ಸಾರಿಗೆ ನೌಕರರ ಮುಷ್ಕರ: ಬಸ್ಗಳಿಗೆ ಕಲ್ಲೇಟು ನೀಡಿದ ಚಾಲಕರ ಕೈಗೆ ಬೇಡಿ
ಬೆಂಗಳೂರು, ಏಪ್ರಿಲ್ 19: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಗಳಿಗೆ ಕಲ್ಲು ಬೀಸಿ ಜಖಂಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೂವರು ನೌಕರರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಹಳ್ಳಿ ಡಿಪೋನ ಚಾಲಕ ಸೀತೇಗೌಡ, ಚಾಲಕ ಕಂ ನಿರ್ವಾಹಕ ತಿಮ್ಮೇಗೌಡ, ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಜೀವನ್ ಬಂಧಿತ ಆರೋಪಿಗಳು. ಇವರ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪ ಹೊರಿಸಲಾಗಿದೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದರು.
ಬಸ್ಗೆ ಕಲ್ಲು ಹೊಡೆಯುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು. ಕೆಲ ದಿನಗಳ ಹಿಂದೆ ಬಿಎಂಟಿಸಿ ಬಸ್ಗೆ ಕಲ್ಲು ತೂರಿ ಜಖಂಗೊಳಿಸಿದ್ದ ಆರೋಪ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ , ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.
ಮುಂದುವರೆದ ಹೋರಾಟ: ಒಂದಡೆ ಸರ್ಕಾರದ ಹಠಮಾರಿತನ ಧೋರಣೆ. ಮತ್ತೊಂದಡೆ ಮುಷ್ಕರ ನಿರತ ಸಾರಿಗೆ ನೌಕರರ ದೌಲತ್ತು. ಅಂತೂ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಹದಿಮೂರು ದಿನ ಕಳೆದಿವೆ. ಇಡೀ ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರ ಕೈಯಲ್ಲಿಟ್ಟು ಸಾರಿಗೆ ಇಲಾಖೆ ಕೈತೊಳೆದುಕೊಂಡಿದೆ. ಇನ್ನೊಂದಡೆ ನಮ್ಮ ಬೇಡಿಕೆ ಈಡೇರುವ ವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಇದೀಗ ಅಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಲು ತಯಾರಿ ನಡೆಸಿದ್ದಾರೆ. ಬಿಎಂಟಿಸಿ ನೌಕರರ ಸಂಧಾನ ಕುರಿತ ಮಾತುಕತೆಗಳು ಸದ್ಯದ ಮಟ್ಟಿಗೆ ಫಲಪ್ರದ ನೀಡುವ ಹಾಗೆ ಕಾಣುತ್ತಿಲ್ಲ. ಸಾರಿಗೆ ನೌಕರರ ಹೋರಾಟದ ನಾಯಕನಾಗಲು ಹೋಗಿ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಸಾರಿಗೆ ನೌಕರರಿಗೆ ಉತ್ತರ ನೀಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.