ಕೊರೊನಾ ಮೂರನೇ ಅಲೆ: ಬೆಂಗಳೂರಿನಲ್ಲಿ ಮಕ್ಕಳ ಐಸಿಯು ಆಸ್ಪತ್ರೆ ಉದ್ಘಾಟನೆ!
ಬೆಂಗಳೂರು, ಜು. 07: ಕೊರೊನಾ ವೈರಸ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆಯಿದೆ ಎಂದು ತಜ್ಞರು ಈಗಾಗಲೇ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದಾರೆ. ತಜ್ಞರ ಮಾಹಿತಿ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಬೆಂಗಳೂರಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (IGICH)ನಲ್ಲಿ ಕಾಗ್ನಿಜೆಂಟ್ ಫೌಂಡೇಶನ್ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 100 ಹಾಸಿಗೆಗಳ ಮಕ್ಕಳ ತೀವ್ರ ನಿಗಾ ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಉದ್ಘಾಟನೆ ಮಾಡಿದ್ದಾರೆ.
"ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಇದೀಗ 30ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ 19 ಸೋಂಕಿಗೆ ತುತ್ತಾಗುವ ಶಿಶುಗಳಿಗೆ ಮತ್ತು ಮಕ್ಕಳಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗಲಿದೆ. ಮಕ್ಕಳಿಗೆ ಅಗತ್ಯವಾದ ಪಿಪಿಇ ಕಿಟ್ಗಳು, ಆಕ್ಸಿಜನ್ ಬೆಡ್ಗಳು, ವೆಂಟಿಲೇಟರ್ಗಳು, ಮಲ್ಟಿ ಪ್ಯಾರಾಮಾನಿಟರ್ಗಳು ಸೇರಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮಾಹಿತಿ ಕೊಟ್ಟಿದ್ದಾರೆ.
"ಮಕ್ಕಳಿಗಾಗಿಯೇ ಇಂಥ ಅತ್ಯುತ್ತಮ ಐಸಿಯು ಸಿದ್ಧಪಡಿಸಲು ದೊಡ್ಡ ಪ್ರಮಾಣದಲ್ಲಿ ಕೈಜೋಡಿಸಿದ ಕಾಗ್ನಿಜೆಂಟ್ ಸಂಸ್ಥೆ ಜೊತೆಗೂಡಿ 1.32 ಕೋಟಿ ರೂ. ವೆಚ್ಚದಲ್ಲಿ ಐಸಿಯು ಸೌಲಭ್ಯವನ್ನು ಅಭಿವೃದ್ಧಿಪಡಿಲಾಗಿದೆ. ರಾಜ್ಯ ಸರಕಾರವು ಸೋಂಕಿನ ಕಾಯಿಲೆ ಹತ್ತಿಕ್ಕಲು ಎಲ್ಲ ಕ್ರಮಗಳನ್ನೂ ಕೈಗೊಂಡಿದೆ. ಮೂರನೇ ಅಲೆ ತಡೆಯುವುದಕ್ಕೆ ಸಾಧ್ಯವಾದ ಉಪ ಕ್ರಮಗಳನ್ನೂ ಕೈಗೊಳ್ಳಲಾಗಿದೆ" ಎಂದು ಡಿಸಿಎಂ ಸಾರ್ವಜನಿಕರಿಗೆ ಭರವಸೆ ಕೊಟ್ಟಿದ್ದಾರೆ.
Recommended Video