ಪೀಣ್ಯ ಮೇಲ್ಸೇತುವೆ ಈ ಸಮಯದಲ್ಲಿ ವಾಹನ ಸಂಚಾರ ಬಂದ್
ಬೆಂಗಳೂರು, ಮಾ. 11: ಯಶವಂತಪುರದಿಂದ ತುಮಕೂರಿಗೆ ತೆರಳುವ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ ಐದು ಗಂಟೆ ವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ಬೆಂಗಳೂರಿನಿಂದ ತುಮಕೂರಿಗೆ ಹೋಗುವ ವಾಹನಗಳಿಗೆ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೂ ಪ್ರತ್ಯೇಕ ಸಂಚಾರ ವ್ಯವಸ್ಥೆ ಮಾಡಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಅದೇಶ ಹೊರಡಿಸಿದ್ದಾರೆ.
ಅಪಾಯಕಾರಿ ಮೇಲ್ಸೇತುವೆ:
ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂಬ ಸಂಗತಿ ವರದಿಯಲ್ಲಿ ಬೆಳಕಿಗೆ ಬಂದ ಬೆನ್ನಲ್ಲೇ, ಡಾ. ಶಿವಕುಮಾರಸ್ವಾಮಿ ಮೇಲ್ಸೇತುವೆಯ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ತಾತ್ಕಾಲಿಕ ದುರಸ್ತಿ ಬಳಿಕ ಮೇಲ್ಸೇತುವೆ ಮೇಲೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪೂರ್ಣ ಪ್ರಮಾಣದ ದುರಸ್ತಿಗೆ ಇನ್ನೂ ಆರು ತಿಂಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಲಘು ವಾಹನಗಳ ಸಂಚಾರ ಮಾಡುತ್ತಿದ್ದವು.
ಮೇಲ್ಸೇತುವೆ ಪ್ರವೇಶದಲ್ಲಿ ಬಾರಿ ಗಾತ್ರದ ವಾಹನಗಳು ಸಂಚರಿಸದಂತೆ ಎತ್ತರ ನಿಯಂತ್ರಣ ಕಂಬಗಳನ್ನು ಅಳವಡಿಸಲಾಗಿತ್ತು. ಆದ್ರೆ, ರಾತ್ರಿ ವೇಳೆ ಅತಿ ವೇಗವಾಗಿ ಬರುವ ವಾಹನಗಳು ಈ ಎತ್ತರ ನಿಂತ್ರಣ ಕಂಬಗಳಿಗೆ ಡಿಕ್ಕಿ ಹೊಡೆಯುತ್ತಿವೆ. ಸಂಚಾರ ಪೊಲೀಸರು ವಾಹನ ನಿಯಂತ್ರಣ ಮಾಡಲು ಹೋಗಿ ಜೀವ ಪಣಕ್ಕೆ ಇಡುವ ಪ್ರಸಂಗಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ ಐದು ಗಂಟೆ ವರೆಗೂ ಸಂಪೂರ್ಣ ವಾಹನಗಳ ಸಂಚಾರವನ್ನು ಎರಡೂ ಬದಿ ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗ 1 :
ಕೆನ್ನೆಮೆಟಲ್ ವೀಡಿಯಾ ಅಪ್ಪರ್ ರ್ಯಾಂಪ್ ನಿಂದ ಎಸ್.ಆರ್. ಎಸ್. ಡೌನ್ ಡ್ಯಾಂಪ್ ಕಡೆಗೆ ಸಾಗುವ ವಾಹನಗಳು ಸರ್ವೀಸ್ ರಸ್ತೆ ಮೂಲಕ ಎಂಟನೇ ಮೈಲಿ, ಜಾಲಹಳ್ಳಿ, ಪೀಣ್ಯ ಪೊಲೀಸ್ ಠಾಣೆ ವೃತ್ತ, ಗೊರಗುಂಟೆ ಪಾಳ್ಯ ತಲುಪಬೇಕು. ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್ ಕಡೆ ತಲುಪಲು ಸರ್ವೀಸ್ ರಸ್ತೆ ಮೂಲಕ ಜಾಲಹಳ್ಳಿ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಗೊರಗುಂಟೆ ಪಾಳ್ಯದಿಂದ ತುಮಕೂರು ಕಡೆ ಮೇಲ್ಸೇತುವೆ ಮೂಲಕ ಸಂಚರಿಸಲು ಹೋಗುವ ವಾಹನಗಳ ರಿಂಗ್ ರೋಡ್ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಚಾರ ಬದಲಾವಣೆ ಕೇವಲ ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ ಐದು ಗಂಟೆ ವರೆಗೆ ಅನ್ವಯಿಸಲಿದೆ. ಉಳಿದ ಸಮಯದಲ್ಲಿ ಎಂದಿನಂತೆ ಮೇಲ್ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
Recommended Video