ಪೊಲೀಸರೀಗ ಪೇಪರ್ ಲೆಸ್: ದಂಡ ವಿಧಿಸಿದರೆ ರಸೀದಿ ಬದಲು ಎಸ್ಎಂಎಸ್
ಬೆಂಗಳೂರು, ಫೆಬ್ರವರಿ 09: ಸಂಚಾರ ನಿಯಮ ಉಲ್ಲಂಘನೆ ವೇಳೆ ದಂಡ ವಸೂಲಿ ಕ್ಯಾಶ್ ಲೆಸ್ ವ್ಯವಹಾರ ನಡೆಸುತ್ತಿರುವ ಬೆಂಗಳೂರು ಸಂಚಾರ ಪೊಲೀಸರು ಇದೀಗ ಪೇಪರ್ ಲೆಸ್ ಸೇವೆಗೂ ಮುಂದಾಗಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕ, ಸವಾರರಿಗೆ ದಂಡ ವಿಧಿಸಿ ರಸೀದಿ ನೀಡಲಾಗುತ್ತಿತ್ತು. ಇಲ್ಲವಾದರೆ, ಸಿಗ್ನಲ್ ಕ್ಯಮರಾಗಳಲ್ಲಿ ಸೆರೆ ಸಿಕ್ಕವರಿಗೆ ಅಂಚೆಯಲ್ಲಿ ನೋಟಿಸ್ ಜಾರಿ ಮಾಡಲಾಗುತ್ತಿತ್ತು. ರಸೀದಿ ರೋಲ್, ಇಂಕ್ ಮತ್ತು ಪ್ರಿಂಟರ್ ನಿರ್ವಹಣೆಗೆ ಲಕ್ಷಾಂತರ ರೂ ಖರ್ಚು ಮಾಡಬೇಕಾಗುತ್ತದೆ.
ಅದರ ಬದಲು ಮೊಬೈಲ್ ಗೆ ಎಸ್ ಎಂ ಎಸ್ ಕಳುಹಿಸಿದರೆ ರಸೀದಿ ಕೊಡುವ ಪ್ರಮೇಯವೇ ಬರುವುದಿಲ್ಲ. ರಸೀದಿ ಖರ್ಚು ಉಳಿತಾಯವಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.
ಒಂದೇ ಒಂದು ಪ್ರಕರಣಕ್ಕೆ ರಸೀದಿ ನೀಡುವಾಗ ಕಾಗದ ಖರ್ಚು ಕಡಿಮೆ ಇರುತ್ತರೆ. ಕೆಲವೊಮ್ಮೆ ೫೦ ಬಾರಿ ಉಲ್ಲಂಘನೆ ಕೇಸುಗಳಿಗೆ ಮೀಟರ್ ಗಟ್ಟಲೇ ರಸೀದಿ ಹರಿದಿರುವ ಉದಾಹರಣೆ ಇದೆ. ನಿಯಮ ಉಲ್ಲಂಘನೆ, ವಾಹನ ಸಂಖ್ಯೆ, ದಿನಾಂಕ, ಸಮಯ, ಸ್ಥಳ, ದಂಡ ವಿಧಿಸಿದ ಅಧಿಕಾರಿ ಹೆಸರು , ಠಾಣೆ ಹೆಸರು, ಆನ್ ಲೈನ್ ಜನರೇಟ್ ಸಂಖ್ಯೆ ಸೇರಿ ಎಲ್ಲ ಮಾಹಿತಿ ಪ್ರಿಂಟ್ ಮಾಡಿಕೊಡಲಾಗುತ್ತದೆ. ಇಷ್ಟಕ್ಕೆ ಇಂಕ್ ಮತ್ತು ಪ್ರಿಂಟರ್ ನಿರ್ವಹಣೆಗೆ ಹೆಚ್ಚು ವೆಚ್ಚವಾಗಲಿದೆ. ಇನ್ನು ಮುಂದೆ ದಂಡ ವಿಧಿಸಿದ ಬಳಿಕ ಮೊಬೈಲ್ ನಂಬರ್ ಪಡೆದು ಅದಕ್ಕೆ ವಿವರಗಳನ್ನು ಎಸ್ ಎಂಎಸ್ ಮೂಲಕ ಕಳುಹಿಸಲು ನಿರ್ಧರಿಸಿದೆ.