ಸಂಚಾರಿ ಪೊಲೀಸರ ಅನಧಿಕೃತ ತಪಾಸಣೆ, ಪೊಲೀಸರಿಂದ ದಾಳಿ!
ಬೆಂಗಳೂರು, ಡಿಸೆಂಬರ್ 16 : ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಸಂಚಾರಿ ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದವರು ಸಂಚಾರಿ ಪೊಲೀಸರ ವಿಶೇಷ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
ಸಹಾಯಕ ಇನ್ಸ್ಪೆಕ್ಟರ್ ಮುನಿಯಪ್ಪ, ಸಿಬ್ಬಂದಿಯಾದ ಗಂಗರಾಜ್, ನಾಗರಾಜ್ ಹಾಗೂ ಹರ್ಷ ಖಾಸಗಿ ವ್ಯಕ್ತಿಗಳ ಮೂಲಕ ಅನಧಿಕೃತ ಕಾರ್ಯಾಚರಣೆ ಕೈಗೊಂಡಿದ್ದರು. ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು.
ಸಂಚಾರ ನಿಯಮ ಉಲ್ಲಂಘನೆ; 15 ಸಾವಿರ ದಂಡ ಕಟ್ಟಿದ ವ್ಯಾಪಾರಿ
ಜನರಿಂದ ಹಲವು ದೂರುಗಳ ಬಂದ ಹಿನ್ನಲೆಯಲ್ಲಿ ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ. ಆರ್. ರವಿಕಾಂತೇಗೌಡ ನೇತೃತ್ವದ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಅಶೋಕ ನಗರ ಸಂಚಾರಿ ಠಾಣೆಯ ಎಎಸ್ಐ ಮತ್ತು ಕಾನ್ಸ್ಟೇಬಲ್ ವಿಶೇಷ ತಂಡಕ್ಕೆ ಸಿಕ್ಕಿಬಿದಿದ್ದು, ಪ್ರಕರಣ ಬಯಲಾಗಿದೆ.
Infographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರ
ಆಸ್ಪತ್ರೆಗಳಲ್ಲಿ ಸಿಗುವ ಆಲ್ಕೋಮೀಟರ್ ಬಳಸಿಕೊಂಡು, ಖಾಸಗಿ ವ್ಯಕ್ತಿಗಳ ಜೊತೆ ಸೇರಿ ಹಣ ಸುಲಿಗೆ ಮಾಡುತ್ತಿದ್ದರು. ದಾಳಿ ಸಂದರ್ಭದಲ್ಲಿ 32 ಸಾವಿರ ನಗದು, 3 ಆಲ್ಕೋಮೀಟರ್, ಡಿಎಲ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಂಡ ಮೊತ್ತ ಹೆಚ್ಚಿಸಿ ಶಾಕ್ ಕೊಟ್ಟ ಬೆಂಗಳೂರು ಸಂಚಾರಿ ಪೊಲೀಸ್
ಪೊಲೀಸರಿಗೆ ದೂರುಗಳು
ಕೆಲವು ಸಂಚಾರಿ ಪೊಲೀಸರು ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಜನರು ದೂರು ನೀಡಿದ್ದರು. ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ. ಆರ್. ರವಿಕಾಂತೇಗೌಡ ಇದರ ಪತ್ತೆಗೆ ತಂಡವನ್ನು ರಚನೆ ಮಾಡಿದ್ದರು. ಶನಿವಾರ ಅನಧಿಕೃತ ಕಾರ್ಯಾಚರಣೆ ಮಾಡುತ್ತಿದ್ದವರನ್ನು ಪತ್ತೆ ಮಾಡಿದೆ.
ಚಾಲಕನನ್ನು ಕಳಿಸಿ ಪತ್ತೆ
ಈಜೀಪುರದ ಶ್ರೀನಿವಾಗಿಲು ಜಂಕ್ಷನ್ ಸಮೀಪ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು ವಿಶೇಷ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಚಾಲಕನೊಬ್ಬರ ಬಾಯಿ ಹಾಗೂ ಬಟ್ಟೆಗೆ ಮದ್ಯವನ್ನು ಲೇಪಿಸಿ ಕಾರಿನ ಸಮೇತ ಸ್ಥಳಕ್ಕೆ ಕಳಿಸಲಾಗಿತ್ತು. ಆತನನ್ನು ಅಡ್ಡಗಟ್ಟಿದ ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ 15 ಸಾವಿರ ದಂಡ ಕಟ್ಟಬೇಕು ಅಥವ ಇಲ್ಲೇ ಲಂಚ ನೀಡಬೇಕು ಎಂದು ಪೇಟಿಎಂ ಮೂಲಕ ಹಣ ಪಡೆದುಕೊಂಡಿದ್ದರು. ಆಗ ವಿಶೇಷ ತಂಡ ದಾಳಿ ಮಾಡಿದೆ.
ಪೇಟಿಎಂ ಮೂಲಕ ಹಣ ಸಂಗ್ರಹ
ಒಂದು ತಿಂಗಳಿನಿಂದ ಖಾಸಗಿ ವ್ಯಕ್ತಿಗಳ ಮೂಲಕ ಎಎಸ್ಐ ಮತ್ತು ಇತರರು ಅನಧಿಕೃತವಾಗಿ ಹಣ ಸಂಗ್ರಹ ಮಾಡುತ್ತಿದ್ದರು. ತಪಾಸಣೆ ಬೇಡ ಎಂದು ಹಿರಿಯ ಅಧಿಕಾರಿಗಳು ಹೇಳಿದರೂ ಖಾಸಗಿ ವ್ಯಕ್ತಿಗಳ ಮೂಲಕ ವಾಹನ ಸವಾರರನ್ನು ಅಡ್ಡಗಟ್ಟಿ ಲಂಚ ಪಡೆಯುತ್ತಿದ್ದರು. ಪೇಟಿಎಂ ಮೂಲಕ ಅವರಿಂದ ಹಣವನ್ನು ಸಂಗ್ರಹ ಮಾಡಲಾಗುತ್ತಿತ್ತು.
ಪೊಲೀಸರ ಅಮಾನತು
ವಾಹನ ಸವಾರರನ್ನು ಅಡ್ಡಗಟ್ಟಿ ಅನಧಿಕೃತವಾಗಿ ಹಣ ಸುಲಿಗೆ ಮಾಡುತ್ತಿದ್ದ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಲಾಗುತ್ತದೆ. ಎಎಸ್ಐ ಮತ್ತು ಇತರ ಸಿಬ್ಬಂದಿಗಳ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.