ಪೊಲೀಸರ ಮೇಲೆ ಕಾರು ಹತ್ತಿಸಲು ಹೋದರೇ ಲಿಂಬಾವಳಿ ಪುತ್ರಿ?
ಬೆಂಗಳೂರು, ಜೂನ್ 9: ಅತಿ ವೇಗದಿಂದ ಕಾರು ಚಲಾಯಿಸಿ, ಪೊಲೀಸರ ಜೊತೆ ವಾಗ್ವಾದ, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿಯ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ ದಂಡ ವಿಧಿಸಿ ಸಂಚಾರಿ ಪೊಲೀಸರು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಖುದ್ದು ಲಿಂಬಾವಳಿ ಕ್ಷಮೆಯಾಚಿಸಿದ್ದಾರೆ.
ರಾಜಭವನದ ವ್ಯಾಪ್ತಿಯಲ್ಲಿ ಎಂದಿನಂತೆ ಟ್ರಾಫಿಕ್ ಪೊಲೀಸರು ತಪಾಸಣೆಯನ್ನು ನಡೆಸುತ್ತಿದ್ದರು. ಆ ವೇಳೆ, ಅತಿವೇಗದಿಂದ ಲಿಂಬಾವಳಿಯವರ ಪುತ್ರಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಪೊಲೀಸರು ತಡೆಯಲು ಹೋದಾಗ, ಪೊಲೀಸರ ಮೇಲೆಯೇ ಗಾಡಿ ಹತ್ತಿಸುವಂತೆ ಕಾರು ಚಲಾಯಿಸುತ್ತಿದ್ದ ಇವರನ್ನು ಟ್ರಾಫಿಕ್ ಪೊಲೀಸರು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ ಸಚಿವ ಲಿಂಬಾವಳಿ
ಪೊಲೀಸರು ಬರುತ್ತಿರುವುದನ್ನು ಅರಿತ ಲಿಂಬಾವಳಿ ಪುತ್ರಿ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೊಟೇಲ್ ಒಳಗೆ ಹೋಗಿದ್ದಾರೆ. ಹೊಟೇಲ್ ಗೇಟಿನಲ್ಲೇ ಕಾಯುತ್ತಿದ್ದ ಪೊಲೀಸರು ಅವರು ಹೊರಬರುತ್ತಿದ್ದಂತೆಯೇ ತಡೆದಿದ್ದಾರೆ. ನಾನು ಅರವಿಂದ ಲಿಂಬಾವಳಿ ಮಗಳು ಎಂದು ದರ್ಪ ತೋರಿದಾಗ, ಪೊಲೀಸರು ದಂಡ ಪಾವತಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
ಅತಿವೇಗದ ಚಾಲನೆ ಮಾಡಿಕೊಂಡು ಬಂದಿರುವುದು ಮತ್ತು ಸಂಚಾರೀ ಪೊಲೀಸರಿಗೆ ಆವಾಜ್ ಹಾಕಿದ ಅರವಿಂದ ಲಿಂಬಾವಳಿ ಪುತ್ರಿಗೆ ದಂಡದ ಬಿಸಿ ಮುಟ್ಟಿಸಿದ ಪೊಲೀಸರು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಕಟ್ಟಿದ ಬಳಿಕ ಪೊಲೀಸರು ಕಾರನ್ನು ಬಿಟ್ಟು ಕಳುಹಿಸಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿದ್ದಾರೆ.
ಈ ಬಗ್ಗೆ ಕ್ಷಮೆಯಾಚಿಸುತ್ತಾ ಲಿಂಬಾವಳಿ, "ನನ್ನ ಮಗಳು ತನ್ನ ಸ್ನೇಹಿತನ ಜೊತೆ ಹೋಗುತ್ತಿದ್ದಾಗ, ಕ್ಯಾಪಿಟಲ್ ಹೋಟೆಲ್ ಬಳಿ ಪೋಲಿಸರು ತಡೆದಿದ್ದಾರೆ. ಮಾಧ್ಯಮಗಳಿಗೆ ಅವಮಾನ ಮಾಡಿದ್ದಾರೆ ಅಂತ ಆರೋಪ ಮಾಡಲಾಗುತ್ತಿದೆ. ಆದರೆ, ಅವಳು ಸರ್ ಎಂದು ಹೇಳುತ್ತಿದ್ದಳು. ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ"ಎಂದು ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
Recommended Video
"ನಮ್ಮ ಮನೆತನದ ಇತಿಹಾಸ ಹಾಗೇನೂ ಇಲ್ಲ, ಮಗಳ ಫ್ರೆಂಡ್ ತರುಣ್ ಓವರ್ ಸ್ಪೀಡ್ ಬಂದ ಎಂದು ಈಗಾಗಲೇ ಫೈನ್ ಹಾಕಿದ್ದಾರೆ. ತಪ್ಪಾಗಿದ್ದರೆ ಯಾರಿಗಾದರೂ ಶಿಕ್ಷೆ ಆಗಬೇಕು"ಎಂದು ಅರವಿಂದ್ ಲಿಂಬಾವಳಿ ನಡೆದ ಘಟನೆಗೆ ಕ್ಷಮೆಯಾಚಿಸಿದ್ದಾರೆ.