ಬೆಂಗಳೂರು ಬಳಿಯ ಕುದುರೆಗೆರೆ 'ಕಾಡು' ಬಾ ಅನ್ನುತ್ತಿದೆ
ಬೆಂಗಳೂರು, ಡಿ. 6 : ಟ್ರೆಕ್ಕಿಂಗ್ ಹೆಸರು ಕೇಳಿದ ಕೂಡಲೆ ಹದಿಹರೆಯದವರು ಮಾತ್ರವಲ್ಲ ಜೀವನೋತ್ಸಾಹ ಇರುವ ಹಿರಿಯರ ಕಿವಿಗಳು ಕೂಡ ನಿಮಿರುತ್ತವೆ. ನಾಡಿನಿಂದ ದೂರ ಹೋಗಿ ಸ್ವಚ್ಛಂದವಾಗಿ ಬೆಳೆದಿರುವ ಹಸುರಿನ ನಡುವಿನಲ್ಲಿ, ಸ್ವಚ್ಛ ಗಾಳಿಯನ್ನು ಸೇವಿಸಿ 'ಫ್ರೆಶ್' ಆಗಿ ಬರಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ.
ಅದರಲ್ಲೂ, ಗಿಡಮರಗಳಿಂದ ತುಂಬಿದ, ವೈವಿಧ್ಯಮಯ ಪ್ರಾಣಿಪಕ್ಷಿಗಳನ್ನು ಹೊಂದಿರುವ, ಜೀರ್ ಜೀರ್ ಜೀರುಂಡೆ ಸಂಗೀತ ಕೇಳುತ್ತ ಕಾಡಿನಲ್ಲಿ ಅಲೆದಾಡುವ ಮಜವೇ ಬೇರೆ. ಆದರೆ, ಇತ್ತೀಚೆಗೆ ಇಂಥ ವಾತಾವರಣ ನಶಿಸಿ ಹೋಗುತ್ತಿದೆ, ಕಾಡುಗಳು ಬರಿದಾಗುತ್ತಿವೆ, ಕಾಡುಪ್ರಾಣಿಗಳು ನೇರವಾಗಿ ಹತ್ತಿರದ ಹಳ್ಳಿಗಳಿಗೆ ನುಗ್ಗಿ ದನಕರುಗಳನ್ನು ಮಾತ್ರವಲ್ಲ ಮನುಷ್ಯರನ್ನೂ ಸ್ವಾಹಾ ಮಾಡುತ್ತಿವೆ.
ಕೆಲ ದಶಕಗಳ ಹಿಂದೆ ಈಗಿನ ಬೆಂಗಳೂರಿನಲ್ಲಿಯೂ ಸಾಕಷ್ಟು ಕಾಡಿತ್ತು. ಈಗ ಕಾಂಕ್ರೀಟ್ ಕಾಡು ತುಂಬಿಕೊಂಡಿದೆ. ಇಷ್ಟಿದ್ದರೂ ಬೆಂಗಳೂರು ಸುತ್ತಮುತ್ತಲು ಇನ್ನೂ ಸ್ವಲ್ಪ 'ಕಾಡು' ಉಳಿದುಕೊಂಡಿದೆ. ಅದು ಕೂಡ ಅಳಿದುಹೋಗುವ ಮುನ್ನ ವಿದ್ಯಾರ್ಥಿಗಳಿಗೆ ಅದರ ಸೌಂದರ್ಯವನ್ನು ಕಣ್ತುಂಬಿಸಿಕೊಡಬೇಕು ಎಂದು ಆಚಾರ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನು ಬೆಂಗಳೂರು ಬಳಿಯಲ್ಲಿಯೇ ಇರುವ ಕಾಡಿಗೆ ಚಾರಣಕ್ಕೆಂದು ಕರೆದುಕೊಂಡು ಹೋಗಲಾಗಿತ್ತು.
ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ದಾಸನಪುರ ಹೋಬಳಿ, ಆಲೂರು ಬಳಿಯಿರುವ ಕುದುರೆಗೆರೆ ಬಳಿಯ ಕಾಡಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್. ಗುರುರಾಜ್ ಅವರು ವಿದ್ಯಾರ್ಥಿಗಳ ದಂಡನ್ನು ಕಟ್ಟಿಕೊಂಡು ಹೋಗಿ ಅಲ್ಲಿನ ಪರಿಸರ, ವಿವಿಧ ತಳಿಯ ಗಿಡಗಳು, ಪಕ್ಷಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಚಾರಣದ ಮನರಂಜನೆಯ ಜೊತೆಗೆ ಅಧ್ಯಯನವೂ ಆಯಿತು. ಈ ಟ್ರೆಕ್ಕಿಂಗ್ ವಿವರಗಳು ಕೆಳಗಿನ ಸ್ಲೈಡ್ ನಲ್ಲಿವೆ.
ಕಾಡು ಅಂದ್ರೆ ಕಾಡು, ಅಲ್ಲ ಅಂದ್ರೆ ಅಲ್ಲ
ಒಂದಾನೊಂದು ಕಾಲದಲ್ಲಿ ಇಲ್ಲಿ ದಟ್ಟವಾದ ಕಾಡಿತ್ತಂತೆ. ಹಾಗೆ ಹೇಳಿಕೊಂಡು ಈಗ ಸಂತೋಷಪಡಬೇಕಷ್ಟೆ. ಈಗ ಇಲ್ಲಿ ಸಾಕಷ್ಟು ಗಿಡಮರಗಳಿವೆಯಾದರೂ ಕಾಡು ಅಂತ ಅನಿಸುವುದೇ ಇಲ್ಲ. ಆದರೂ, ಅಷ್ಟಾದರೂ ಉಳಿದುಕೊಂಡಿದೆಯಲ್ಲ? ಅದನ್ನಾದರೂ ಉಳಿಸೋಣ.
ಮರ ಅಪ್ಪಿಕೋ ಚಳವಳಿಗೆ ಜೀವ
ಆಚಾರ್ಯ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಕಾಳಜಿಯನ್ನು ಮೆಚ್ಚಬೇಕಾದ್ದೆ. ವಿದ್ಯಾರ್ಥಿನಿಯರು ಅಲ್ಲಿದ್ದ ಬೃಹತ್ತಾದ ಮರವನ್ನು ಅಪ್ಪಿಕೊಂಡು ದಯವಿಟ್ಟು ಕಾಡನ್ನು ಉಳಿಸಿ ಎಂದು ಹೇಳುತ್ತಿದ್ದಾರೆ. ಅರಣ್ಯ ಸಚಿವರೆ ಇತ್ತ ಸ್ವಲ್ಪ ಗಮನ ಕೊಡಿ.
ಪರಿಸರವಾದಿ ಪ್ರಿನ್ಸಿ ಗುರುರಾಜ್
ಪ್ರಿನ್ಸಿಪಾಲ್ ಪ್ರೊ.ಗುರುರಾಜ್ ಅವರು ಸ್ವತಃ ಪರಿಸರವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಪರಿಸರದ ಉಳಿವಿನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕೊಟ್ಟರು. ಜೊತೆಗೆ ಗಿಡಮರ, ಕೀಟಗಳ ಅಧ್ಯಯವನವೂ ಸಾಕಷ್ಟು ತಿಳಿವಳಿಕೆಯನ್ನು ನೀಡಿತು.
ಜೇಡ ಹೆಣೆದ ಕಲೆಯ ಬಲೆ
ಜೇಡರ ಬಲೆಯನ್ನು ಎಷ್ಟು ಜನ ವಿಸ್ಮಯದಿಂದ, ಕೌತುಕದಿಂದ ನೋಡುತ್ತೀರಿ ಹೇಳಿ? ಆ ಬಲೆಯಲ್ಲೂ ಕಲೆಯಿದೆ, ಅದರ ಜೀವನಸ್ವಾರಸ್ಯವಿದೆ, ಬದುಕಿದೆ ಬವಣೆಯಿದೆ. ಮತ್ತೆಲ್ಲಾದರೂ ಜೇಡರ ಬಲೆ ಕಂಡರೆ ಛೀ ಅಂತ ಹರಿದುಹಾಕದೆ, ಕೌತುಕದಿಂದ ನೋಡಿರಿ.
ಬಾಂಬೂ ಗಿಡವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿ
ಬಾಂಬೂ ಗಿಡ ಕಾಡಿಗೆ ಎಷ್ಟು ಅಗತ್ಯ, ಬಾಂಬೂವಿನಿಂದ ನೆಲ ಎಷ್ಟು ಫಲವತ್ತಾಗುತ್ತದೆ ಎಂಬ ವಿವರಗಳನ್ನು ಪ್ರೊ.ಗುರುರಾಜ್ ಅವರು ಅತ್ಯಂತ ಆಸಕ್ತಿಕರವಾಗಿ ಹೇಳಿದರು.
ರುಚಿರುಚಿಯಾದ ಹಣ್ಣು ನಂಗೊಂದು ಪ್ಲೀಸ್
ಕಾಡಿನಲ್ಲಿ ಸಿಕ್ಕಿದ ಪೊದೆಯೊಂದರಲ್ಲಿ ಬಿಟ್ಟ ಹಣ್ಣುಗಳನ್ನು ಆಯ್ದು ತಿನ್ನುತ್ತಿರುವ ವಿದ್ಯಾರ್ಥಿಗಳು. ಕಾಡಿನಲ್ಲಿ ಕೌಳಿ ಹಣ್ಣು, ನೇರಲ ಹಣ್ಣು, ಎಣಚಿ ಹಣ್ಣುಗಳನ್ನು ಎಂದಾದರೂ ತಿಂದಿದ್ದೀರಾ? ತಿನ್ನಲಾದರೂ ಒಂದು ಬಾರಿ ಕಾಡಿಗೆ ಹೋಗಿಬನ್ನಿ.
ಆದ್ಯಾವ ಪ್ರಾಣಿ ಇತ್ತಪ್ಪಾ ಅಲ್ಲಿ?
ಕಾಡಿನಲ್ಲಿ ಪ್ರಾಣಿಗಳೆಲ್ಲಿವೆ ಎಂದು ಹುಡುಕುವಂಥ ಸಂದರ್ಭ ಈಗ ಬಂದಿದೆ. ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಇದ್ದವುಗಳಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಇನ್ನೇನು ಮಾಡ್ತಾವೆ? ಕಾಡಿನಿಂದ ನಾಡಿಗೆ ಬಂದು ಆಹಾರ ಹುಡುಕ್ತಾವೆ! ಪರಿಸರ ಅಸಮತೋಲನವೇ ಇದಕ್ಕೆಲ್ಲ ಕಾರಣ.
ಕಾಡಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ
ಕಾಡಿನಲ್ಲಿ ಕಾಣಿಸುವ ಒಂದೊಂದು ಸಣ್ಣಸಣ್ಣ ಸಂಗತಿಗಳು ಕುತೂಹಲಕರವಾಗಿರುತ್ತವೆ. ಅದನ್ನು ಅಷ್ಟೇ ಕುತೂಹಲದಿಂದ ನೋಡುವ ಆಸಕ್ತಿ ನಮ್ಮಲ್ಲಿರಬೇಕು. ಅಯ್ಯೋ, ಕಾಡಿಗೆ ಹೋಗಿ ಯಾರು ಕಾಲು ನೊಯ್ಸಿಕೊಳ್ಳುತ್ತಾರೆ ಎಂದರೆ ಅಲ್ಲೇ ಕೂಡಿರಿ, ಯಾರು ಬೇಡಂತಾರೆ!