ್ ನೀಡಿದ ಸುಳಿವನಿಂದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ತಾನ ಮೂಲದ ಜೀಖಾರಾಮ್, ದೇವಸಿ, ಅಮರಸಿಂಗ್ ಹಾಗೂ ಉತ್ತಮ್ ರಾಣಾ ಬಂಧಿತರು. ಇವರಿಂದ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇವಲ ಮಾರ್ವಡಿ ಅಂಗಡಿಗಳನ್ನು ಟಾರ್ಗೆಟ್ ಮಾಡುವ ಈ ಖದೀಮರು ಮೂಲತಃ ರಾಜಸ್ತಾನ ನಿವಾಸಿಗಳು. ಅಲ್ಲಿಂದಲೇ ಬೆಂಗಳೂರಿಗೆ ಬಂದು ಇಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಹೀಗಾಗಿ ಯಾರ ಕೈಗೂ ಇವರು ಸಿಕ್ಕಿಬಿದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಅಕ್ಟೋಬರ್ 29 ರಂದು ಕೆ.ಆರ್. ಮಾರ್ಕೆಟ್ ಠಾಣಾ ವ್ಯಾಪ್ತಿಯ ಪ್ರವೀಣ್ ಜ್ಯುವೆಲರಿ ಅಂಗಡಿಯಲ್ಲಿ ಯಾರೋ ಕಳ್ಳರು ಭಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಅಂಗಡಿ ಮಾಲೀಕ ಕೆ.ಆರ್. ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಬೆನ್ನಟ್ಟಿದಾಗ ಚಿನ್ನಾಭರಣ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಏನೂ ಸಿಕ್ಕಿರಲಿಲ್ಲ. ಆರೋಪಿಗಳು ಯಾವ ರಸ್ತೆಯ ಮಾರ್ಗವಾಗಿ ಹೋಗಿರಬಹುದು ಎಂಬುದಕ್ಕೆ ನಕ್ಷೆ ರೂಪಿಸಿದ್ದರು.
ಅದರಂತೆ ಹುಡುಕಾಟ ನಡೆಸಿದ್ದರು. ಘಟನೆಯಾದ ಬಳಿಕ ಟಿವಿಎಸ್ ಎಕ್ಸ್ ಎಲ್ ನಲ್ಲಿ ಇಬ್ಬರು ಅಪರಿಚಿತರು ಅನುಮಾನಸ್ಪದವಾಗಿ ಓಡಾಡುವ ದೃಶ್ಯಗಳು ರಸ್ತೆ ಬದಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸಿಕ್ಕಿತ್ತು. ಟಿವಿಎಸ್ ನಂಬರ್ ಜಾಡು ಹಿಡಿದು ತನಿಖೆ ನಡೆಸಿದ್ದರು. ಇದೇ ವೇಳೆಗೆ ಕಳ್ಳರ ಗ್ಯಾಂಗ್ ವೊಂದು ಬೆಂಗಳೂರಿನಲ್ಲಿ ಆಭರಣ ದೊಚಿ ಇಲ್ಲಿ ಮಾರಾಟ ಮಾಡುವ ಬಗ್ಗೆ ಮಾಹಿತಿದಾರನೊಬ್ಬ ಮಾರ್ಕೆಟ್ ಪೊಲೀಸರಿಗೆ ಸುಳಿವು ನೀಡಿದ್ದರು. ಎರಡು ಆಧಾರದ ಮೇಲೆ ತನಿಖೆ ನಡೆಸಿದಾಗ ಒಂದೇ ತಿಂಗಳಲ್ಲಿ ಜೀಖಾರಾಮ್ ಎಂಬಾತ ಸಿಕ್ಕಿಬಿದ್ದಿದ್ದ.
ಇವನು ನೀಡಿದ ಮಾಹಿತಿ ಮೇರೆಗೆ ಅಮರ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇಬ್ಬರು ನೀಡಿದ ಮಾಹಿತಿ ಮೇರೆಗೆ ಉತ್ತಮ್ ರಾಣಾ ಎಂಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡು ಕೆಜಿ. ಬೆಳ್ಳಿ, ನಾಲ್ಕು ಲಕ್ಷ ರೂ ನಗದು, ವಾಹನ ವಶಪಡಿಸಿಕೊಳ್ಳಲಾಗಿದೆ.
Recommended Video
ಆರೋಪಿಗಳು ಕಳ್ಳತನಕ್ಕೆ ಸ್ಥಳೀಯ ವ್ಯಕ್ತಿಯ ನೆರವು ಪಡೆದು ಟವಿಎಸ್ ಬಳಸಿದ್ದರು. ಟಿವಿಎಸ್ ನಂಬರ್ ನೀಡಿದ ಸುಳವಿನ ಮೇರೆಗೆ ಸ್ಥಳೀಯ ಆರೋಪಿಯನ್ನು ಬಂಧಿಸಿದ್ದು, ಪೊಲೀಸರ ಕಾರ್ಯವನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.