ಪೇದೆಯಿಂದ ಹಲ್ಲೆ; ಟ್ರಕ್ ಚಾಲಕನಿಗೆ ಬೆದರಿಕೆ, ಪೇದೆ ಎತ್ತಂಗಡಿ
Recommended Video
ಬೆಂಗಳೂರು, ಸೆಪ್ಟೆಂಬರ್ 23 : ಹಲಸೂರು ಗೇಟ್ ಸಂಚಾರಿ ಠಾಣೆ ಮುಖ್ಯಪೇದೆ ಮಹಾಸ್ವಾಮಿಯಿಂದ ಹಲ್ಲೆಗೊಳಗಾಗಿದ್ದ ಮಿನಿಟ್ರಕ್ ಚಾಲಕ ಸುನೀಲ್ ನಾಪತ್ತೆಯಾಗಿದ್ದಾನೆ. ಚಾಲಕನಿಗೆ ಜೀವ ಬೆದರಿಕೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಮಿನಿ ಟ್ರಕ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿದ್ದ ಮುಖ್ಯಪೇದೆ ಮಹಾಸ್ವಾಮಿಯನ್ನು ವರ್ಗಾವಣೆ ಮಾಡಲಾಗಿದೆ. ಸುನೀಲ್ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ತಾಯಿಗೆ ಕರೆ ಮಾಡಿದ್ದ ಆತ ನಡೆದ ಘಟನೆ ವಿವರಿಸಿದ್ದ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಗೂ ಬಂದಿಲ್ಲ.
ವೈರಲ್ ವಿಡಿಯೋ; ಪೊಲೀಸ್ ಅಲ್ಲ ಚಾಲಕನ ವಿರುದ್ಧ ಎಫ್ಐಆರ್
ಜರಗನಹಳ್ಳಿಯಲ್ಲಿರುವ ಸುನೀಲ್ ಮನೆಗೆ ಶನಿವಾರ ರಾತ್ರಿ ಅಪರಿಚಿತರು ಬಂದು ಆತನ ಬಗ್ಗೆ ವಿಚಾರಿಸಿದ್ದಾರೆ. ಸುನೀಲ್ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಮ್ಮ ಮಗ ಕೈಗೆ ಸಿಕ್ಕರೆ ಕೈ-ಕಾಲು ಮುರಿದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ವಿಡಿಯೋ: ಟೆಂಪೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ದೌರ್ಜನ್ಯ
ಸುನೀಲ್ ತಾಯಿ ರತ್ನಮ್ಮ ಬೆದರಿಕೆ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸುನೀಲ್ ವಿರುದ್ಧ ಎಸ್. ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವೈರಲ್ ವಿಡಿಯೋ; ಹಲ್ಲೆ ಮಾಡಿದ್ದ ಪೇದೆ ಮಹಾಸ್ವಾಮಿ ಎತ್ತಂಗಡಿ
ದೂರಿನಲ್ಲಿ ಏನಿದೆ?
ಮಿನಿ ಟ್ರಕ್ ಚಾಲಕ ಸುನೀಲ್ ತಾಯಿ ರತ್ನಮ್ಮ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗನಿಗೆ ಟ್ರಾಫಿಕ್ ಪೊಲೀಸರೊಬ್ಬರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ಆತ ಕರೆ ಮಾಡಿ ತಿಳಿಸಿದ್ದ. ಆದರೆ, ಆ ದಿನದಿಂದ ಆತ ಮನೆಗೆ ಬಂದಿಲ್ಲ. 21/9/2019ರಂದು ರಾತ್ರಿ 4-5 ಜನ ಅಪರಿಚಿತರು ನಿಮ್ಮ ಮಗ ಎಲ್ಲಿ ಎಂದು ಮನೆಗೆ ಬಂದು ವಿಚಾರಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾರೆ. ಮಗ ಸಿಕ್ಕರೆ ಕೈಕಾಲು ಮುರಿದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಾಸ್ವಾಮಿ ವರ್ಗಾವಣೆ
ಮಿನಿ ಟ್ರಕ್ ಚಾಲಕ ಸುನೀಲ್ ಮೇಲೆ ಹಲ್ಲೆ ಮಾಡಿದ ಹೆಡ್ ಕಾನ್ಸ್ಟೆಬಲ್ ಮಹಾಸ್ವಾಮಿಯನ್ನು ಹಲಸೂರು ಗೇಟ್ ಠಾಣೆಯಿಂದ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೆಡ್ ಕಾನ್ಸ್ಟೆಬಲ್ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದೆ.
ಕ್ರಮ ಕೈಗೊಳ್ಳುವ ಭರವಸೆ
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರರಾವ್ ಹೆಡ್ ಕಾನ್ಸ್ಟೇಬಲ್ ಮಹಾಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ ಎಸಿಪಿ ರಂಗಸ್ವಾಮಿ ಡಿಸಿಪಿ ಜಗದೀಶ್ ಮೂಲಕ ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ. ಆರ್. ರವಿಕಾಂತೇಗೌಡಗೆ ವರದಿ ಸಲ್ಲಿಸಿದ್ದಾರೆ. ಮಹಾಸ್ವಾಮಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ವರದಿ ಹೇಳಿದೆ. ಡಿವೈಎಸ್ಪಿ ದರ್ಜೆಯ ಅಧಿಕಾರಿ ಇಲಾಖಾ ವಿಚಾರಣೆ ನಡೆಸಲಿದ್ದು, ಬಳಿಕ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ರಸ್ತೆಯಲ್ಲಿ ಆಗಿದ್ದೇನು?
ಬೆಂಗಳೂರಿನ ಟೌನ್ ಹಾಲ್ ಮುಂದೆ ಸುನೀಲ್ ಮಿನಿ ಟ್ರಕ್ ತಡೆದಿದ್ದ ಸಂಚಾರಿ ಪೊಲೀಸರು ತಪಾಸಣೆ ಮಾಡಿದ್ದರು. ಹೆಡ್ ಕಾನ್ಸ್ಟೇಬಲ್ ಮಹಾಸ್ವಾಮಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟ್ರಕ್ ಚಾಲಕನನ್ನು ಠಾಣೆಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಚಾಲಕನ ಮೇಲೆ ಅವರು ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಚಾಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.