ಬೆಂಗಳೂರಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಟ್ರಾಫಿಕ್ ಹೇಗಿರುತ್ತೆ?
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಐದು ಬೃಹತ್ ಕಾರ್ಯಕ್ರಮಗಳಿವೆ. ಈದ್ಗಾ ಮೈದಾನದಲ್ಲಿ ಧ್ವಜಾರೋಹಣ, ಕಾಂಗ್ರೆಸ್ ಕಾಲ್ನಡಿಗೆ, ಬಿಜೆಪಿ ಕಾರ್ಯಕ್ರಮ , ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಲಾಲ್ ಬಾಗ್ ಫ್ಲವರ್ ಶೋಗಳು ನಡೆಯುತ್ತಿದೆ. ಇದರಿಂದ ಸಂಚಾರಿ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಎಲ್ಲೆಲ್ಲಿ ಯಾವ ರೀತಿಯ ವ್ಯವಸ್ಥೆ? ಎಂಬುದರ ವಿವರ ಇಲ್ಲಿದೆ.
ಕೆಎಸ್ಆರ್ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಕಾಂಗ್ರೆಸ್ ಕಾಲ್ನಡಿಗೆಯನ್ನು ಏರ್ಪಡಿಸಲಾಗಿದೆ. ಕೆಎಸ್ಆರ್ ರೈಲು ನಿಲ್ದಾಣ, ಆನಂದ ರಾವ್ ಸರ್ಕಲ್, ಕೆಆರ್ ಸರ್ಕಲ್, ಕಾರ್ಪೊರೇಷನ್ ಸರ್ಕಲ್, ಮಿನರ್ವ, ಲಾಲ್ ಬಾಗ್ ಸರ್ಕಲ್, ನಂತರ ನ್ಯಾಷನಲ್ ಕಾಲೇಜು ಮೈದಾನ ಸೇರಲಿರುವ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಯ ಸಮಾವೇಶ ನಡೆಯಲಿದೆ.
ಬೆಂಗಳೂರು; ಕೆಐಎನಲ್ಲಿ 20 ಮೀಟರ್ ಉದ್ದದ ಸ್ಮಾರಕ ಶಿಲ್ಪ ನಿರ್ಮಾಣ
ಸ್ವಾತಂತ್ರೋತ್ಸವ ಸಂಭ್ರಮಾಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಾಕಿ ಪಡೆ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ ಸಂಚಾರಿ ದಟ್ಟನೆ ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಸ್ವಾತಂತ್ರ್ಯದ ಸಂಭ್ರಮದಲ್ಲಿ ಖಾಕಿ ಕಣ್ಗಾವಲಿನ ಜೊತೆ ಸಂಚಾರಿ ಪೊಲೀಸರ ಕಾರ್ಯ ಹೆಚ್ಚಾಗಲಿದೆ. ಆಗಸ್ಟ್ 15 ರ ಸಂಚಾರ ವ್ಯವಸ್ಥೆ ಮೇಲೆ ಹೇಗೆ ನಿಗಾ ಇರಲಿದೆ ಅನ್ನೋದರ ರಿಪೋರ್ಟ್ ಇಲ್ಲಿದೆ.
ಬೆಳಗ್ಗೆ 6 ಗಂಟೆಗೆ ಫೀಲ್ಡ್ ಗೆ ಇಳಿಯಲಿರೋ ಸಂಚಾರಿ ಪೊಲೀಸರು
ಸಂಚಾರಿ ವಿಭಾಗದ ಮುಖ್ಯಸ್ಥ ರವಿಕಾಂತೇಗೌಡ ಸೇರಿ 3 ಡಿಸಿಪಿ, 10 ಎಸಿಪಿ, 50 ಇನ್ಸ್ ಪೆಕ್ಟರ್ ಗಳಿಂದ ಕಾರ್ಯ ನಿರ್ವಹಿಸಲಿದ್ದಾರೆ. ಒಂದೇ ಶೀಪ್ಟ್ ನಲ್ಲಿ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತುಗಂಟೆವರೆಗೂ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಣೆಯನ್ನು ಮಾಡಲಿದ್ದಾರೆ. ಕಾಲ್ನಡಿಗೆಗೆ ಅರ್ಧ ರಸ್ತೆಯನ್ನ ವಾಹನ ಸಂಚಾರಕ್ಕೆ ಮುಕ್ತ ಮಾಡಲಿರೋ ಸಂಚಾರಿ ಪೊಲೀಸರು. ರಸ್ತೆಯಲ್ಲಿ ನಿರ್ಬಂಧ ಹಾಕದೇ ಕೆಲವೊಂದು ಕಡೆ ಮಾತ್ರ ಪರಿಸ್ಥಿತಿಗೆ ಅನುಗುಣವಾಗಿ ರೋಡ್ ಡೈವರ್ಷನ್ ಮಾಡಲಾಗಿದೆ. ಬೈಕ್ಗಳಲ್ಲಿ ಬರುವರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ
ಮಾಣಿಕ್ ಷಾ ಮೈದಾನದಲ್ಲಿ ಸಂಚಾರಿ ಪೊಲೀಸರು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ. ವಿವಿಐಪಿ ಸೇರಿ ಸಾರ್ವಜನಿಕರಿಗೆ 4 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆಗೆ ಪಾರ್ಕಿಂಗ್ ನಿಷೇಧ ಸ್ಥಳವನ್ನು ವೆಬ್ ಸೈಟ್ ನಲ್ಲಿ ಹಾಕುವ ಬಗ್ಗೆ ರವಿಕಾಂತೇಗೌಡ ಮಾಹಿತಿ ಕೇಳಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗುತ್ತೆ ಎಂದು ಸಂಚಾರಿ ಇಲಾಖೆಯ ವೆಬ್ ಸೈಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಮಾಡಲಾಗುತ್ತದೆ.
ಕಾಂಗ್ರೆಸ್ ಕಾಲ್ನಡಿಗೆ ಬರುವ ವಾಹನಕ್ಕೆ ನಿರ್ಭಂಧ
ಸ್ವಾತಂತ್ರ್ಯೋತ್ಸವಕ್ಕೆ ಆಯೋಜಕರು, ಕಾಲ್ನೆಡಿಗೆಗೆ ಬರುವ ಕಾಂಗ್ರೆಸ್ ನಾಯಕರಿಗೆ ಮತ್ತು ಸಂಘಟಕರಿಗೆ ಸಂಚಾರಿ ವಿಭಾಗದಿಂದ ಸೂಚನೆಯನ್ನು ನೀಡಲಾಗಿದೆ. ಕಾಂಗ್ರೆಸ್ ಕಾಲ್ನಡಿಗೆ ಬರುವ ಮಂದಿಯ ಬಸ್ ಗಳಿಗೆ ಸಿಟಿಗೆ ನೋ ಎಂಟ್ರಿ ಎನ್ನಲಾಗಿದೆ. ಬಸ್ಗಳನ್ನು ಯಾವುದೇ ಕಾರಣಕ್ಕೂ ಸಿಟಿಗೆ ತರದಂತೆ ವಾರ್ನಿಂಗ್ ಮಾಡಲಾಗಿದೆ. ತುಮಕೂರುನಿಂದ ಬರುವರು ಗೊರಗುಂಟೆ ಪಾಳ್ಯ, ನಾಗಸಂದ್ರ ಮೆಟ್ರೋ ಬಳಿ ಇಳಿದು ಮೆಟ್ರೋ ಸಂಚಾರ ಮಾಡಲು ಸೂಚನೆ ನೀಡಲಾಗಿದೆ. ಕೋಲಾರದಿಂದ ಬರುವರು ವಾಹನಗಳನ್ನು ಬೈಯಪ್ಪನಹಳ್ಳಿಯಲ್ಲಿಯೇ ತಡೆಯಲಾಗುತ್ತದೆ. ಚಿಕ್ಕ ಬಳ್ಳಾಪುರ ಮಾರ್ಗದಿಂದ ಬರುವರು ಪ್ಯಾಲೇಸ್ ಮೈದಾನದ ಬಳಿ ತಡೆಯಲಾಗುತ್ತದೆ. ಮೈಸೂರು ಭಾಗದಿಂದ ಬರುವರು ಕೆಂಗೇರಿ ಬಳಿ ತಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.
ಅಗತ್ಯ ಬಿದ್ದರೆ ರಸ್ತೆ ಡೈವರ್ಷನ್
ಲಾಲ್ಬಾಗ್ ಪುಷ್ಪ ಪ್ರದರ್ಶನ ಮಾಡುವವರಿಗೆ ಬರುವರಿಗೆ ಮೆಟ್ರೋ ಬಳಸಲು ಸೂಚನೆಯನ್ನು ನೀಡಲಾಗಿದೆ. ಬಿಎಂಟಿಸಿ ಮತ್ತು ಮೆಟ್ರೋ ಬಳಸುವಂತೆ ಮನವಿ ಮಾಡಿರೋ ಸಂಚಾರಿ ಪೊಲೀಸರು. ಪರಿಸ್ಥಿತಿಗೆ ಅನುಗುಣವಾಗಿ ಅಷ್ಟೇ ರಸ್ತೆ ಡೈವರ್ಷನ್ ಮಾಡಲಾಗುತ್ತೆ ಎಂದಿದ್ದಾರೆ. ಸಂಚಾರ ದಟ್ಟಣೆಯಾಗದಂತೆ ಎಲ್ಲಾ ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಸಂಚಾರಿ ಪೊಲೀಸರ ಜೊತೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗುತ್ತದೆ.