ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ
ಬೆಂಗಳೂರು, ಜ. 04: ಪಠಾಣ್ ಕೋಟ್ ನಲ್ಲಿ ಬಾಂಬ್ ನಿಷ್ಕ್ರಿಯ ನಿರತರಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ) ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರ ವೀರ ಮರಣಕ್ಕೆ ಇಡೀ ದೇಶಕ್ಕೆ ಕಂಬನಿ ಮಿಡಿದಿದೆ. ಕೇರಳ ಮೂಲದ ನಿರಂಜನ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ.
ಪಂಜಾಬಿನ ಪಠಾಣ್ ಕೋಟ್ ನಲ್ಲಿ ಉಗ್ರರ ದಾಳಿ ನಡುವೆ ಗ್ರೇನೇಡ್ ನಿಷ್ಕ್ರಿಯಗೊಳಿಸಲು ಹೋದ ನಿರಂಜನ್ ಅವರ ಸಾವಿನೊಂದಿಗೆ ದೇಶ ಏಳು ಯೋಧರನ್ನು ಕಳೆದುಕೊಂಡ ಸೂತಕದಲ್ಲಿದೆ. 'ನಾನು ಆಪರೇಷನ್ ನಲ್ಲಿದ್ದೇನೆ ಮತ್ತೆ ಕರೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿರುವ ತಮ್ಮ ತಂದೆಗೆ ಕೊನೆ ಬಾರಿಗೆ ನಿರಂಜನ್ ಹೇಳಿದ್ದರು. ಅದರೆ, ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]
ಈ ಹಿಂದೆ ಭಯೋತ್ಪಾದಕರು ಮುಂಬೈ ದಾಳಿ ಸಂದರ್ಭದಲ್ಲಿ ಬೆಂಗಳೂರಿನ ವೀರ ಯೋಧ ಉನ್ನೀಕೃಷ್ಣನ್ ಹತರಾಗಿದ್ದರು. ಅವರಿಗೆ ಸರ್ಕಾರ ನೀಡಿದ ಸಹಕಾರದಂತೆಯೇ ಈಗಲೂ ನಿರಂಜನ್ ಕುಟುಂಬಕ್ಕೆ ಸಹಕಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ನಿರಂಜನ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿ, ಮೃತ ಯೋಧನ ಕುಟುಂಬಕ್ಕೆ 30 ಲಕ್ಷ ರು ಪರಿಹಾರ ಘೋಷಿಸಿದರು.[ವೀರಯೋಧ ಸಂದೀಪ್ ಅವರಿಗೆ ಅಂತಿಮ ನಮನ]
ಬೆಂಗಳೂರಿನ ದೊಡ್ಡಬೊಮ್ಮಸಂದ್ರದ ನ್ಯೂ ಬಿಇಎಲ್ ಶಾಲಾ ಮೈದಾನದಲ್ಲಿ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದ ನಂತರ, ಮೃತ ನಿರಂಜನ್ ಕುಮಾರ್ ದೇಹವನ್ನು ಇಲ್ಲಿಂದ ಜಾಲಹಳ್ಳಿ ವಾಯುನೆಲೆಗೆ ಕೊಂಡೊಯ್ದು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಪಾಲಕ್ಕಾಡಿಗೆ ಸಾಗಿಸಲಾಯಿತು.ನಿರಂಜನ್ ಅವರ ಕುರಿತಂತೆ ಇನ್ನಷ್ಟು ಮಾಹಿತಿ, ಅವರ ಕಾಲೇಜು ದಿನಗಳ ಗೆಳೆಯರ ಆಶಯ ಏನು ಮುಂದೆ ಓದಿ...
ಮಾಧ್ಯಮಗಳೇ, ದಯವಿಟ್ಟು, ನೆಮ್ಮದಿಯಾಗಿರಲು ಬಿಡಿ
ಮಾಧ್ಯಮಗಳೇ ದಯವಿಟ್ಟು ನಿರಂಜನ್ ಅವರ ಕುಟುಂಬವನ್ನು ನೆಮ್ಮದಿಯಾಗಿರಲು ಬಿಡಿ. ಅವರಿಗೆ ಏನಾದ್ರೂ ಹೇಳಬೇಕೆಂದರೆ ನಿಮ್ಮ ಮುಂದೆ ಬರುತ್ತಾರೆ. ಅವರ ನೆಮ್ಮದಿಗೆ ಭಂಗ ತರಬೇಡಿ ಎಂದು ನಿರಂಜನ್ ಅವರ ಗೆಳೆಯರು ಮನವಿ ಮಾಡಿಕೊಂಡಿದ್ದಾರೆ. ಮೇಜರ್ ಸಂದೀಪ್ ಅವರ ನಿಧನದ ಸಮಯದಲ್ಲಿ ಅವರ ಕುಟುಂಬಕ್ಕೆ ಉಂಟಾದ ಇರಸು ಮುರುಸು ನಿರಂಜನ್ ಕುಟುಂಬಕ್ಕೆ ಆಗುವುದು ಬೇಡ ಎಂದಿದ್ದಾರೆ.[ಪಠಾಣ್ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]
ಬೆಂಗಳೂರಿನ ಹುಡುಗ ನಿರಂಜನ್ ಕುಮಾರ್
ಬಿಇಎಲ್ ನ ಉದ್ಯೋಗಿ ಶಿವರಂಜನ್ ಇಕೆ ಅವರ ಪುತ್ರ ನಿರಂಜನ್ ಕುಮಾರ್ ಅವರು ಬೆಂಗಳೂರಿನ ಶಾಲೆಯಲ್ಲಿ ಓದಿದರು. ನಂತರ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಓದಿದರು. 1999 ರಿಂದ 2002ರ ತನಕ ಈ ಕಾಲೇಜಿನಲ್ಲಿ ಓದಿದ ಬಳಿಕ ಅಂತಿಮ ವರ್ಷ ಎಂವಿ ಜಯರಾಮ್ ಕಾಲೇಜಿಗೆ ಶಿಫ್ಟ್ ಆದರು. [ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಟುಂಬಕ್ಕೆ 30 ಲಕ್ಷ ಪರಿಹಾರ]
ನಿರಂಜನ್ ಅವರದ್ದು ಪಾಲಕ್ಕಾಡ್ ಮೂಲದ ಕುಟುಂಬ
ನಿರಂಜನ್ ಅವರದ್ದು ಪಾಲಕ್ಕಾಡ್ ಮೂಲದ ಕುಟುಂಬವಾದರೂ 40ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಆದರೆ, ವಿಶೇಷ ದಿನಗಳಲ್ಲಿ ಪಾಲಕ್ಕಾಡ್ ಜಿಲ್ಲೆಯ ಎಲಂಬಚ್ಚೇರಿ ಗ್ರಾಮದ ಮೂಲ ಮನೆಗೆ ಭೇಟಿ ನೀಡುತ್ತಾರೆ. ಸೆಪ್ಟೆಂಬರ್ ನಲ್ಲಿ ಓಣಂ ಆಚರಿಸಿಕೊಂಡಿದ್ದರು.ಗೆಳೆಯರೊಡನೆ ಆತ್ಮೀಯವಾಗಿ ಬೆರೆಯುತ್ತಿದ್ದ ನಿರಂಜನ್ ಅವರಿಗೆ ಭಾರತೀಯ ಸೇನೆ ಬಗ್ಗೆ ಅರಿವಿತ್ತು. ಅದರೆ, ಸೇನೆ ಸೇರುವ ತೀವ್ರ ಬಯಕೆ ಉಂಟಾಗಿದ್ದು ಪದವಿ ಪಡೆದ ನಂತರ ಎಂದು ಅವರ ಗೆಳೆಯರು ಹೇಳುತ್ತಾರೆ.
ಸೇನೆ ಬಗ್ಗೆ ಆಸಕ್ತಿ ಬೆಳೆಯಲು ಸೋದರ ಕಾರಣ
ನಿರಂಜನ್ ಅವರ ಅಣ್ಣ ಕೂಡಾ ಭಾರತೀಯ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ನಂತರ ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆ ಬರೆದಿದ್ದ ನಿರಂಜನ್ ಗೆ ವಾಯುಸೇನೆ ಅಥವಾ ಜಲಸೇನೆ ಸೇರುವ ಕನಸಿತ್ತು. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಆರ್ಮಿ ಸೇರಿದ್ದ ನಿರಂಜನ್ ಅವರು ಎನ್ ಎಸ್ ಜಿ ದಳ ಸೇರಿ ದೆಹಲಿಯಲ್ಲಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿದ್ದರು.
ಮದುವೆ ನಂತರ ಎನ್ ಎಸ್ ಜಿ ಸೇರಿದ್ದ ನಿರಂಜನ್
ಕೇರಳದಲ್ಲಿ ಡಾ. ಕೆಜಿ ರಾಧಿಕಾ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ನಿರಂಜನ್ ಅವರಿಗೆ ಎರಡು ವರ್ಷ ವಯಸ್ಸಿನ ವಿಸ್ಮಯ ಎಂಬ ಹೆಸರಿನ ಹೆಣ್ಣು ಕೂಸಿದೆ. ಮದುವೆ ಬಳಿಕೆ ಎನ್ ಎಸ್ ಜಿ ಬಾಂಬ್ ನಿಷ್ಕ್ರಿಯ ದಳ ಸೇರಿದ್ದ ನಿರಂಜನ್ ಅವರು ದಳದ ಮುಖ್ಯಸ್ಥರಾಗಿ ಇತ್ತೀಚೆಗೆ ಬಡ್ತಿ ಪಡೆದಿದ್ದರು.
ಸೋದರಿ ಭಾಗ್ಯ ಲಕ್ಷ್ಮಿ ಹೇಳಿಕೆ
ನನ್ನ ತಮ್ಮ ಯುದ್ಧಭೂಮಿಗೆ ತೆರಳಿ ತನ್ನ ಕರ್ಮವನ್ನು ನಿಭಾಯಿಸಿದ ಅರ್ಜುನ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ನಿರಂಜನ್ ಗೆ ಸೋದರ, ಸೋದರಿ ಮೇಲೆ ತುಂಬಾ ಅಕ್ಕರೆ ಇತ್ತು. ಕನಸು ಬೆನ್ನು ಹತ್ತಿ ಚಿಕ್ಕ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿದ್ದಾನೆ. ಪಾಲಕ್ಕಾಡ್ ಅಜ್ಜಿ ಕಂಡರೆ ನಿರಂಜನ್ ಗೆ ತುಂಬಾ ಪ್ರೀತಿ ಇತ್ತು ಎಂದಿದ್ದಾರೆ.