ರೈಲು ಸಂಚಾರ ರದ್ದು: ಹೆಚ್ಚು ಹಣ ವ್ಯಯಿಸುತ್ತಿರುವ ಪ್ರಯಾಣಿಕರು
ಬೆಂಗಳೂರು ಜು.4: ಕೋವಿಡ್ ಕಾರಣದಿಂದ ರದ್ದುಗೊಳಿಸಿದ್ದ ಯಶವಂತಪುರ ಮತ್ತು ಹೊಸೂರು ನಡುವಿನ ಜೋಡಿ ರೈಲು ಸೇವೆಯನ್ನು ಪುನಾರಂಭಿಸದ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಇದೀಗ ರೈಲಿನ ಅಲಭ್ಯತೆ ಯಿಂದಾಗಿ ಹೆಚ್ಚು ಹಣ ವ್ಯಯಿಸಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕೊರೋನಾ ಪೂರ್ವ ಕಾಲದಲ್ಲಿ ಎಂಜಿನಿಯರ್ಗಳು, ಗಾರ್ಮೆಂಟ್ ಕೆಲಸಗಾರರು, ವೈದ್ಯಕೀಯ ವೃತ್ತಿಪರರಿಗೆ ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಈ ಯಶವಂತಪುರ ಮತ್ತು ಹೊಸೂರು ಮಧ್ಯದ ರೈಲುಗಳು ಆಸರೆಯಾಗಿದ್ದವು. ಈ ಮಾರ್ಗದಲ್ಲಿ ರೈಲುಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಅಷ್ಟರ ಮಟ್ಟಿಗೆ ಜನ ರೈಲು ಸೇವೆ ಪಡೆದುಕೊಂಡಿದ್ದರು.
ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ ಪ್ರಯಾಣಿಕರು:
ಆದರೆ ಕೊರೋನಾ ಕಾರಣಕ್ಕಾಗಿ ಈ ಮಾರ್ಗದಲ್ಲಿ ಜೋಡಿ ರೈಲು ಸೇವೆ ರದ್ದುಗೊಳಿಸಿದ್ದ ರೈಲ್ವೆ ಇಲಾಖೆ ಪುನಃ ಆರಂಭಿಸಿಲ್ಲ. ಹೀಗಾಗಿ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ನಿತ್ಯ 10 ರೂಪಾಯಿಯಲ್ಲಿ ಸಂಚರಿಸುತ್ತಿದ್ದವರು ಇಂದು 50ರೂ. ನೀಡಿ ಸಂಚರಿಸುತ್ತಿದ್ದಾರೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಯಾಣಿಕರು ಮನವಿ ಮಾಡಿದ್ದಾರೆ.
ಜನರ ಸಮಸ್ಯೆಗಳನ್ನು ಆಲಿಸಿದ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರು, ಮನವಿ ಪರಿಗಣಿಸಲಾಗುವುದು. ಯಶವಂತಪುರ ಮತ್ತು ಹೊಸೂರು ಮಾರ್ಗದ ಜೋಡಿ ರೈಲು ಮರುಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇಷ್ಟು ಪ್ರದೇಶಗಳ ಜನರಿಗೆ ತೊಂದರೆ:
ಯಶವಂತಪುರ ಮತ್ತು ಹೊಸೂರು (ರೈಲು ಸಂಖ್ಯೆ 76523) ಮತ್ತು ಹೊಸೂರು- ಯಶವಂತಪುರಕ್ಕೆ ತೆರಳುವ ಜೋಡಿ ರೈಲು (ರೈಲು ಸಂಖ್ಯೆ 76524) ಗಳಲ್ಲಿ ಹೆಚ್ಚು ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿತ್ತು. ಇದೀಗ ರೈಲು ಸೇವೆ ಸ್ಥಗಿತಗೊಂಡಿದ್ದರಿಂದ ಸಮಸ್ಯೆ ಉಂಟಾಗಿದೆ. ಹೀಗೆಂದು ವಿದ್ಯಾರಣ್ಯಪುರ, ಹೆಬ್ಬಾಳ, ಸಹಕಾರನಗರ, ಆರ್. ಟಿ.ನಗರ, ಯಲಹಂಕ, ಬಾಣಸವಾಡಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಬೆಳ್ಳಂದೂರು, ಬೊಮ್ಮಸಂದ್ರ ಮತ್ತು ಆನೇಕಲ್ ಭಾಗದ ಪ್ರಯಾಣಿಕರು ಬೆಂಗಳೂರು ರೈಲ್ವೆ ವಿಭಾಗೀಯ ಕಚೇರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ರೈಲಿನ ಸೇವೆ ರದ್ದತಿಯಿಂದಾಗಿ ನಿತ್ಯ 10ರೂ.ನಲ್ಲಿ ಸಂಚರಿಸುತ್ತಿದ್ದ ನಾನು ಇಂದು ನಿತ್ಯ 700ರೂಪಾಯಿ ವ್ಯಯಿಸುತ್ತಿದ್ದೇನೆ. ಇದು ನನಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ನರೇಂದ್ರನಾಥ್ ಅಳಲು ತೊಂಡಿಕೊಂಡಿದ್ದಾರೆ. ಅದೇ ರೀತಿ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ನೌಕರರು, ಕಾರ್ಮಿಕರಿಗೆ ತೊಂದರೆ ಆಗಿದೆ. ರೈಲ್ವೆ ನಿಲ್ದಾಣ ಸಮೀಪವೇ ಇರುವ ಪ್ರಯಾಣಿಕರ ಪ್ರಯಾಣ ಗೋಳು ಹೇಳಿತೀರದಾಗಿದೆ.
ವಿಪ್ರೋ ಸಂಸ್ಥೆಯ ಉದ್ಯೋಗಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, "ಬೈಕಿನ ಮೂಲಕ ಲೊಟ್ಟಿಗೆಹಳ್ಳಿಗೆ ಬಂದು ರೈಲಿನ ಮೂಲಕ ಕಾಮೇಲರಂಗೆ ತೆರಳುತ್ತಿದ್ದೆ. ಕೇವಲ 20 ರೂಪಾಯಿ ವ್ಯಯಿಸಿ 45 ನಿಮಿಷಗಳಲ್ಲಿ ಕೆಲಸದ ಸ್ಥಳ ತಲುಪುತಿದ್ದೆ .ಆದರೆ ಈಗ ಎರಡೂವರೆ ಗಂಟೆ ಬಸ್ ಇಲ್ಲವೇ ಆಟೋದಲ್ಲಿ ಕಳೆಯಬೇಕಿದೆ," ಎಂದರು.