ರೋಗಿ ಕುಟುಂಬಸ್ಥರು-ಆಸ್ಪತ್ರೆ ನಡುವೆ ಹಗ್ಗಜಗ್ಗಾಟ: ಆರೋಗ್ಯ ಸಚಿವರ ಮಧ್ಯ ಪ್ರವೇಶದ ಬಳಿಕ ಮೃತದೇಹ ಹಸ್ತಾಂತರ
ಬೆಂಗಳೂರು, ಡಿಸೆಂಬರ್ 25: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮಧ್ಯ ಪ್ರವೇಶದಿಂದ ಬಗೆಹರಿದಿದೆ.
ರಾಜಸ್ಥಾನ ಮೂಲದ ಭೀಮರಾಮ್ ಪಟೇಲ್ ಎಂಬ ಅರವತ್ತೆರಡು ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಹೆಚ್ಚುವರಿ ಬಿಲ್ ಪಾವತಿ ವಿಷಯದಲ್ಲಿ ಕುಟುಂಬ ಸದಸ್ಯರು ಮತ್ತು ಜಯನಗರದಲ್ಲಿರುವ ಮಣಿಪಾಲ್ ಆಸ್ಪತ್ರೆ ಆಡಳಿತದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಮಾತ್ರವಲ್ಲ, ನಲವತ್ತು ದಿನಗಳ ಚಿಕಿತ್ಸೆ ಪಡೆದರೂ ಕೊರೋನಾ ಸೋಂಕು ನಿವಾರಣೆ ಆಗಲಿಲ್ಲ. ಆದರೂ ದೊಡ್ಡ ಮೊತ್ತದ ಶುಲ್ಕ ಪಡೆದಿದ್ದಾರೆ ಮತ್ತು ಸೋಂಕು ನಿವಾರಣೆ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿತ್ತು.
ಮಗುವಿನ ಶಸ್ತ್ರ ಚಿಕಿತ್ಸೆಗೆ ಕೊಟ್ಟಿದ್ದ ಹಣವನ್ನು ಲಪಟಾಯಿಸಿದ ಮಾವಂದಿರು
ಮರಣೋತ್ತರ ವರದಿಯಲ್ಲಿ ಸೋಂಕು ಇದೆ ಎಂದು ಉಲ್ಲೇಖಿಸಲಾಗಿದೆ. ನಲವತ್ತು ದಿನಗಳ ಚಿಕಿತ್ಸೆ ಬಳಿಕವೂ ಸೋಂಕು ಇದೆ ಎಂದರೆ ಹೇಗೆ? ಎಂಬುದು ಕುಟುಂಬಸ್ಥರ ಆರೋಪವಾಗಿದೆ. ಈ ಕಾರಣಗಳಿಂದ ಡಿ.೨೩ ರಂದು ರೋಗಿ ಬೆಳಗ್ಗೆ ಮೃತಪಟ್ಟಿದ್ದರೂ ಸಂಜೆ ಆದರೂ ಈ ವಿಷಯದಲ್ಲಿ ಪರ-ವಿರೋಧ ಚರ್ಚೆಗಳಿಂದ ಮೃತದೇಹ ಹಸ್ತಾಂತರ ಆಗಿರಲಿಲ್ಲ.
ಈ ಸುದ್ದಿ ಅದೇ ದಿನ ಸಂಜೆ ವೇಳೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ತಲುಪಿದೆ. ವಿಷಯ ಗೊತ್ತಾಗುತ್ತಿದ್ದಂತೆ ಎಲ್ಲ ಮಾಹಿತಿ ತರಿಸಿಕೊಂಡು ಪರಿಶೀಲಿಸಿದ ಸಚಿವರು, ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ವಿಚಾರಿಸಿದ್ದಾರೆ.
ಆಸ್ಪತ್ರೆ ಆಡಳಿತ, ತಮ್ಮದೇನೂ ತಪ್ಪಿಲ್ಲ, ರೋಗಿಗೆ ಕೋವಿಡ್ ಇರುವುದರಿಂದ ನಿಯಮಾವಳಿಗಳ ಅನ್ವಯ ಬಿಬಿಎಂಪಿ ಮೂಲಕ ದೇಹ ಹಸ್ತಾಂತರ ಮಾಡಬೇಕಿದೆ ಎಂಬ ಮಾಹಿತಿ ನೀಡಿದರಲ್ಲದೇ, ಬಾಕಿ ಇರುವ ಶುಲ್ಕ ಪಾವತಿ ಕುರಿತ ವಿವರ ನೀಡಿದರು.
ಅಂತಿಮವಾಗಿ ಸಚಿವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಇನ್ಷೂರೆನ್ಸ್ ಕಂಪನಿಯಿಂದ ಪಡೆದ ಹಣ ಮತ್ತು ರೋಗಿ ಪುತ್ರ ಪಟೇಲ್ ಮುಂಚಿತವಾಗಿ ಕಟ್ಟಿದ್ದ ಹಣಕ್ಕೆ ಬಿಲ್ ಮುಕ್ತಾಯಗೊಳಿಸಿ ದೇಹವನ್ನು ಮೃತರ ಕುಟುಂಬಸ್ಥರಿಗೆ ಡಿ.೨೪ ರಂದು ಕೋವಿಡ್ ವಿಧಿ ವಿಧಾನಗಳ ಅನ್ವಯ ಹಸ್ತಾಂತರಿಸಲಾಯಿತು. ಆಸ್ಪತ್ರೆಗೆ ಕಟ್ಟಬೇಕು ಎಂದು ತಿಳಿಸಿದ್ದ ಹತ್ತು ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಯಿತು.
Recommended Video
ನ.೧೫ ರಂದು ಭೀಮರಾವ್ ಪಟೇಲ್ ಅವರನ್ನು ಗ್ಯಾಸ್ಟ್ರಿಕ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಬಳಿಕ ಅವರಿಗೆ ಕೊರೊನಾ ಸೋಂಕು ಇದೆ ಎಂದು ತಿಳಿಸಲಾಯಿತು. ಅಂದಿನಿಂದ ೨೦ನೇ ತಾರೀಖಿನವರೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರನ್ನು ನೋಡಲು ಬಿಟ್ಟಿರಲಿಲ್ಲ. ಈ ಮಧ್ಯೆ ವಿಮಾ ಕಂಪನಿಯಿಂದ ೩೬.೫೯ ಲಕ್ಷ ಮತ್ತು ನಗದು ರೂಪದಲ್ಲಿ ೯.೮೦ ಲಕ್ಷ ಪಾವತಿಸಲಾಗಿತ್ತು.
ಸಾಯುವ ಹಿಂದಿನ ದಿನ ನೋಡಲೇಬೇಕು ಎಂದು ಒತ್ತಾಯಿಸಿದಾಗ ನಮ್ಮ ಕಡೆಯ ೨೦ ಮಂದಿ ಭೇಟಿಗೆ ಅವಕಾಶ ನೀಡಲಾಗಿತ್ತು. ರೋಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮರುದಿನ ಬೆಳಗ್ಗೆ ಮೃತಪಟ್ಟಿರುವುದಾಗಿ ಹೇಳಿ ಮತ್ತೆ ಹತ್ತು ಲಕ್ಷ ರೂ. ಬಾಕಿ ಕಟ್ಟುವಂತೆ ಒತ್ತಾಯಿಸಲಾಗಿತ್ತು. ಸಚಿವರ ಮಧ್ಯ ಪ್ರವೇಶದ ಬಳಿಕವಷ್ಟೇ ನಮಗೆ ದೇಹ ನೀಡಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಆದರೆ ಈ ಆರೋಪಗಳನ್ನು ನಿರಾಕರಿಸಿದ್ದ ಆಸ್ಪತ್ರೆ ಆಡಳಿತ ಮಂಡಳಿ, ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಹೆಚ್ಚುವರಿ ಶುಲ್ಕ ಕೇಳಿಲ್ಲ, ನಿಯಮಗಳ ಅನ್ವಯವೇ ದೇಹ ನೀಡಬೇಕಿದ್ದರಿಂದ ಆ ಪ್ರಕ್ರಿಯೆ ನಡೆಸಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿತ್ತು. ಒಟ್ಟಾರೆ ಪ್ರಕರಣ ಆರೋಗ್ಯ ಸಚಿವರ ಮಧ್ಯ ಪ್ರವೇಶದಿಂದ ತೆರೆಕಂಡಿದೆ.