ಸಂಚಾರ ನಿಯಮ ಉಲ್ಲಂಘಿಸದ ಹೊರತು ಗಾಡಿಗೆ ಅಡ್ಡ ಹಾಕುವಂತಿಲ್ಲ!
ಬೆಂಗಳೂರು, ಜು. 27: ಸಂಚಾರ ನಿಯಮ ಉಲ್ಲಂಘನೆ ಮಾಡದ ಹೊರತು ಯಾವುದೇ ವಾಹನವನ್ನು ಸಂಚಾರ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.
ಕೇರಳದ ನಿವಾಸಿಯೊಬ್ಬರ ಕಾರನ್ನು ತಡೆದಿದ್ದ ಹಲಸೂರು ಗೇಟ್ ಪೊಲೀಸರು ಕಾರಿನಲ್ಲಿ ವಾಷ್ ಬೆಸಿನ್ ಇರುವುದನ್ನು ನೋಡಿ ಕಾರು ಜಪ್ತಿ ಮಾಡುವುದಾಗಿ ಹೆದರಿಸಿದ್ದರು. ಆ ಬಳಿಕ 20 ಸಾವಿರ ರೂ. ದಂಡಕ್ಕೆ ಬೇಡಿಕೆ ಇಟ್ಟಿದ್ದ ಸಂಚಾರ ಪೊಲೀಸರು 2500 ರೂ. ಲಂಚ ಪಡೆದು ಕಾರು ಬಿಡುಗಡೆ ಮಾಡಿದ್ದರು. ಈ ಕುರಿತು ಕೇರಳಾ ಮೂಲದ ವ್ಯಕ್ತಿ ತಮ್ಮ ನೋವು ತೋಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಮಾತ್ರವಲ್ಲ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದರು.
ದೂರು ನೀಡಿದ ಬೆನ್ನಲ್ಲೇ, ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡದ ಹೊರತು ವಾಹನಗಳನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸಂಚಾರ ಪೊಲೀಸರು ಗತಡೆಯುವಂತಿಲ್ಲ. ಈ ಕುರಿತು ನಾನು ಈಗಾಗಲೇ ಆದೇಶ ಮಾಡಿದ್ದೇನೆ. ಮತ್ತೊಮ್ಮೆ ಎಚ್ಚರಿಸಿ ಆದೇಶಿಸುತ್ತಿದ್ದೇನೆ. ಕುಡಿದು ವಾಹನ ಚಾಲನೆ ಮಾಡುವ ಸಂಶಯಾಸ್ಪದ ವಾಹನಗಳನ್ನು ತಪಾಸಣೆ ಮಾಡಬಹುದು.
ಸಂಚಾರ ನಿಯಮ ಉಲ್ಲಂಘನೆ ಮಾಡಿ ನೇರವಾಗಿ ಕಣ್ಣಿಗೆ ಕಾಣಿಸಿದರೆ ಅಂತಹ ವಾಹನಗಳನ್ನು ಸಂಚಾರ ಪೊಲೀಸರು ನಿಲ್ಲಿಸಿ ದಂಡ ವಿಧಿಸಬಹುದು. ಅದನ್ನು ಬಿಟ್ಟು ಅನಾವಶ್ಯಕ ವಾಹನ ನಿಲ್ಲಿಸಿ ಸಾರ್ವಜನಿಕ ಪ್ರಯಾಣಿಕರಿಗೆ ಕಿರುಕುಳ ನೀಡುವಂತಿಲ್ಲ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತನ್ನಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರಿಗೆ ಸೂಚಿಸಿದ್ದಾರೆ. ಈ ಕುರಿತ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಎಚ್ಚರಿಕೆ ಕೊಟ್ಟಿದ್ದಾರೆ.
ಎಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್ ಅಮಾನತು:
ಜೂ. 10 ರಂದು ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ದೇವಾಂಗ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಮಹೇಶ್ ಮತ್ತು ಮುಖ್ಯ ಪೇದೆ ಗಂಗಾಧರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು. ಕೇರಳ ಮೂಲ ಸಂತೋಷ್ ಎಂಬುವರ ಕಾರು ತಡೆದು ನಿಲ್ಲಿಸಿ ಪರಿಶೀಲಿಸಿದ್ದರು. ಈ ವೇಳೆ ಕಾರಲ್ಲಿ ವಾಷ್ ಬೇಸಿನ್ ಇದ್ದ ಪರಿಣಾಮ ಕಾರ್ ಜಪ್ತಿ ಮಾಡುವುದಾಗಿ ಹೆದರಿಸಿದ್ದಾರೆ. ಆ ಬಳಿಕ 20 ಸಾವಿರ ದಂಡ ಕಟ್ಟಬೇಕಾಗುತ್ತದೆ ಎಂದು ಹೆದರಿಸಿ 2500 ರೂ. ವಸೂಲಿ ಮಾಡಿದ್ದರು. ಈ ಕುರಿತು ಲಂಚ ಕೊಟ್ಟ ಸಂತೋಷ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದರು. ದೂರನ್ನು ಜಂಟಿ ಪೊಲೀಸ್ ಆಯುಕ್ತರಿಗೆ ವರ್ಗಾವಣೆ ಮಾಡಿದ್ದು, ಇಬ್ಬರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.