ಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳು
ಬೆಂಗಳೂರು, ಮಾರ್ಚ್ 20: ಮತದಾನ ನೋಂದಣಿಗೆ ತೃತೀಯ ಲಿಂಗಿಗಳು ಹಿಂದೇಟು ಹಾಕುತ್ತಿದ್ದು ಮತದಾನಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಸುಮಾರು 70 ಸಾವಿರ ತೃತೀಯ ಲಿಂಗಿಗಳಿದ್ದು, ಅದರಲ್ಲಿ ಕೇವಲ 4700 ಮಂದಿ ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತದಾನದ ಮಹತ್ವ ಕುರಿತು ಚುನಾವಣಾ ಆಯೋಗ ಎಷ್ಟೇ ಜಾಗೃತಿ ಕಾರ್ಯಕ್ರಮ ಆಯೋಜಿಸಿದರೂ ತೃತೀಯ ಲಿಂಗಿಗಳ ಪೈಕಿ ಮತಗಟ್ಟೆಗೆ ತೆರಳಿ ಮತದಾನ ಮಾಡುವವರ ಸಂಖ್ಯೆ ಕೇವಲ ಶೇ.5ರಷ್ಟು ಮಾತ್ರ.
ಪರ್ಸ್ ಕಿತ್ತುಕೊಂಡ ತೃತೀಯ ಲಿಂಗಿಗಳು, ಕಹಿ ಅನುಭವ ಹಂಚಿಕೊಂಡ ಟೆಕ್ಕಿ
ಇನ್ನು ಕೆಲವರು ಗುರುತಿನ ಚೀಟಿ ಇದ್ದರೂ ಮತದಾನ ಮಾಡಲು ಹಿಂದೇಟು ಹಾಕುತ್ತಾರೆ. ಆದಾಗ್ಯೂ 2013,2014 ಹಾಗೂ 2018ರ ಚುನಾವಣೆಗೆ ಹೋಲಿಸಿದಲ್ಲಿ ತೃತೀಯ ಲಿಂಗಿಗಳ ಮತದಾನ ಪ್ರಮಾಣ ಸತತ ಹೆಚ್ಚುತ್ತಾ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ.
ಶಿವಶಕ್ತಿ, ಜೋಗಪ್ಪ, ಮಂಗಳಮುಖಿ, ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ತೃತೀಯಲಿಂಗಿಗಳಿದ್ದು, ಈ ವರ್ಗವೂ ಮತದಾನದಿಂದ ಹೊರಗುಳಿಯಬಾರದು ಎಂದು ಚುನಾವಣಾ ಆಯೋಗ 2012ರಲ್ಲಿ ಮತದಾರರ ಪಟ್ಟಿಯಲ್ಲಿ ಇತರೆ ಕಾಲಂ ಸೃಷ್ಟಿಸಿ ನೋಂದಣಿ ಮಾಡುತ್ತಿವೆ.
ಕೆಲವೇ ಕೆಲವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿದ್ದಾರೆ. ಗುರುತಿನ ಚೀಟಿ ಹೊಂದಿದ್ದಾರೆ. ಬಹುತೇಕರಿಗೆ ಯಾವುದೇ ದಾಖಲೆಗಳೂ ಇಲ್ಲ, ದಾಖಲೆ ಮಾಡಿಸಿಕೊಳ್ಳಲೂ ಇಷ್ಟ ಪಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ.