ಸರ್ಕಾರದ ಲಾಕ್ಡೌನ್ ನಿರ್ಧಾರಕ್ಕೆ ಟ್ರೋಲಿಗರು ಏನೆಂದರು?
ಬೆಂಗಳೂರು, ಮೇ 10: ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಸ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಲೇ ಇದೆ.
ಈ ಮಾರ್ಗಸೂಚಿಗಳು ಪ್ರತಿದಿನ ಬದಲಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡುತ್ತಿದೆ. ಒಂದು ದಿನ ನಿಯಮಗಳು ಮತ್ತೊಂದು ದಿನಕ್ಕೆ ಬದಲಾಗಿರುತ್ತದೆ. ಇದರಿಂದಾಗಿ ಕೇವಲ ಜನರಷ್ಟೇ ಅಲ್ಲ, ಕೊರೊನಾ ಸೋಂಕಿಗೂ ಗೊಂದಲ ಮೂಡಿಸುವಂತಿರುತ್ತವೆ.
ಕೊರೊನಾ ಸೋಂಕಿಗಿಂತಲೂ ರಾಜ್ಯ ಸರ್ಕಾರದ ಅವೈಜ್ಞಾನಿಕ, ಜನ ವಿರೋಧಿ ಕ್ರಮಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ನಿಯಮಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮತ್ತು ಮೀಮ್ಸ್ ಮಾಡುತ್ತಿದ್ದಾರೆ. ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸಾಪ್ ಗಳಲ್ಲಿ ಸರ್ಕಾರವನ್ನು ಹೀಯಾಳಿಸುತ್ತಿದ್ದಾರೆ. ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಎಂಥಾ ಲಾಕ್ಡೌನ್ ಇದು? ಏನೂ ಮಹಾ ವ್ಯತ್ಯಾಸ ಆಗೋದೇ ಇಲ್ಲ! ಇದರಿಂದ ಕೊರೊನಾ ಹೋದಂತೇ ಸೈ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಹಾಲಿನ ಬೂತ್ ಬಹುಶಃ ಬೆಕ್ಕಿಗಾಗಿ ಇರಬಹುದು
ಕಾರಲ್ಲಿ ಹೋದರೆ ಕೊರೊನಾ ತಗಲುತ್ತದೆ, ನಡೆದುಕೊಂಡು ಹೋದರೆ ತಗಲುವುದಿಲ್ಲ: ಇದು ಕರ್ನಾಟಕ ಸರ್ಕಾರದ ಸಂಶೋಧನೆ ಎಂದು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ನಿರ್ದಿಷ್ಟ ಸಮಯದ ನಂತರ ಜನರು ರಸ್ತೆಗಿಳಿಯುವಂತಿಲ್ಲ. ಹಾಲಿನ ಬೂತ್ ಪೂರ್ತಿ ತೆರೆದಿರುತ್ತದೆ. ಬಹುಶಃ ಬೆಕ್ಕಿಗಾಗಿ ಇರಬಹುದು ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಕೊರೊನಾ ವೈರಸ್ಸಿಗೆ ಸಂಸ್ಕೃತ ಅರ್ಥ ಆಗದೆ ಇದ್ದರೆ?
ಕೊರೊನಾ ತಡೆಗೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ಎಂದು ಪೇಜಾವರ ಶ್ರೀ ಹೇಳಿದ್ದನ್ನು ಮತ್ತು ಶೃಂಗೇರಿ ಶ್ರೀಗಳ ದುರ್ಗಾಪರಮೇಶ್ವರಿ ಸ್ತ್ರೋತ್ರ ಪಠಿಸಲು ಹೇಳಿದ್ದ ಹೇಳಿಕೆಗೆ, "ನಮಗೆ ಒಂದೇ ಡೌಟು, ಕೊರೊನಾ ವೈರಸ್ಸಿಗೆ ಸಂಸ್ಕೃತ ಅರ್ಥ ಆಗದೆ ಇದ್ದರೆ ಏನ್ ಮಾಡೋದು ಸ್ವಾಮಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಲಾಕ್ ಡೌನ್ ಕುರಿತು ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಿದ್ದಾರೆ. ಆದರೆ ನಮ್ಮ ಸಿಎಂ ಯಾವುದೇ ಬದಲಾವಣೆ ಇಲ್ಲದೆ ಲಾಕ್ ಡೌನ್ ಜಾರಿಗೊಳಿಸಿದ್ದಾರೆ ಎಂಬುದನ್ನು ತೋರಿಸುವ ಡೈನೋಸಾರಸ್ ಚಿತ್ರ ಪೋಸ್ಟ್ ಮಾಡಿದ್ದಾರೆ.
ಲಾಕ್ ಡೌನ್ ಥರಾನೇ, ಆದರೆ ಲಾಕ್ ಡೌನ್ ಅಲ್ಲ
ಮೇ 10ರಿಂದ 24ರವರೆಗೆ ಕಂಪ್ಲೀಟ್ ಲಾಕ್ ಡೌನ್ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಚಿತ್ರ ಮತ್ತು ಅದಕ್ಕೆ ಸಂಬಂಧಿಸಿದ "ಇದು ಲಾಕ್ ಡೌನ್ ಥರಾನೇ, ಆದರೆ ಲಾಕ್ ಡೌನ್ ಅಲ್ಲ' ಎಂದು ಹೇಳುವ ನಟ ರವಿಚಂದ್ರನ್ ಚಿತ್ರ ಹಾಕಿದ್ದಾರೆ.
ಇನ್ನು ಇತ್ತೀಚಿಗೆ ಸಿಎಂ ಅವರ ಕೆಲವು ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದ್ದು, ಅದರಲ್ಲಿ "ಕಷ್ಟ ಅಂತ ಮನೆ ಹತ್ರ ಬರಬೇಡಿ' ಎನ್ನುವ ಹೇಳಿಕೆಯೂ ಒಂದು. ಅದನ್ನು ನೆಟ್ಟಿಗರು ಟ್ರೋಲ್ ಮಾಡಿ, "ನಾಳೆಯಿಂದ ಎಲ್ಲ ಕನ್ನಡಿಗರು ತಮಿಳುನಾಡು, ಆಂಧ್ರಪ್ರದೇಶ ಅಥವಾ ಕೇರಳ ಮುಖ್ಯಮಂತ್ರಿ ಮನೆಗೆ ಹೋಗೋಣ' ಎಂದು ಪೋಸ್ಟ್ ಹಾಕಿ ರಾಜ್ಯ ಸರ್ಕಾರಕ್ಕೆ ಹಾಗೂ ಸಿಎಂಗೆ ಮುಜುಗರ ತರಿಸುವಂತಿದೆ.
ಒಂದು ದೃಢ ನಿರ್ಧಾರ ತೆಗೆದುಕೊಳ್ಳದ ಸರ್ಕಾರ
ಒಟ್ಟಿನಲ್ಲಿ ಲಾಕ್ ಡೌನ್ ಮಾರ್ಗಸೂಚಿಯನ್ನು ಪದೇ ಪದೇ ಪರಿಷ್ಕರಿದರೂ, ಯಾವುದೇ ಒಂದು ದೃಢ ನಿರ್ಧಾರ ತೆಗೆದುಕೊಳ್ಳದ ಸರ್ಕಾರವನ್ನು ಯುವ ಸಮುದಾಯ ಕಾಮಿಡಿ ದೃಶ್ಯಗಳ ತರಹ ನೋಡುತ್ತಿದೆ.
ಎಲ್ಲ ವಸ್ತುಗಳನ್ನು ಕೊಳ್ಳಲು ಒಂದು ಕಡೆ ಅವಕಾಶ ನೀಡಿ, ಮತ್ತೊಂದು ಕಡೆ ವಾಹನ, ಜನರ ಓಡಾಟಕ್ಕೆ ಬ್ರೇಕ್ ಹಾಕುತ್ತಾರೆ. ಇಂತಹ ನಿರ್ಧಾರಗಳು ಜನಸಾಮಾನ್ಯರಿಗೆ ಗೊಂದಲು ಮೂಡಿಸುವಂತಿರುತ್ತವೆ. ಒಂದು ಪೊಲೀಸರ ಹೊಡೆತ, ಮತ್ತೊಂದು ಕಡೆ ಆರ್ಥಿಕ ಹೊಡೆತ, ಅತ್ತ ಕೊರೊನಾ ಹೊಡೆತಕ್ಕೆ ಜನಸಾಮಾನ್ಯ ಸಿಲುಕಿ ನಿತ್ಯ ಪರಿತಪಿಸುವಂತಾಗಿದೆ.
Recommended Video
ಸರ್ಕಾರ ಜನರಲ್ಲಿ ಗೊಂದಲ ಮೂಡಿಸದಿರಲಿ
ಇನ್ನಾದರೂ ಜನರನ್ನಾಳುವ ಸರ್ಕಾರಗಳು ಕೊರೊನಾ ಮಹಾಮಾರಿ ನಿಯಂತ್ರಿಸುವ ಜೊತೆಗೆ, ದೃಢ ನಿರ್ಧಾರಗಳನ್ನು ತೆಗೆದುಕೊಂಡು ಗೊಂದಲ ಮೂಡಿಸದಿರಲಿ. ನಾವು ಕೊರೊನಾ ವಿರುದ್ಧ ಗೆಲ್ಲಬೇಕೆಂದರೆ ಅದು ವ್ಯಕ್ತಿಗತ ಅಂತರ, ಮಾಸ್ಕ್ ಧರಿಸುವಿಕೆ, ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರಾಜ್ಯ ಮತ್ತು ದೇಶವನ್ನು ಕೊರೊನಾ ಮುಕ್ತವಾಗಿಸೋಣ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.