800 ರೂ. 'ಮಾಮೂಲಿ' ಪಡೆಯುತ್ತಿದ್ದ ಟೋಯಿಂಗ್ ಸಿಬ್ಬಂದಿ ಜೈಲಿಗೆ ರವಾನೆ!
ಬೆಂಗಳೂರು, ಸೆ.28: ನೋ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸಿದ್ದ ದ್ವಿಚಕ್ರ ವಾಹನ ಮಾಲೀಕನಿಂದ ಎಂಟು ನೂರು ರೂಪಾಯಿ ಲಂಚ ವಸೂಲಿ ಮಾಡಲು ಹೋಗಿ ಟೋಯಿಂಗ್ ಏಜೆಂಟ್ ಜೈಲು ಸೇರಿದ್ದಾನೆ.
ಸಂಚಾರ ಪೊಲೀಸರು ಎಸಿಬಿ ಪೊಲೀಸರ ಭಯಕ್ಕೆ ಟೋಯಿಂಗ್ ಖಾಸಗಿ ವ್ಯಕ್ತಿಗಳ ಮೂಲಕವೇ ದ್ವಿಚಕ್ರ ವಾಹನ ಮಾಲೀಕರಿಂದ ಹಣ ವಸೂಲಿ ಮಾಡಿಸುವುದು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯ. ಒಂದು ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿದರೂ ಖಾಸಗಿ ವ್ಯಕ್ತಿಯನ್ನು ಏನೂ ಮಾಡಲ್ಲ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಅದೆಲ್ಲವೂ ಸುಳ್ಳು ಎಂಬದನ್ನು ಬೆಂಗಳೂರು ಎಸಿಬಿ ಘಟಕದ ಪೊಲೀಸರು ಮಾಡಿ ತೋರಿಸಿದ್ದಾರೆ. ಈ ಮೂಲಕ ಖಾಸಗಿ ಏಜೆಂಟರ ಮೂಲಕ ಲಂಚ ಪಡೆಯುವ ಭ್ರಷ್ಟರಿಗೆ ಎಸಿಬಿ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ದ್ವಿಚಕ್ರ ವಾಹನ ಮಾಲೀಕನಿಂದ ಕಾನೂನು ಬದ್ಧವಾಗಿ 1,150 ರೂ. ದಂಡ ವಸೂಲಿ ಮಾಡುವ ಬದಲಿಗೆ 800 ರೂ. ಲಂಚ ಪಡೆಯುತ್ತಿದ್ದ ಟೋಯಿಂಗ್ ವಾಹನದ ಕೆಲಸಗಾರನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಜಯನಗರ ಸಂಚಾರ ಠಾಣೆ ವ್ಯಾಪ್ತಿ ಟೋಯಿಂಗ್ ವಾಹನದ ಟೋಯಿಂಗ್ ಸಿಬ್ಬಂದಿ ಖಾಸಗಿ ಏಜೆಂಟ್ ಸಿದ್ದೇಗೌಡ ಬಂಧಿತ ಆರೋಪಿ. ಅಚ್ಚರಿ ಏನೆಂದರೆ ಲಂಚಾವತಾರ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಇಲ್ಲದೇ ಒಬ್ಬ ಏಜೆಂಟ್ನ್ನು ಬಂಧಿಸಿದ ಅಪರೂಪದ ಪ್ರಕರಣದ ವ್ಯಾಪ್ತಿಗೆ ಇದು ಸೇರಿದೆ. ಇನ್ನು ಒಬ್ಬ ಸರ್ಕಾರಿ ಅಧಿಕಾರಿ ಇಲ್ಲದೇ ಖಾಸಗಿ ವ್ಯಕ್ತಿಯನ್ನು ಲಂಚ ಪ್ರಕರಣದಲ್ಲಿ ಬಂಧಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಬಂಧಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ಈ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ ಎಸಿಬಿ ಬೆಂಗಳೂರು ನಗರ ಘಟಕದ ಅಧಿಕಾರಿ, ಒಬ್ಬ ಖಾಸಗಿ ವ್ಯಕ್ತಿ ಸರ್ಕಾರಿ ಸೇವೆ ಮಾಡುವಾಗ ಲಂಚ ಸ್ವೀಕರಿಸಿದರೆ, ಅತನನ್ನು ಬಂಧಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅವಕಾಶವಿದೆ. ಬಂಧಿತ ಸಿದ್ದೇಗೌಡ ಟೋಯಿಂಗ್ ಸಿಬ್ಬಂದಿ ಖಾಸಗಿ ವ್ಯಕ್ತಿಯಾಗಿದ್ದರೂ, ಆತ ಸರ್ಕಾರಿ ಸೇವೆಯನ್ನು ಮಾಡುತ್ತಿದ್ದ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಬಹುದು ಎಂದು ತಿಳಿಸಿದ್ದಾರೆ. ಎಸಿಬಿಯ ಈ ದಾಳಿ ಟೋಯಿಂಗ್ ಲಂಚಾವತಾರಕ್ಕೆ ನಡುಕ ಹುಟ್ಟಿಸಿದೆ.
ನಡೆದ ಘಟನೆ: ಮಲ್ಲೇಶ್ವರಂ ನಿವಾಸಿಯೊಬ್ಬರು ಕೆಲಸದ ನಿಮಿತ್ತ ಜಯನಗರಕ್ಕೆ ಹೋಗಿದ್ದರು. ಶಾಂತಿಸಾಗರ ಹೋಟೆಲ್ ಸಮೀಪ ಆಕ್ಟೀವಾ ಹೋಂಡಾ ದ್ವಿಚಕ್ರ ವಾಹನ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದರು. ಬಂದು ನೋಡುವಷ್ಟರಲ್ಲಿ ದ್ವಿಚಕ್ರ ವಾಹನ ಇರಲಿಲ್ಲ. ನೋ ಪಾರ್ಕಿಂಗ್ ಹಾಗೂ ಟೋಯಿಂಗ್ ದಂಡ ಸೇರಿ 1150 ರೂ. ಪಾವತಿಸುವಂತೆ ಮೊದಲು ಟೋಯಿಂಗ್ ಸಿಬ್ಬಂದಿ ಕೇಳಿದ್ದಾರೆ. ಅಷ್ಟು ಹಣ ನನ್ನ ಬಳಿ ಇಲ್ಲ ಎಂದಿದ್ದಕ್ಕೆ ಟೋಯಿಂಗ್ ಹಣ ಸೇರಿ 800 ರೂ. ನೀಡಿದರೆ ವಾಹನ ಬಿಟ್ಟು ಕಳಿಸುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ಕೂಡಲೇ ಎಸಿಬಿ ಸಂಪರ್ಕಿಸಿರುವ ದ್ವಿಚಕ್ರ ವಾಹನ ಮಾಲೀಕ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದಾರೆ.
ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ನೂರು ರೂ. ಲಂಚ ಸ್ವೀಕರಿಸಿದ್ದ ಟೋಯಿಂಗ್ ವಾಹನ ಏಜೆಂಟ್ ಸಿದ್ದೇಗೌಡನನ್ನು ಬಂಧಿಸಿದ್ದಾರೆ. ಬಂಧಿತನಿಂದ ಎಂಟು ನೂರು ರೂ. ಲಂಚವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಟೋಯಿಂಗ್ ವಾಹನದಲ್ಲಿದ್ದ ಎಎಸ್ಐ ಅವರ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರತಿಯೊಂದು ಟೋಯಿಂಗ್ ವಾಹನದಲ್ಲಿ ಟೋ ಮಾಡುವ ದ್ವಿಚಕ್ರ ವಾಹನಗಳಿಗೆ ಠಾಣೆಯ ಎಎಸ್ಐ ಅವರನ್ನು ಜವಾಬ್ದಾರರನ್ನಾಗಿ ನಿಯೋಜಿಸಲಾಗಿರುತ್ತದೆ.ಆದರೆ, ಈ ಪ್ರಕರಣದಲ್ಲಿ ಎಎಸ್ಐ ಪಾತ್ರವಿದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.
ಟೋಯಿಂಗ್ ಮಾಫಿಯಾ ಎನ್ನುವ ಕಲ್ಪನೆ: ಸಂಚಾರ ನಿಯಮ ಉಲ್ಲಂಘನೆ ಮಾಡುವುದು ನೋ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅಡ್ಡಿ ಪಡಿಸುವ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವ ಕಾನೂನು ಸರಿಯಿದೆ. ಆದರೆ ಅದನ್ನು ಖಾಸಗಿ ಟೋಯಿಂಗ್ ವಾಹನಗಳ ಮೂಲಕ ಕಾರ್ಯಗತಗೊಳಿಸುವ ಕಾರ್ಯ ಭ್ರಷ್ಟಾಚಾರ ಕೂಪವಾಗಿ ಬೆಳೆದು ನಿಂತಿದೆ. ಬೆಂಗಳೂರಿನ 40 ಸಂಚಾರ ಪೊಲೀಸ್ ಠಾಣೆಗಳಿಗೆ ತಲಾ ಮೂರರಂತೆ ಟೋಯಿಂಗ್ ವಾಹನ ನಿಯೋಜನೆ ಮಾಡಲಾಗಿದೆ. ಟೋಯಿಂಗ್ ವಾಹನ ಮಾಲೀಕರು ಐದು ಪೈಸೆ ಖರ್ಚು ಮಾಡದೇ ಟೋಯಿಂಗ್ ಸಿಬ್ಬಂದಿ ನಿರ್ವಹಣೆ, ವಾಹನ ನಿರ್ವಹಣೆ, ಒಳ್ಳೆಯ ಪೊಲೀಸ್ ಠಾಣೆಗೆ ವಾಹನ ನಿಯೋಜನೆಗೆ ಮಾಡುವ ವೆಚ್ಚವನ್ನು ಟೋ ಮಾಡಿದ ವಾಹನ ಮಾಲೀಕರಿಂದ ಅಕ್ರಮವಾಗಿ ವಸೂಲಿ ಮಾಡಿದ ಹಣದಲ್ಲಿ ನಿರ್ವಹಣೆ ಮಾಡುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ.
ಟೋಯಿಂಗ್ ದಂಡ ವಸೂಲಿಯನ್ನು ಪಾರದರ್ಶಕವಾಗಿ ಮಾಡುವಂತೆ ಈ ಹಿಂದೆ ಗೃಹ ಸಚಿವರು ಆದೇಶ ಮಾಡಿದ ಮೂರನೇ ದಿನಕ್ಕೆ ಎಲ್ಲಾ ಟೋಯಿಂಗ್ ವಾಹನ ಮಾಲೀಕರು ವಾಹನ ನಿಲ್ಲಿಸಿ ಸೈಲೆಂಟ್ ಮುಷ್ಕರ ಆರಂಭಿಸಿದ್ದರು. ಟೋ ಮಾಡುವ ಪ್ರತಿಯೊಂದು ವಾಹನದ ಲೆಕ್ಕ ಕೊಡಬೇಕು. ಪಾರದರ್ಶಕವಾಗಿ ದಂಡ ವಸೂಲಿ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶ ಮಾಡಿದ ಬೆನ್ನಲ್ಲೇ ಟೋಯಿಂಗ್ ವಾಹನ ಮಾಲೀಕರು ತಮ್ಮ ವಾಹನ ನಿಲ್ಲಿಸಿದ್ದರು. ಅಕ್ರಮಕ್ಕೆ ಅವಕಾಶ ಕೊಡದ ಹೊರತು ಟೋಯಿಂಗ್ ವಾಹನ ಚಾಲನೆ ಮಾಡಲ್ಲ ಎಂದು ಪಟ್ಟು ಹಿಡಿದು ಕೂತಿದ್ದರು. ಎರಡು ದಿನದ ಬಳಿಕ ಟೋಯಿಂಗ್ ವಾಹನ ಕಾರ್ಯಚರಣೆಗೆ ಇಳಿದಿದ್ದವು. ಇದೀಗ ಎಸಿಬಿ ಪೊಲೀಸರು ಟೋಯಿಂಗ್ ಲಂಚವತಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಎಂಟು ನೂರು ರೂ. ಮಾಮೂಲಿ ವಸೂಲಿ ಮಾಡುತ್ತಿದ್ದ ಟೋಯಿಂಗ್ ಸಿಬ್ಬಂದಿಯನ್ನು ಬಂಧಿಸಿದ ಎಸಿಬಿ ಪೊಲೀಸರ ಕಾರ್ಯ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.