ಬೆಂಗಳೂರು : ಪುಲಿಕೇಶಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು, ಸೆಪ್ಟೆಂಬರ್ 21 : ಸೋಮವಾರ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವುದರಿಂದ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವ ತನಕ ಈ ಬದಲಾವಣೆ ಜಾರಿಯಲ್ಲಿರುತ್ತದೆ.
ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಪುಲಿಕೇಶಿನಗರ, ಥಣಿಸಂದ್ರ, ನಾಗವಾರ ರಸ್ತೆ, ಪೆರಿಯಾರ್ ವೃತ್ತ, ಪಾಟರಿ ರಸ್ತೆ, ಎಂ.ಎಂ. ಸಿಂಧಿ ಕಾಲೋನಿ ಹಾಗೂ ಅಸಾಯ ರಸ್ತೆ ಮೂಲಕ ಹಾದು ಹೋಗಲಿದೆ. ಈ ಸಂದರ್ಭದಲ್ಲಿ ನೂರಾರು ಜನರು ಜಮಾಯಿಸುವುದರಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. [ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಮಾರ್ಗ ಬದಲಾವಣೆ ವಿವರ ಹೀಗಿದೆ
* ರಿಂಗ್ ರಸ್ತೆ ಮೂಲಕ ನಾಗವಾರ ಜಂಕ್ಷನ್ನಿಂದ ನಾಗವಾರ ಕಡೆಗೆ ಹೋಗುವ ವಾಹನಗಳು, ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಕಡೆಗೆ ಹೋಗಬೇಕು. ಅಲ್ಲಿ ಬಲ ತಿರುವು ಪಡೆದು ಲಿಂಗರಾಜಪುರ ಮುಖ್ಯರಸ್ತೆ ಮತ್ತು ಡೇವಿಸ್ ರಸ್ತೆ ಮೂಲಕ ಶಿವಾಜಿನಗರ ಕಡೆ ಸಂಚರಿಸಬಹುದು. [ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]
* ನಾಗವಾರ ಕಡೆಯಿಂದ ಕೆ.ಜಿ. ಹಳ್ಳಿ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ನರೇಂದ್ರ ಟೆಂಟ್ ಬಳಿ ಎಡ ತಿರುವು ಪಡೆದು ಬಿಡಿಎ ಕಾಂಪ್ಲೆಕ್ಸ್, ಸಿದ್ಧಪ್ಪ ರೆಡ್ಡಿ ವೃತ್ತದ ಮೂಲಕ ಲಿಂಗರಾಜಪುರಕ್ಕೆ ಬಂದು ಮುಂದೆ ಸಾಗಬಹುದು.
* ನೇತಾಜಿ ರಸ್ತೆ ಮತ್ತು ಟ್ಯಾನರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ನೇತಾಜಿ ವೃತ್ತದಿಂದ ವಾಹನ ಸವಾರರು ಎಂ.ಎಂ. ರಸ್ತೆ, ಮಾಸ್ಕ್ ರಸ್ತೆ, ಡೇವಿಸ್ ಮೂಲಕ ಲಿಂಗರಾಜಪುರ ತಲುಪಿ ಅಲ್ಲಿಂದ ನಾಗವಾರ, ಥಣಿ ಸಂದ್ರ ದತ್ತ ಮುಂದೆ ಸಾಗಬಹುದು.