70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಟಿವಿ5 ಕನ್ನಡ ವಾಹಿನಿ
ಬೆಂಗಳೂರು, ಮೇ.25: ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವೇ ಮಾಧ್ಯಮ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿನ ತಪ್ಪನ್ನು ತಿದ್ದುವ ಮಾಧ್ಯಮದಲ್ಲೇ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಕರ್ನಾಟಕದ ಪ್ರತಿಷ್ಠಿತ ಸುದ್ದಿ ವಾಹಿನಿ ಎನಿಸಿರುವ ಟಿವಿ5 (TV5) ಕನ್ನಡ ಸುದ್ದಿ ವಾಹಿನಿ ದಿಢೀರನೇ ಸಂಸ್ಥೆಯಲ್ಲಿ 70ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್
ರಾಜ್ಯದಲ್ಲಿ ಇರುವ 1 ಎಂ.ಬಿ ಕೇಂದ್ರಗಳಲ್ಲಿದ್ದ ಜಿಲ್ಲಾ ವರದಿಗಾರರು ಮತ್ತು ಕ್ಯಾಮರಾಮ್ಯಾನ್ ಗಳನ್ನು ಜೂನ್ ತಿಂಗಳಿನಿಂದ ಕೆಲಸಕ್ಕೆ ಬಾರದಂತೆ ಸಂಸ್ಥೆಯ ಆಡಳಿತ ಮಂಡಳಿಯು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಏಕರೂಪ ರಾಜೀನಾಮೆ ಪತ್ರದ ಪ್ರತಿ ರವಾನಿಸಿದ ಸಂಸ್ಥೆ
ಟಿವಿ5 ಕನ್ನಡ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 70ಕ್ಕೂ ಅಧಿಕ ಸಿಬ್ಬಂದಿಗೆ ಏಕರೂಪ ರಾಜೀನಾಮೆ ಪತ್ರದ ಪ್ರತಿಯನ್ನು ರವಾನಿಸಲಾಗಿದೆ. ಇದರಲ್ಲಿ ಮೇ ತಿಂಗಳ ಅಂತ್ಯದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಈ ಪ್ರತಿಯನ್ನು 70ಕ್ಕೂ ಹೆಚ್ಚು ಉದ್ಯೋಗಿಗಳು ಭರ್ತಿ ಮಾಡಿ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಬೇಕಂತೆ. ಹೀಗೆ ರಾಜೀನಾಮೆ ಪ್ರತಿಯನ್ನು ಕಂಪನಿಗೆ ಸಲ್ಲಿಸಿದವರಿಗೆ ಮಾತ್ರ ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನು ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆಯಂತೆ.
ಬಾಗಿಲು ಮುಚ್ಚಿದ ಸ್ವರಾಜ್ ಸುದ್ದಿ ವಾಹಿನಿ, ಪೊಲೀಸರಿಗೆ ದೂರು
ನೌಕರರು ರಾಜೀನಾಮೆ ಸಲ್ಲಿಸದಿದ್ದರೆ ಗೇಟ್ ಪಾಸ್
ಟಿವಿ5 ಕನ್ನಡ ಆಡಳಿತ ಮಂಡಳಿಯು ಕಳುಹಿಸಿದ ರಾಜೀನಾಮೆ ಪ್ರತಿಯನ್ನು ಭರ್ತಿ ಮಾಡಿ ಸಲ್ಲಿಸುವುದಕ್ಕೆ ಮೇ.31ರವರೆಗೂ ಅಂತಿಮ ಗಡುವು ವಿಧಿಸಲಾಗಿದೆ. ನಂತರದಲ್ಲೂ ಉದ್ಯೋಗಿಗಳು ರಾಜೀನಾಮೆ ಸಲ್ಲಿಸದಿದ್ದಲ್ಲಿ ಕಂಪನಿಯೇ ಉದ್ಯೋಗಿಗಳನ್ನು ತೆಗೆದುಹಾಕುತ್ತದೆ. ಅಲ್ಲದೇ ಬಾಕಿ ಉಳಿಸಿಕೊಂಡಿರುವ ಏಪ್ರಿಲ್ ಹಾಗೂ ಮೇ ಎರಡೂ ತಿಂಗಳ ವೇತನವನ್ನೂ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿರುವುದಾಗಿ ಕೆಲವು ಸಿಬ್ಬಂದಿ ಆರೋಪಿಸುತ್ತಿದ್ದಾರೆ.
ಆದಾಯವಿಲ್ಲ ಎಂಬ ನೆಪದಲ್ಲಿ ನೌಕರರ ಕಿಕ್ ಔಟ್
ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇರುವ ಹಿನ್ನೆಲೆ ಟಿವಿ5 ಕನ್ನಡ ಸಂಸ್ಥೆಗೆ ಆದಾಯದ ಕೊರತೆ ಎದುರಾಗಿದೆ. ಎಲ್ಲ ಉದ್ಯೋಗಿಗಳಿಗೆ ವೇತನ ನೀಡುವುದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆ ತಾವೇ ರಾಜೀನಾಮೆ ಸಲ್ಲಿಸಬೇಕೆೆಂದು ಆಡಳಿತ ಮಂಡಳಿಯು ಸೂಚನೆ ನೀಡಿದೆ. ಈ ಸಂಬಂಧ 1 ಎಂ.ಬಿ ಕೇಂದ್ರಗಳಾಗಿರುವ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇರುವ ವರದಿಗಾರರು ಮತ್ತು ಕ್ಯಾಮರಾ ಮ್ಯಾನ್ ಗಳಿಗೆ ಸಂದೇಶ ಕಳುಹಿಸಲಾಗಿದೆ.
ಬೆಂಗಳೂರು ಕಚೇರಿಯಲ್ಲಿನ ಕೆಲವು ಸಿಬ್ಬಂದಿ ಕಿಕ್ ಔಟ್
ರಾಜ್ಯದಲ್ಲಿರುವ 1 ಎಂ.ಬಿ ಕೇಂದ್ರಗಳು ಅಷ್ಟೇ ಅಲ್ಲ. ಬೆಂಗಳೂರಿನ ಕಚೇರಿಯಲ್ಲಿ ಇರುವ ಕೆಲವು ಸಿಬ್ಬಂದಿಯನ್ನೂ ಕೆಲಸದಿಂದ ತೆಗೆದುಹಾಕುವುದಾಗಿ ಟಿವಿ5 ಕನ್ನಡ ಆಡಳಿತ ಮಂಡಳಿಯು ತಿಳಿಸಿದೆಯಂತೆ. ಲಾಕ್ ಡೌನ್ ಸಂದರ್ಭದಂತಾ ಸಂದಿಗ್ಧ ಸ್ಥಿತಿಯಲ್ಲಿ 70ಕ್ಕೂ ಅಧಿಕ ನೌಕರರು ಕೆಲಸ ಕಳೆದುಕೊಂಡು ಆತಂಕಗೊಂಡಿದ್ದಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಸ್ಥಾನದಲ್ಲಿ ಇರುವ ಸಿಬ್ಬಂದಿಯೇ ಆತಂಕದಲ್ಲಿ ದಿನ ಕಳೆಯುವಂತಾಗಿದೆ.