ಕೃಷಿ-ಎಪಿಎಂಸಿ ಮಸೂದೆಗೆ ವಿರೋಧ: ಇಂದು ಕರ್ನಾಟಕ ಬಂದ್
ಬೆಂಗಳೂರು, ಸೆಪ್ಟೆಂಬರ್ 28: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ.
ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಒಟ್ಟಾಗಿ 'ಐಕ್ಯ ಹೋರಾಟ ಸಮಿತಿ' ಎಂಬ ಹೆಸರಿನಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ(ಎಂ) ಪಕ್ಷಗಳು ಬೆಂಬಲ ನೀಡಿವೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಸೇರಿದಂತೆ ಮತ್ತಿತರ ಕನ್ನಡ ಪರ ಸಂಘಟನೆಗಳು ರೈತರ ಹೋರಾಟಕ್ಕೆ ಕೈ ಜೋಡಿಸಿವೆ.
ಕಾಂಗ್ರೆಸ್ ಮಾತು ಕೇಳಿ ಕರ್ನಾಟಕ ಬಂದ್ ಮಾಡಬೇಡಿ; ರೈತರಿಗೆ ಈರಣ್ಣ ಕಡಾಡಿ ಮನವಿ
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು, ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವುದಿರಲ್ಲ. ಕರ್ನಾಟಕ ಬಂದ್ಗೆ ಆಟೋ ಚಾಲಕರು ಬೆಂಬಲ ನೀಡಿದ್ದು, ಓಲಾ ಮತ್ತು ಉಬರ್ ಸಂಘವು ಬೆಂಬಲ ನೀಡಿದೆ.
ಕರ್ನಾಟಕ ಬಂದ್ನಿಂದ ಆಸ್ಪತ್ರೆ, ಆ್ಯಂಬುಲೆನ್ಸ್ ಮತ್ತು ಔಷಧಿ ಅಂಗಡಿಗಳಿಗೆ ವಿನಾಯಿತಿ ಇರಲಿದ್ದು, ವಿಮಾನ, ಮೆಟ್ರೋ ಸೇವೆಗಳು ಎಂದಿನಂತೆ ಇರಲಿವೆ. ಹೋಟೆಲ್, ದಿನಸಿ ಅಂಗಡಿಗಳು ಎಂದಿನಂತೆ ಇರಲಿದ್ದು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯವಿದ್ದರೆ ಮಾತ್ರ ದೂರ ಪ್ರಯಾಣ ಮಾಡಿ.