ಸಿಇಒ ತಾಯಿಯನ್ನೇ ಒತ್ತೆಯಾಳಾಗಿರಿಸಿಕೊಂಡು ಪ್ರತಿಭಟನೆ
ಬೆಂಗಳೂರು, ಡಿ.4: ತಮ್ಮಿಂದ ಪಡೆದ ಹಣವನ್ನು ಕಂಪನಿ ಹಿಂದಕ್ಕೆ ನೀಡಿಲ್ಲವೆಂದು ಆರೋಪಿಸಿದ ಟ್ರೈನಿ ಉದ್ಯೋಗಿಗಳು ಕಂಪನಿಯ ಸಿಇಒ ತಾಯಿಯನ್ನೇ ಒತ್ತೆಯಾಳನ್ನಾಗಿರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ನಗರದ ಹೊರವಲಯದ ಬನ್ನೇರುಘಟ್ಟ ರಸ್ತೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕಂಪನಿಯ ಆಡಳಿತ ಮಂಡಳಿ ಭದ್ರತಾ ಹಣ ಎಂದು ಪ್ರತಿಯೊಬ್ಬರಿಂದ ಪಡೆದಿದ್ದ 30 ಸಾವಿರ ರೂಪಾಯಿಗಳನ್ನು ಹಿಂದಕ್ಕೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.[ಅಡ್ಡಾದಿಡ್ಡಿ ಭವಿಷ್ಯ ಹೇಳುವವರ ವಿರುದ್ಧ ಭುಗಿಲೆದ್ದ ಕಿಡಿ]
ಜಾವಾ ಡೆವಲಪರ್ಸ್ ಉದ್ದೇಶಕ್ಕೆ ಖಾಸಗಿ ಕಂಪನಿಯೊಂದು 300 ಜನರನ್ನು ತರಬೇತಿ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ಇದು ನಾಲ್ಕು ತಿಂಗಳ ತರಬೇತಿ ಅವಧಿ ಎಂದು ಹೇಳಿತ್ತು. ಪ್ರತಿ ತಿಂಗಳು 7 ಸಾವಿರ ರೂ. ಸ್ಟೈಫಂಡ್ ಸಹ ನೀಡಲಾಗುವುದು. ತರಬೇತಿ ಮುಗಿದ ನಂತರ 12,500 ಸಾವಿರ ರೂ ಸಂಬಳದ ಆಧಾರದಲ್ಲಿ ಕಾಯಂ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದ ಕಂಪನಿ ಯಾವ ಹಣವನ್ನು ನೀಡಿಲ್ಲ ಎಂದು ಹೆಸರು ಹೇಳಲು ಬಯಸದ ಮಹಿಳಾ ಟ್ರೈನಿಯೊಬ್ಬರು ಆರೋಪಿಸಿದ್ದಾರೆ.
ಈ ಎಲ್ಲ ಘಟನೆಗಳಿಂದ ಕೆರಳಿದ 15 ಕ್ಕೂ ಹೆಚ್ಚು ತರಬೇತಿ ಕೆಲಸಗಾರರು ಕಂಪನಿಯ ಸಿಇಒ ಮನೆಗೆ ತೆರಳಿದ್ದಾರೆ. ಆದರೆ ಸಿಇಒ ಮನೆಯಲ್ಲಿರಲಿಲ್ಲ. ಸಿಇಒ ಸಹೋದರ ಆತನನನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋದವ ಎಷ್ಟು ಸಮಯ ಕಳೆದರೂ ಮನೆಗೆ ಹಿಂದಿರುಗಿಲ್ಲ. ಪರಿಣಾಮ ಮನೆಯಲ್ಲಿದ್ದ ಸಿಇಒ ತಾಯಿಯನ್ನೇ ತರಬೇತಿ ಕೆಲಸಗಾರರು ತಮ್ಮ ಜತೆ ಇರಿಸಿಕೊಳ್ಳುತ್ತಾರೆ. ಅಲ್ಲದೇ ಕಂಪನಿಯ ಎದುರಿಗೆ ಪ್ರತಿಭಟನೆ ನಡೆಸಲು ಮುಂದಾಗುತ್ತಾರೆ.[ಚಳವಳಿಗೆ ಮುಂದಾದ ಅಂಗವಿಕಲರಿಗೆ ಲಾಠಿ ಏಟು]
ಸಿಇಒ ಮತ್ತು ಆತನ ಕುಟುಂಬ ಈ ತಿಂಗಳ ಅಂತ್ಯಕ್ಕೆ ಮನೆ ಬದಲಾಯಿಸುವ ಯೋಚನೆಯನ್ನು ಮಾಡಿತ್ತು. ಈ ಬಗ್ಗೆ ಸಿಇಒ ವಾಸವಿರುವ ಅಪಾರ್ಟ್ ಮೆಂಟ್ ಮಾಲೀಕ ಮಾಹಿತಿ ನೀಡಿದ್ದಾರೆ. ನಮ್ಮ ಹಣಕ್ಕೆ ಯಾರು ಜವಾಬ್ದಾರಿ? ಎಂದು ಇನ್ನೊಬ್ಬ ತರಬೇತಿ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಸಿಇಒ ತಾಯಿಯನ್ನು ತಮ್ಮ ಜತೆಗೆ ಜಯನಗರ ಪೊಲೀಸ್ ಉಪ ಕಮಿಷನರ್ ಕಚೇರಿಗೆ ಕರೆದೊಯ್ದ ಸಿಬ್ಬಂದಿ ಕಂಪನಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ ಇದು ಮೈಕೋ ಲೇಔಟ್ ಠಾಣಾ ವ್ಯಾಪ್ತಿಗೆ ಸೇರುತ್ತಿದ್ದು ಅಲ್ಲಿಗೆ ತೆರಳಲು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.