ಬುಡಕಟ್ಟು ಜನರಿಗೆ ಅರಣ್ಯದಲ್ಲಿ 2 ಎಕರೆ ಜಮೀನು: ಲಕ್ಷ್ಮೀನಾರಾಯಣ
ಬೆಂಗಳೂರು, ಸೆಪ್ಟೆಂಬರ್ 14: ಬುಡಕಟ್ಟು ಸಮುದಾಯಗಳು ಅರಣ್ಯದಲ್ಲಿ ಎರಡು ಎಕರೆ ಉಳುಮೆ ಮಾಡಿದರೆ ಆ ಜಾಗವನ್ನು ಸರ್ಕಾರ ಅವರ ಹೆಸರಿಗೆ ಮಾಡಿಕೊಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ರಾಷ್ಟ್ರೀಯ ಪೌಷ್ಠಿಕ ಮಾಸ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಬುಡಕಟ್ಟು ಜನರು ಎಕರೆವರೆಗೆ ಜಮೀನುಸಾಗುವಳಿ ಮಾಡಿದ್ದರೆ. ಆ ಜಮೀನನ್ನು ಸರ್ಕಾರ ಅವರ ಹೆಸರಿಗೆ ಮಾಡಿಕೊಡುತ್ತದೆ. ಬುಡಕಟ್ಟು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಬುಡಕಟ್ಟು ನಿವಾಸಿಗಳ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕ
ಈಗಾಗಲೇ ಸರ್ಕಾರ 46 ಸಾವಿರ ಎಕರೆ ಜಮೀನು ಬುಡಕಟ್ಟು ಜನರಿಗೆ ನೀಡಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಈ ಯೋಜನೆ ಸದುಪಯೋಗಪಡೆಸಿಕೊಳ್ಳಬೇಕು ಎಂದು ಹೇಳಿದರು. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಲು ಸಾಕಷ್ಟು ಮಾರ್ಗಗಳಿವೆ. ಆದರೆ, ಬುಡಕಟ್ಟು ಜನರಿಗೆ ಪೌಷ್ಠಿಕ ಆಹಾರದ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಇದೆ.
ಬುಡಕಟ್ಟು ಜನರು ಆರು ತಿಂಗಳು ತಮ್ಮ ಆಹಾರ ಸಂಗ್ರಹಿಸಿ ಇಟ್ಟು ಕೊಳ್ಳುವ ಪರಿಸ್ಥಿತಿ ಇದೆ. ಸರ್ಕಾರ ಅವರಿಗೆ ಆರು ತಿಂಗಳಿಗೆ ಆಗುವಷ್ಟು ಪೌಷ್ಠಿಕ ಆಹಾರ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬುಡಕಟ್ಟು ಜನರಿಗೆ ಸರ್ಕಾರ ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ನೀಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಬುಡಕಟ್ಟು ಜನರು ಸಂಗ್ರಹಿಸಿರುವ ಕಾಡು ಉತ್ಪನ್ನಗಳನ್ನು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಮಾರುಕಟ್ಟೆಯ ಸಮಸ್ಯೆ ಇದೆ. ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಬುಡಕಟ್ಟು ನಿರ್ದೇಶನಾಲಯದಿಂದ ವ್ಯವಸ್ಥೆ ಮಾಡುತ್ತೇವೆ.
ಹಕ್ಕು ಪತ್ರಕ್ಕಾಗಿ ಆದಿವಾಸಿಗಳಿಂದ ಅರಣ್ಯದಲ್ಲಿ ಪ್ರತಿಭಟನೆ
ಬುಡಕಟ್ಟು ಮಕ್ಕಳನ್ನು ಏಕಲವ್ಯ, ರಾಣಿಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸೇರಿಸಿದರೆ ಸರ್ಕಾರ ಎಲ್ಲ ರೀತಿಯ ಸೌಕರ್ಯ ನೀಡುತ್ತದೆ. ಬುಡಕಟ್ಟು ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತರಿರುತ್ತಾರೆ. ಅಂತ ಮಕ್ಕಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಈ ಬಗ್ಗೆ ಬುಡಕಟ್ಟು ನಿರ್ದೇಶನಾಲಯ ಪ್ರಯತ್ನ ನಡೆಸಬೇಕು ಎಂದರು.
ಬುಡಕಟ್ಟು ಜನರ ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಅವರ ಆರೋಗ್ಯ ಚಿಕಿತ್ಸೆಗೆ ಮೊಬೈಲ್ ಚಿಕಿತ್ಸಾ ಕೇಂದ್ರದ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಬುಡಕಟ್ಟು ಜನರಿಗೆ ಏನಾದರೂ ಸಮಸ್ಯೆ ಇದ್ದರೆ ದೂರು ನೀಡಿದರೂ ಸರ್ಕಾರ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.