ಸಿರ್ಸಿ ವೃತ್ತ ಮೇಲ್ಸೇತುವೆ ಅಭಿವೃದ್ಧಿ, ರಾಯನ್ ವೃತ್ತದವರೆಗೆ ಸಂಚಾರ ಶುರು
ಬೆಂಗಳೂರು, ಜನವರಿ 31: ಸಿರ್ಸಿ ವೃತ್ತ ಮೇಲ್ಸೇತುವೆಯಲ್ಲಿ ಮರು ಡಾಂಬರೀಕರಣ ಕಾಮಗಾರಿ ಭಾಗಶಃ ಮುಕ್ತಾಯಗೊಂಡಿದ್ದು, ಬುಧವಾರ ಟೌನ್ಹಾಲ್ ನಿಂದ ರಾಯನ್ ವೃತ್ತದ ವರೆಗಿನ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕಳೆದ ಒಂದು ತಿಂಗಳಿನಿಂದ ಟೌನ್ ಹಾಲ್ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಬರುವ ಮಾರ್ಗದ ಕಾಮಗಾರಿ ನಡೆಸಲಾಗುತ್ತಿತ್ತು. ಈಗ ಟೌನ್ಹಾಲ್ ಕಡೆಯಿಂದ ರಾಯನ್ ವೃತ್ತದ ಕಡೆಗಿನ ಡೌನ್ ರಾಂಪ್ ಮಾರ್ಗದ ಮರು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ.
ಕಾಮಗಾರಿ ಪೂರ್ಣ
2-3 ದಿನದಲ್ಲಿ ಕಾಮಗಾರಿ ಪೂರ್ಣ ರಾಯನ್ ವೃತ್ತದ ಕಡೆಗೆ ಹೋಗುವ ಡೌನ್ ರಾಂಪ್ ನಿಂದ ಮೈಸೂರು ರಸ್ತೆವರೆಗಿನ ಮಾರ್ಗದ ದುರಸ್ತಿ ಕಾಮಗಾರಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಳಿದೆ. ನಂತರ ಮೇ್ಸೇತುವೆ ಒಂದು ಭಾಗ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ನಂತರ ಮೈಸೂರು ರಸ್ತೆಯಿಂದ ಟೌನ್ಹಾಲ್ ಕಡೆಗೆ ಬರುವ ಮಾರ್ಗದ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಮೈಸೂರು ರಸ್ತೆ-ಟೌನ್ ಹಾಲ್ ನಡುವಿನ ರಸ್ತೆ ಕಾಮಗಾರಿ
ಇನ್ನು ಒಂದು ವಾರದಲ್ಲಿ ಮೈಸೂರು ರಸ್ತೆಯಿಂದ ಟೌನ್ಹಾಲ್ ಕಡೆಗೆ ಬರುವ ರಸ್ತೆಯ ಕಾಮಗಾರಿ ಆರಂಭಿಸಲಾಗುತ್ತದೆ ಅದಕ್ಕೆ 30ರಿಂದ40 ದಿನ ಬೇಕಾಗಿದ್ದು, ಅಲ್ಲಿಯವರೆಗೆ ಆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಮಾರ್ಚ್ ಆರಂಭದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಹಂತ ಹಂತದಲ್ಲಿ ಕಾಮಗಾರಿ
ಕಾಮಗಾರಿಯನ್ನು ಹಂತಹಂತವಾಗಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ, ಮೆಜೆಸ್ಟಿಕ್ ಕಡೆಗೆ ಸಾಗುವ ಡಭನ್ ರಾಂಪ್ ಅಥವಾ ಕೆಆರ್ ಮಾರುಕಟ್ಟೆ ಕಡೆಗೆ ಹೋಗುವ ಡೌನ್ ರಾಂಪ್ ನಿಂದ ಟೌನ್ಹಾಲ್ ವರೆಗಿನ ಮೇಲ್ಸೇತುವೆ ಮಾರ್ಗದಲ್ಲಿ ಮೊದಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಯಾವ್ಯಾವ ಭಾಗಕ್ಕೆ ತೊಂದರೆ
ಒಂದು ಭಾಗದಲ್ಲಿ ಸಂಚಾರ ನಿಷೇಧಿಸುವುದರಿಂದ ಕೆಆರ್ ಮಾರುಕಟ್ಟೆ, ರಾಯನ್ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ಬದಲಾವಣೆ ಮಾಡಲಾಗುತ್ತದೆ. ಇನ್ನು ಎರಡು ಬದಿಯ ನಾಲ್ಕು ಪಥದ 2.65 ಕಿ.ಮೀಟರ್ ರಸ್ತೆಗೆ ಮರು ಡಾಂಬರು ಮಾಡಲಾಗುತ್ತದೆ.