ಅಡ್ಡಾದಿಡ್ಡಿ ಚಾಲನೆ: ಎಸ್ಎಂಕೆ ಮೊಮ್ಮಗನಿಂದ ಧಮ್ಕಿ
ಬೆಂಗಳೂರು, ಜೂ.30: ನಗರದಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರ ಪೊಲೀಸರಿಗೆ ಪ್ರತಿಷ್ಠಿತ ರಾಜಕಾರಣಿಗಳ ಸಂಬಂಧಿಕರ ಪುತ್ರರು ಧಮ್ಕಿ ಹಾಕಿದ ಘಟನೆ ರೇಸ್ಕೋರ್ಸ್ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಸಂಜೆ ಹೈಗ್ರೌಂಡ್ಸ್ ಸಂಚಾರ ಠಾಣೆ ಎಸ್ಐ ಶ್ರೀನಿವಾಸ್ ಮತ್ತು ಸಿಬ್ಬಂದಿ ಸಂಚಾರ ದಟ್ಟನೆಯನ್ನು ನಿಯಂತ್ರಿಸುತ್ತಿದ್ದ ವೇಳೆ 2 ಜಾಗ್ವಾರ್ ಮತ್ತು ಮತ್ತು ಒಂದು ಪೊರ್ಷೆ ಕಾರುಗಳು ಸ್ಪರ್ಧೆಗೆ ಬಿದ್ದವರಂತೆ ಅತಿ ವೇಗವಾಗಿ ಹೋಗುತ್ತಿದ್ದನ್ನು ಕಂಡು ಪೊಲೀಸರು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ.
ಆದರೆ ಕಾರು ನಿಲ್ಲಿಸದೇ ಮೂವರು ಯುವಕರು ಸಮೀಪದ ತಾಜ್ ವೆಸ್ಟೆಂಡ್ ಹೋಟೆಲ್ನ ಆವರಣಕ್ಕೆ ವಾಹನ ನುಗ್ಗಿಸಿದ್ದಾರೆ. ಬೈಕ್ನಲ್ಲಿ ಹಿಂಬಾಲಿಸಿ ಹೋದ ಶ್ರೀನಿವಾಸ್ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸುವಂತೆ ಚಾಲಕರಿಗೆ ಸೂಚಿಸಿದ್ದಾರೆ. ಅಲ್ಲದೇ ಸೈಲೆನ್ಸರ್ ಕರ್ಕಶ ಶಬ್ದ ಉಂಟು ಮಾಡಿದ್ದಕ್ಕೆ ಚಲನಾ ಪರವಾನಗಿ ಠಾಣೆಗೆ ತರುವಂತೆ ತಾಕೀತು ಮಾಡಿದ್ದಾರೆ.
ನಾನು ಎಸ್ಎಂ ಕೃಷ್ಣ ಮೊಮ್ಮಗ: ಪೊಲೀಸರು ಪ್ರಶ್ನಿಸಿದ್ದಕ್ಕೆ ಕಾರಿನಲ್ಲಿದ್ದ ಕೌಶಿಕ್ ಏಯ್ ನಾನು ಯಾರು ಗೊತ್ತಾ? ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಮೊಮ್ಮಗ, ಜಾಸ್ತಿ ಮಾತನಾಡಿದರೆ ನಿಮ್ಮನ್ನೆಲ್ಲಾ ಸಸ್ಪೆಂಡ್ ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ.
ಕೌಶಿಕ್ ಬೆದರಿಕೆ ಬಗ್ಗದ ಎಸ್ಐ ಶ್ರೀನಿವಾಸ್ ಮೂವರನ್ನು ಠಾಣೆಗೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ಅದಿತ್ಯ ರೆಡ್ಡಿ ನಾನು ಸಚಿವ ರಾಮಲಿಂಗ ರೆಡ್ಡಿ ಸಂಬಂಧಿಕ ಎಂದು ಹೇಳಿ ಪೊಲೀಸರಿಗೆ ನಿಂದಿಸಿದ್ದಾರೆ.[ಟ್ರಾಫಿಕ್ ಪೊಲೀಸ್ ಪೇದೆ ಮೇಲೆ ಶಾಸಕ ಭೈರತಿಯಿಂದ ಹಲ್ಲೆ]
ಈ ಹೊತ್ತಿಗೆ ಸುದ್ದಿವಾಹಿನಿಗಳಿಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೌಶಿಕ್ ಪೋಷಕರು ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
2700 ರೂ.ದಂಡ ವಸೂಲು: ಸಂಚಾರ ಪೊಲೀಸರು ಅಪಾಯಕಾರಿ ಚಾಲನೆ, ಅಡ್ಡಾದಿಡ್ಡಿ ಚಾಲನೆ, ಪೊಲೀಸರ ಜೊತೆ ಅನುಚಿತ ವರ್ತನೆ ,ಟಿಂಡೆಡ್ ಗ್ಲಾಸ್ ಬಳಕೆ, ವಾಹನ ಸಂಚಾರಕ್ಕೆ ಅಡ್ಡಿ, ಪೊಲೀಸ್ ಆಜ್ಞೆ ಉಲ್ಲಂಘನೆ, ವಿರುದ್ಧ ಪ್ರಕರಣ ದಾಖಲಿಸಿ ತಲಾ 900 ರಂತೆ 2700 ರೂ.ದಂಡ ವಸೂಲಿ ಮಾಡಿದ್ದಾರೆ.
ನನ್ನ ಮೊಮ್ಮಕ್ಕಳಲ್ಲ: ಸಂಚಾರ ನಿಮಮವನ್ನು ಉಲ್ಲಂಘನೆ ಮಾಡಿರುವ ಯುವಕರಿಗೂ ನನ್ನ ಮೊಮ್ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮೊಮ್ಮಕ್ಕಳು ಲಂಡನ್ ಮತ್ತು ಅಮೆರಿಕದಲ್ಲಿದ್ದಾರೆ ಎಂದು ಎಸ್ಎಂ ಕೃಷ್ಣ ಖಾಸಗಿ ವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.[ಟ್ರಾಫಿಕ್ ರೂಲ್ಸ್ ಬ್ರೇಕ್: ಮಿರ್ಜಿ ಪುತ್ರರು ಮಾಡಿದ್ದೇನು?]
ಮೂವರು ಯಾರು: ಸದಾಶಿವ ನಗರದ ಕೌಶಿಕ್ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹಾಗೂ ಜಯನಗರದ ಅದಿತ್ಯ ರೆಡ್ಡಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯವರ ದೂರದ ಸಂಬಂಧಿಕರ ಮಕ್ಕಳು. ಸಿದ್ದಾಂತ್ ಸರಾಫ್ ಬಿಟಿಎಂ ಲೇಔಟ್ನ ಉದ್ಯಮಿಯೊಬ್ಬರ ಪುತ್ರ ಎನ್ನಲಾಗಿದೆ. [ಕೈಕಾಲು ಮುರಿಸುತ್ತೇನೆ : ಪತ್ರಕರ್ತನಿಗೆ ಸಚಿವ ಬೆದರಿಕೆ]