ಮಾಧ್ಯಮ ಸಂಸ್ಥೆ ವಿರುದ್ಧ ಲಿಂಗ ಅಲ್ಪಸಂಖ್ಯಾತರ ಆಕ್ರೋಶ
ಬೆಂಗಳೂರು, ಅಕ್ಟೋಬರ್, 20: ಲಿಂಗ ಅಲ್ಪ ಸಂಖ್ಯಾತರ ಕುರಿತು ಖಾಸಗಿ ಸುದ್ದಿವಾಹಿನಿಯೊಂದು ರಹಸ್ಯ ಕಾರ್ಯಚರಣೆ ನಡೆಸಿ ಸಂವೇದನಾರಹಿತವಾಗಿ ನಡೆದುಕೊಂಡಿವೆ ಎಂದು ಕರ್ನಾಟಕ ಲಿಂಗ ಅಲ್ಪಸಂಖ್ಯಾತ ಸಂಘಟನೆ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಸೆಪ್ಟೆಂಬರ್ ಖಾಸಗಿ ಕನ್ನಡ ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಚರಣೆಯಿಂದ ಲಿಂಗ ಅಲ್ಪಸಂಖ್ಯಾತರ ಸಮುದಾಯದ ಸ್ವಾಂತಂತ್ರ್ಯ ಮತ್ತು ಭಾವನೆಗಳಿಗೆ ಧಕ್ಕೆಯಾಗಿದೆ ಎಂದೆ ಸದಸ್ಯರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಹಸ್ಯ ಕಾರ್ಯಚರಣೆಯಿಂದ 5 ಮಂದಿ ಲಿಂಗ ಅಲ್ಪಸಂಖ್ಯಾತರನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದೆಂಬಂತೆ ಒಬ್ಬರನ್ನು ಪುರುಷರ ಜೈಲು ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಇದು ನಮ್ಮ ಸಮುದಾಯದ ಭಾವನೆಗಳನ್ನು ಕೆರಳಿಸಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಕ್ರಮವಾಗಿ ಲಿಂಗ ಅಲ್ಪಸಂಖ್ಯಾತರಾಗಿ ಪರಿವರ್ತಿಸುವ ಶಸ್ತ್ರ ಚಿಕಿತ್ಸೆ ಕುರಿತು ಸೆ.25ರಂದು ಕನ್ನಡ ಸುದ್ದಿ ವಾಹಿನಿಯೊಂದು ಸ್ಟಿಂಗ್ ಅಪರೇಷನ್ ನಡೆಸಿತ್ತು.
ಘಟನಗೆ ಪೂರಕವೆಂಬತೆ, ತಮ್ಮ ಅಪ್ರಾಪ್ತ ಮಗನನ್ನು ಬಲವಂತವಾಗಿ ಲಿಂಗ ಪರಿವರ್ತನೆಗೆ ಒಳಪಡಿಸಲಾಗುತ್ತಿದೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಐದು ಮಂದಿ ಲಿಂಗ ಅಲ್ಪಸಂಖ್ಯಾತರನ್ನು ಪೊಲೀಸರು ಬಂಧಿಸಿದ್ದರು.
ರಹಸ್ಯ ಕಾರ್ಯಚರಣೆ ಬಳಿಕ ಪೊಲೀಸರು ಬಂಧಿಸಿರುವ ಲಿಂಗ ಅಲ್ಪಸಂಖ್ಯಾತರ ಮೇಲೆ 9 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಾಲದೆಂಬಂತೆ ಅಪಹರಣ ಮತ್ತು ಕೊಲೆ ಕೇಸ್ ಕೇಸ್ ಗಳನ್ನು ದಾಖಲು ಮಾಡಿದ್ದಾರೆ ಎಂದು ಸಮುದಾಯದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಆಪರೇಷನ್ ಆನಂದಿ' ಹೆಸರಿನಲ್ಲಿ ಸುದ್ದಿವಾಹಿನಿ ನಡೆಸಿರುವ ರಹಸ್ಯ ಕಾರ್ಯಚರಣೆ ತೀರ ತುಚ್ಛಮಟ್ಟದಾಗಿದ್ದು, ಇದು ಲಿಂಗ ಅಲ್ಪ ಸಂಖ್ಯಾತರ ಭಾವನೆಗಳಿಗೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಸದಸ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಲಿಂಗ ಅಲ್ಪ ಸಂಖ್ಯಾತರನ್ನು ಪುರುಷರ ಜೈಲಿನಲ್ಲಿ ಬಂಧಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ. ಇದರಿಂದ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಇದೆ' ಎಂದು ಸಮುದಾಯದ ಸದಸ್ಯೆ ಅಕೈ ಪದ್ಮಶಾಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರನ್ನೂ ಕೂಡಲೇ ಮಹಿಳಾ ಜೈಲಿಗೆ ಅಥವಾ ಪ್ರತ್ಯೇಕ ಜೈಲಿಗೆ ಬದಲಾಯಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ.
ಘಟನೆಯನ್ನು ವಿರೋಧಿಸಿ ಅಕ್ಟೋಬರ್ 21ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮುದಾಯದ ಸದಸ್ಯರು ತಿಳಿಸಿದ್ದಾರೆ.