ವೈದ್ಯ, ದಾದಿಯರಿಗೆ ಅಪಸ್ಮಾರ ಚಿಕಿತ್ಸಾ ತರಬೇತಿ
ಬೆಂಗಳೂರು, ನ. 18 : ಅಪಸ್ಮಾರ ರೋಗಿಗಳ ಚಿಕಿತ್ಸೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಿರಿಯ ವೈದ್ಯರು ಮತ್ತು ದಾದಿಯರಿಗೆ ವಿಶೇಷ ತರಬೇತಿ ನೀಡಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ವಿ.ಬಿ ಪಾಟೀಲ್ ಹೇಳಿದ್ದಾರೆ.
ರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ರಾಷ್ಟ್ರೀಯ ಅಪಸ್ಮಾರ ಸಂಸ್ಥೆಯ ಬೆಂಗಳೂರಿನ ಶಾಖೆಯು ನಿಮ್ಹಾನ್ಸ್ನ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾನಾಡುತ್ತಿದ್ದರು.
ಇಡೀ ಪ್ರಪಂಚದಲ್ಲಿ 50 ಮಿಲಿಯನ್ ಜನರು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 20 ಲಕ್ಷ ಜನರು ಈ ನರಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗ್ರಾಮೀಣ ಜನರಲ್ಲಿ ಅಪಸ್ಮಾರ ಕಾಯಿಲೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ನಿಮ್ಹಾನ್ಸ್ನ ನಿರ್ದೇಶಕ, ಉಪ-ಕುಲಪತಿ, ಸತೀಶ್ ಚಂದ್ರ ಅವರು ಮಾತನಾಡಿ ಜನಸಾಮಾನ್ಯರಲ್ಲಿ ಅಪಸ್ಮಾರ ಕಾಯಿಲೆಯ ಕುರಿತು ಇರುವ ತಪ್ಪು ಅರಿವನ್ನು ಹೋಗಲಾಡಿಸುವ ಮತ್ತು ಅಪಸ್ಮಾರ ಕಾಯಿಲೆಯ ಕುರಿತಾದ ಸಮರ್ಪಕ ಮಾಹಿತಿ ನೀಡಿ ಜ್ಞಾನವನ್ನು ವೃದ್ಧಿಸುವ ಕೆಲಸವನ್ನು ನಿಮ್ಹಾನ್ಸ್ ಮಾಡುತ್ತಿದೆ ಎಂದರು. ಅಪಸ್ಮಾರ ಚಿಕಿತ್ಸೆಯಿಂದ ಗುಣವಾಗುವ ಕಾಯಿಲೆ. ಹಾಗಾಗಿ ಅಪಸ್ಮಾರ ಪೀಡಿತ ವ್ಯಕ್ತಿ ಸಾಮಾನ್ಯ ಜೀವನ ನಡೆಸಬಹುದು ಎಂದು ಅವರು ಹೇಳಿದರು.
ಡಾ. ಶ್ರೀನಿವಾಸ್ ಅವರು ಅಪಸ್ಮಾರವನ್ನು ಹೋಗಲಾಡಿಸುವಲ್ಲಿ ಕಾಳಜಿ ನೀಡುಗರ ಪಾತ್ರದ ಕುರಿತು ಮಾತನಾಡುತ್ತಾ, ಕಾಳಜಿ ನೀಡುಗರು ರೋಗಿಗಳ ಮನಸ್ಸಲ್ಲಿ ಸಕಾರಾತ್ಮಕ ಭಾವನೆಗಳನ್ನು ಹುಟ್ಟಿಸಬೇಕು. ಕರುಣೆ ಹಾಗೂ ತಾಳ್ಮೆಯಿಂದ ಅಪಸ್ಮಾರ ರೋಗಿಗಳ ಚಿಕಿತ್ಸೆ ನಡೆಸಬೇಕು ಎಂದರು.
ಎಸ್.ವೆಂಕಟೇಶ್ವರ್, ಹೆಚ್ಚುವರಿ ಮಹಾ ನಿರ್ದೇಶಕರು, ಭಾರತ ಸರ್ಕಾರದ ವಾರ್ತಾ ಶಾಖೆ, ಮಾತನಾಡಿ ಭಾರತ ಸರ್ಕಾರದ ವಾರ್ತಾ ಶಾಖೆಯು ಅಪಸ್ಮಾರ ಕಾಯಿಲೆಯ ಕುರಿತ ಜನಸಾಮಾನ್ಯರ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವಲ್ಲಿ ಮತ್ತು ಅರಿವನ್ನು ಮೂಡಿಸುವಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಭಾರತೀಯ ಅಪಸ್ಮಾರ ಸಂಸ್ಥೆಯ ಬೆಂಗಳೂರು ಶಾಖೆಯ ಅಧ್ಯಕ್ಷ ಡಾ. ಜಿ.ಎನ್ ಮಂಜುನಾಥ್, ಭಾರತೀಯ ಅಪಸ್ಮಾರ ಸಂಸ್ಥೆಯ ಬೆಂಗಳೂರು ಶಾಖೆಯ ಗೌರವ ಕಾರ್ಯದರ್ಶಿ, ಎಚ್ .ಕೆ.ದಾಮೋದರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ವೈದ್ಯಕೀಯ ಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು. ಅಪಸ್ಮಾರ ಕಾಯಿಲೆಯ ಕಾರಣಗಳು ಮತ್ತು ತಡೆಯ ಕುರಿತ ದೃಶ್ವಾವಳಿಗಳನ್ನು ಹೊಂದಿರುವ ಸ್ಟಾಲ್ಗಳು ಪ್ರದರ್ಶನದಲ್ಲಿದ್ದವು.