ದೇಶಾದ್ಯಂತ ಲಾರಿ ಮುಷ್ಕರ,ಅಗತ್ಯ ವಸ್ತುವಿಗಾಗಿ ಜನರ ಪರದಾಟ
ಬೆಂಗಳೂರು, ಅಕ್ಟೋಬರ್, 01 : ವಾರ್ಷಿಕ ಟೋಲ್ ಪದ್ಧತಿ ಜಾರಿ ಹಾಗೂ ಇನ್ನಿತರ ಬೇಡಿಕೆಗೆ ಆಗ್ರಹಿಸಿ ಅಖಿಲ ಭಾರತ ವಾಹನಗಳ ಸಂಘಟನೆ (AIMTC) ದೇಶಾದ್ಯಂತ ಅಕ್ಟೋಬರ್ 1ರ ಗುರುವಾರದಿಂದ ಸರಕು ಸಾಗಣೆ ವಾಹನಗಳ ಮುಷ್ಕರ ಆರಂಭಿಸಿದೆ. ರಾಜ್ಯದಲ್ಲಿ 9 ಲಕ್ಷ , ದೇಶಾದ್ಯಂತ 93 ಲಕ್ಷ ಸರಕು ಸಾಗಾಣೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿರುವ ವಾರ್ಷಿಕ ಟೋಲ್ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಬುಧವಾರ ನಡೆಸಿದ ಮಾತುಕತೆ ವಿಫಲವಾದ ಪರಿಣಾಮ ಮುಷ್ಕರ ನಡೆಸಲಾಗುತ್ತಿದೆ ಎಂದು ಲಾರಿ ಮಾಲೀಕರು ಮತ್ತು ಏಜೆಂಟರ್ ಸಂಘದ ಅಧ್ಯಕ್ಷ ಜಿ. ಆರ್ ಷಣ್ಮುಗಪ್ಪ ತಿಳಿಸಿದ್ದಾರೆ.[ಹೆದ್ದಾರಿಗಳಲ್ಲಿ ಸಂಚರಿಸುವವರು ಟೋಲ್ ಕಟ್ಟಲು ರೆಡಿಯಾಗಿರಿ]
ದೇಶಾದ್ಯಂತ 373 ಟೋಲ್ ಸಂಗ್ರಹ ಕೇಂದ್ರಗಳಿವೆ. ರಾಜ್ಯದ 29 ಟೋಲ್ ಕೇಂದ್ರಗಳಲ್ಲಿ 6 ಕೇಂದ್ರಗಳಲ್ಲಿ ಟೋಲ್ ಸಂಗ್ರಹ ಅವಧಿ ಮುಗಿದಿದೆ. ಆದರೂ ಟೋಲ್ ಸಂಗ್ರಹ ಕಾರ್ಯ ಮುಂದುವರೆಸಿ ಜನರನ್ನು ಸಾಕಷ್ಟು ಶೋಷಣೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಟೋಲ್ ಸಂಗ್ರಹಕ್ಕೆ ಸಮ್ಮತಿ ಸೂಚಿಸುವುದರ ಮೂಲಕ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ಷಣ್ಮುಗಪ್ಪ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಲಾರಿ ಮುಷ್ಕರದಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆ, ಸಿಲಿಂಡರ್ ಗಳ ಪೂರೈಕೆ ರದ್ಧತಿ, ನಾನಾ ವಸ್ತುಗಳ ಬೆಲೆ ಏರಿಕೆ ಸಂಭವ, ಜನಜೀವನ ಅಸ್ತವ್ಯಸ್ತ, ಆರ್ಥಿಕವಾಗಿ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇರುವುದರಿಂದ ವಾರ್ಷಿಕ ಟೋಲ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ತಕ್ಷಣವೇ ಗಮನ ಹರಿಸಬೇಕು ಎಂದು ಲಾರೀ, ಟ್ರಾಕ್ ಮಾಲೀಕರು ಹೇಳಿದ್ದಾರೆ.