ಸ್ವಾತಂತ್ರ್ಯ ದಿನಾಚರಣೆ: ಆ. 15 ರಂದು ಬೆಂಗಳೂರಿನ ಸಂಚಾರದಲ್ಲಿ ಬದಲಾವಣೆ
ಬೆಂಗಳೂರು, ಆ. 13: ನಗರದ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಆ. 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಹಿನ್ನೆಲೆಯಲ್ಲಿ ಸಂಚಾರ ನಿಯಮ ಬದಲಿಸಲಾಗಿದೆ.
ಆ. 15 ರಂದು ಮಾಣಿಕ್ ಷಾ ಪೆರೇಡ್ ಮೈದಾನ ಸುತ್ತಮುತ್ತ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧ:
ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್, ಅನೀಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅದರ ಜತೆಗೆ ಕಬ್ಬನ್ ಪಾರ್ಕ್ ಸಿಟಿಓ ವೃತ್ತದಿಂದ ಕೆ.ಅರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ವರೆಗೂ ವಾಹನ ನಿಲುಗಡೆ ಮಾಡುವಂತಿಲ್ಲ. ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಸ್ ಇದ್ದರೆ ಮೈದಾನಕ್ಕೆ ಪ್ರವೇಶ:
ಬಿಳಿ ಪಾಸ್ ಹೊಂದಿರುವ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ಪ್ರವೇಶ ದ್ವಾರ 3ರ ಮೂಲಕ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ತಮ್ಮ ವಾಹನಗಳನ್ನು ಕಬ್ಬನ್ ಜಂಕ್ಷನ್ ಸಫೀನಾ ಪ್ಲಾಜಾ ಬಳಿ ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್ ಶಾಲೆ ಬದಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಪಿಂಕ್ ಪಾಸ್ ಎಂಟ್ರಿ:
ಪಿಂಕ್ ಪಾಸ್ ಹೊಂದಿರುವ ಆಹ್ವಾನಿತರು ತಮ್ಮ ವಾಹನಗಳನ್ನು ಮೈನ್ ಗಾರ್ಡ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಮೂಲಕ ಸಂಚರಿಸಿ ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್ ಶಾಲೆ ಬಳಿ ವಾಹನ ನಿಲುಗಡೆ ಮಾಡಿ ಗೇಟ್ ನಂಬರ್ 2 ಮೂಲಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹಸಿರು ಬಣ್ಣದ ಪಾಸ್:
ಹಸಿರು ಬಣ್ಣದ ಪಾಸ್ ಹೊಂದಿರುವ ಆಹ್ವಾನಿತರು ತಮ್ಮ ವಾಹನಗಳನ್ನು ಶಿವಾಜಿನಗರದ ಒಂದನೇ ಮಹಡಿ ಬಳಿ ನಿಲುಗಡೆ ಮಾಡಿ ಪೆರೇಡ್ ಮೈದಾನಕ್ಕೆ ಪ್ರವೇಶ ದ್ವಾರ ನಾಲ್ಕರ ಮೂಲಕ ಪ್ರವೇಶಿಸಬಹುದು. ಕಾರ್ಯಕ್ರಮಕ್ಕೆ ಬರುವ ಮಾಧ್ಯಮ ಪ್ರತಿನಿಧಿಗಳ ವಾಹನಗಳು ಪ್ರವೇಶ ದ್ವಾರ ನಾಲ್ಕರ ಬಳಿ ವಾಹನ ನಿಲುಗಡೆ ಮಾಡಿ ಮೈದಾನಕ್ಕೆ ಪ್ರವೇಶಿಸಬಹುದಾಗಿದೆ. ಕವಾಯತಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ವಿದ್ಯಾರ್ಥಿಗಳ ವಾಹನಗಳನ್ನು ಪ್ರವೇಶ ದ್ವಾರ ಎರಡರ ಬಳಿ ನಿಲ್ಲಿಸಿ ಮೈದಾನಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪಾಸ್ ಇಲ್ಲದೇ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಶಿವಾಜಿನಗರ ಬಳಿ ನಿಲ್ಲಿಸಿ ಕಾಲುನಡಿಗೆ ಮೂಲಕ ಪ್ರವೇಶ ದ್ವಾರ ನಾಲ್ಕರ ಮೂಲಕ ಪ್ರವೇಶ ಪಡೆಯಬಹುದಾಗಿದೆ.
ವಾಹನ ಸಂಚಾರ ನಿರ್ಬಂಧ:
ಆ. 15 ರಂದು ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಕಬ್ಬನ್ ರಸ್ತೆಯ ಬಿಆರ್ವಿ ಜಂಕ್ಷನ್ನಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕಿನಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಇನ್ಫೆಂಟ್ರಿ ರಸ್ತೆ ಮೂಲಕ ಮಣಿಪಾಲ್ ಸೆಂಟರ್ ಮಾರ್ಗ ಬಳಿಸಲು ಸೂಚಿಸಲಾಗಿದೆ. ಕಬ್ಬನ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಣಿಪಾಲ್ ಸೆಂಟರ್, ವೆಬ್ಸ್ ಜಂಕ್ಷನ್, ಎಂ.ಜಿ. ರಸ್ತೆ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಸೂಚನೆ :
ಮಾಣೆಕ್ ಷಾ ಪೆರೇಡ್ ಮೈದಾನದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವರು ಸಾರ್ವಜನಿಕ ಸಾರಿಗೆ ಬಳಸಲು ಸೂಚಿಸಲಾಗಿದೆ. ಏನೇ ಸಮಸ್ಯೆ ಉಂಟಾದರೆ ಪೊಲೀಸರನ್ನು ಸಂಪರ್ಕಿಸಬಹುದು. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಬಿಬಿಎಂಪಿ ಕಲ್ಪಿಸಿದ್ದು ಅವುಗಳನ್ನು ಸುದಪಯೋಗ ಪಡೆಸಿಕೊಳ್ಳಲು ಕೋರಲಾಗಿದೆ. ಕವಾಯತು ವೀಕ್ಷಣೆ ಮಾಡಲು ಬರುವರು ಸೆಲ್ಫಿ ತೆಗೆಯುವಂತಿಲ್ಲ. ಭದ್ರತಾ ಹಿತದೃಷ್ಟಿಯಿಂದ ಮೈದಾನದ ಒಳಗೆ ಕೊಡೆ, ಮೊಬೈಲ್, ಹೆಲ್ಮೆಟ್ , ಕ್ಯಾಮರಾ, ರೇಡಿಯೋ ತರುವಂತಿಲ್ಲ ಎಂದು ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.