ರಾಜ್ಯದಲ್ಲಿಯೂ ನಿರ್ಮಾಣವಾಗಲಿದೆ ತಿರುಪತಿ ತಿಮ್ಮಪ್ಪನ ದೇವಸ್ಥಾನ
ಬೆಂಗಳೂರು, ಜೂನ್ 7: ನೆರೆಯ ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನಿಗೆ ರಾಜ್ಯದಲ್ಲಿರುವ ಭಕ್ತರ ಸಂಖ್ಯೆ ಅಪಾರ. ಪ್ರತಿನಿತ್ಯವೂ ಇಲ್ಲಿಂದ ಸಾವಿರಾರು ಸಂಖ್ಯೆಯ ಭಕ್ತರು ತಿಮ್ಮಪ್ಪನ ಸನ್ನಿಧಿಗೆ ತೆರಳುತ್ತಾರೆ. ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಾರೆ. ಆದರೆ, ಅಷ್ಟು ಹೊತ್ತು ಸಮಯ ವಿನಿಯೋಗಿಸಿದರೂ ತಿಮ್ಮಪ್ಪನ ದರ್ಶನ ಸರಿಯಾಗಿ ಆಗುತ್ತದೆ ಎಂದು ಹೇಳಲಾಗುವುದಿಲ್ಲ.
ಅಷ್ಟು ದೂರದ ಧಾರ್ಮಿಕ ಸ್ಥಳಕ್ಕೆ ಹೋದರೂ ದೇವರ ದರ್ಶನ ಸಿಗದೆ ನಿರಾಶೆಯಿಂದ ವಾಪಸಾಗುವ ಭಕ್ತರ ಸಂಖ್ಯೆಯೇ ಹೆಚ್ಚು. ಇನ್ನು ಮುಂದೆ ತಿಮ್ಮಪ್ಪನ ದರ್ಶನಕ್ಕೆ ಇಷ್ಟು ಕಷ್ಟಪಡಬೇಕಾಗಿಲ್ಲ. ತಿಮ್ಮಪ್ಪನ ಭಕ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರಾಜ್ಯದಲ್ಲಿಯೂ ತಿರುಪತಿ ತಿಮ್ಮಪ್ಪನ ಮಾದರಿಯಲ್ಲಿಯೇ ಬೃಹತ್ ದೇವಸ್ಥಾನ ನಿರ್ಮಾಣವಾಗಲಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸ್ವತಃ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಟ್ರಸ್ಟ್ ನಿಭಾಯಿಸಲಿದೆ. ಸುಮಾರು 15 ಎಕರೆ ಜಮೀನಿನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ.
ಪ್ರಧಾನಿಯಾದ ಬಳಿಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೋದಿ
ರಾಮನಗರದಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಿಸಲು 15 ಎಕರೆ ಭೂಮಿ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮುಜರಾಯಿ ಇಲಾಖೆ ಸಚಿವ ಪಿಟಿ ಪರಿಮೇಶ್ವರ್ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆ ಚ್.ಡಿ.ರೇವಣ್ಣ, ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್, ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮನವಿ ಸಲ್ಲಿಸಿದ್ದ ಟಿಟಿಡಿ
ರಾಜ್ಯದಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಟಿಟಿಡಿ ಮನವಿ ಸಲ್ಲಿಸಿತ್ತು. ಈಗ ಅದಕ್ಕೆ ಅನುಮೋದನೆ ದೊರಕಿದೆ. ತಿಮ್ಮಪ್ಪ ದೇವಸ್ಥಾನ ನಿರ್ಮಾಣದ ಜತೆಗೆ ರಾಜ್ಯದ ಆರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ಸಹ ಸರ್ಕಾರ ಅನುಮತಿ ನೀಡಿದೆ.
ತಿರುಪತಿ ಮಾದರಿಯಲ್ಲಿ ಮೇಲುಕೋಟೆ ಅಭಿವೃದ್ಧಿ
ಕೆಂಗಲ್ ಆಂಜನೇಯ ದೇವಸ್ಥಾನ ಅಭಿವೃದ್ಧಿ
ಐತಿಹಾಸಿಕ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ 21 ಕೋಟಿ ರೂಪಾಯಿ ಅನುದಾನ ನೀಡಲು ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿನ ಇತಿಹಾಸ ಪ್ರಸಿದ್ಧ ಮತ್ತು ಪಾರಂಪರಿಕ ದೇವಸ್ಥಾನಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಮಲೆಮಹದೇಶ್ವರ ಮೆಟ್ಟಿಲು ದುರಸ್ತಿ
ಲೋಕೋಪಯೋಗಿ ಇಲಾಖೆ ವತಿಯಿಂದ 40 ಕೋಟಿ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಾಗೂ ದೇವಸ್ಥಾನದ ಮೆಟ್ಟಿಲುಗಳ ದುರಸ್ತಿ ಕಾರ್ಯವನ್ನು ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ತಿರುಪತಿ ದೇವಾಲಯದಲ್ಲಿ ವಜ್ರ ಖಚಿತ 3 ಕಿರೀಟ ಕಳ್ಳತನ
ತಿರುಮಲದಲ್ಲಿ ಛತ್ರ ನಿರ್ಮಾಣ
ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವುದು ಮತ್ತು ತಿರುಮಲ ತಿರುಪತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ 26 ಕೋಟಿ ರೂ. ವೆಚ್ಚದಲ್ಲಿ ಛತ್ರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಯಿತು.
ಮುಂದಿನ ವರ್ಷದಲ್ಲಿ ತಲಕಾಡು ಪಂಚಲಿಂಗದರ್ಶನ ಆಚರಣೆ ನಡೆಯಲಿರುವುದರಿಂದ, ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅವಶ್ಯವಿರುವೆಡೆ ಸೌಲಭ್ಯವನ್ನು ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.