ಪರಿಸರವಾದಿಗಳಿಂದ ವಿರೋಧ; ತುರಹಳ್ಳಿ ಟ್ರೀ ಪಾರ್ಕ್ ಯೋಜನೆಗೆ ತಾತ್ಕಾಲಿಕ ತಡೆ
ಬೆಂಗಳೂರು, ಫೆಬ್ರವರಿ 18: ನಗರ ಸಮೀಪದ ತುರಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಟ್ರೀ ಪಾರ್ಕ್ ಯೋಜನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ತುರಹಳ್ಳಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಕಾರಣ ಯೋಜನೆಗೆ ತಡೆ ನೀಡಲಾಗಿದೆ. ಬುಧವಾರ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹಾಗೂ ಸಹಕಾರ ಸಚಿವ, ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ತುರಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಸರವಾದಿಗಳೊಂದಿಗೆ ಸಮಾಲೋಚನೆ ನಡೆಸಿದರು.
ತುರಹಳ್ಳಿ ಅರಣ್ಯದಲ್ಲಿ ಸೈಕ್ಲಿಂಗ್ ನಿಷೇಧ, ಇಲ್ಲಿದೆ ಕಾರಣ
ತುರಹಳ್ಳಿಯ 38 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ನೈಸರ್ಗಿಕ ಕಾಡನ್ನು ನಾಶಗೊಳಿಸುವ ಯೋಜನೆ ಇದಾಗಿದೆ ಎಂದು ಸ್ಥಳೀಯರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಹಲವು ದಿನಗಳಿಂದ ಸರಣಿ ಪ್ರತಿಭಟನೆಯನ್ನೂ ಕೈಗೊಂಡಿದ್ದರು.
ಬುಧವಾರ ತುರಹಳ್ಳಿಗೆ ಭೇಟಿ ನೀಡಿ ಸಭೆ ನಡೆಸಿದ ಸಚಿವರು ಯೋಜನೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ. "ಕಾಡು ಉಳಿಸಬೇಕೆಂಬ ಸಾರ್ವಜನಿಕರ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ನಿಮ್ಮನ್ನು ಅದಕ್ಕಾಗಿ ಅಭಿನಂದಿಸುತ್ತೇನೆ. ನಮ್ಮ ಯೋಜನೆಯ ಅಂತಿಮ ಉದ್ದೇಶ ಅರಣ್ಯದ ರಕ್ಷಣೆಯೇ ಆಗಿದೆ. ಆದರೆ ಅದನ್ನು ಪ್ರಾಕೃತಿಕವಾಗಿ ಬಿಡಬೇಕು ಎಂಬ ನಿಮ್ಮ ಸಲಹೆಯನ್ನು ಸಹ ನಾನು ಗೌರವಿಸುತ್ತೇನೆ, ಮುಂದೆ ಇದರ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ವಿನಿಮಯ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
Recommended Video
ಈ ಯೋಜನೆಯನ್ನು ಬೇರೆಡೆಗೆ ವರ್ಗಾಯಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.