'ಬೆಳ್ಳಂದೂರು ಕೆರೆ ರಕ್ಷಣೆಗೆ ಕಾಂಕ್ರೀಟ್ ಕಾಮಗಾರಿ ನಿಲ್ಲಿಸಿ'
ಬೆಂಗಳೂರು, ಜನವರಿ 23 : ದಿನದಿಂದ ದಿನಕ್ಕೆ ಬೆಳ್ಳಂದೂರು ಕೆರೆ ಅವನತಿಯತ್ತ ಸಾಗುತ್ತಿದೆ. ಕೆರೆಯನ್ನು ಉಳಿಸಿಕೊಳ್ಳಬೇಕಾದರೆ ಕೋರಮಂಗಲ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಬಿಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಬೆಳ್ಳಂದೂರು ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಂಡು 50 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಈ ಕೆರೆಯ ಸಹಜ ಸ್ಥಿತಿಗೆ ತರುವ ಮೊದಲ ಹೆಜ್ಜೆಯಾಗಿ ಇದರ ಸುತ್ತಮುತ್ತಲೂ ಕಾಂಕ್ರೀಟ್ ಕಟ್ಟಡಗಳು ನಿರ್ಮಾಣವಾಗದಂತೆ ತಡೆಯಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಇಂಧನ ಮತ್ತು ಜೌಗು ಪ್ರದೇಶ ಸಂಶೋಧನಾ ತಂಡ ಸಿದ್ಧಪಡಿಸಿದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಬೆಳ್ಳಂದೂರು ಕೆರೆಗೆ ಮತ್ತೆ ಬೆಂಕಿ: ಶಾಶ್ವತವಾಗಿ ನಂದಿಸುವವರು ಯಾರು?
ಬೆಳ್ಳಂದೂರು ಕೆರೆಗಳ ಸುತ್ತ ಕೈಗಾರಿಕೀಕರಣ ಹಾಗೂ ವಾಣಿಜ್ಯೀಕರಣವನ್ನು ತಡೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೋರಮಂಗಲ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗೆ ಕಡಿವಾಣ ಹಾಕಬೇಕು.
ಐವರು ತಜ್ಞರನ್ನು ಒಳಗೊಂಡ ಅಧ್ಯಯನ ತಂಡವು ಸಿದ್ಧಪಡಿಸಿರುವ ಅಗರ ಮತ್ತು ಬೆಳ್ಳಂದೂರು ಜೌಗು ಪ್ರದೇಶಗಳಲ್ಲಿ ನಿಲ್ಲದ ಉಲ್ಲಂಘನೆಗಳು ಎಂಬ ವರದಿಯು ಈ ಜಲಮೂಲಗಳ ಸಂರಕ್ಷಣೆಗೆ ಅನೇಕ ಶಿಫಾರಸುಗಳನ್ನು ಮಾಡಿದೆ. ತಂಡದ ಸದಸ್ಯರು 2017 ರ ಡಿಸೆಂಬರ್ 12 ರಂದು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕೆರೆಯನ್ನು ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಯವುದೇ ಕೊಳಚೆ ನೀರು ಸಂಸ್ಕರಣಾ ಘಟಕಗಳಿಲ್ಲ. ಹಾಗಾಗಿ ಈ ಕೆರೆಯು ಕೊಳಚೆ ನೀರಿನಿಂದ ತುಂಬಿದೆ. ಜೌಗು ಪ್ರದೇಶದಲ್ಲಿ ಅಕ್ರಮ ಒತ್ತುವರಿ ಈಗಲೂ ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಜ್ಞಾನಿ ಟಿ.ವಿ. ರಾಮಚಂದ್ರ ಆರೋಪಿಸಿದರು.
ದಶಕಗಳಿಂದ ಕೋರಮಂಗಲ ಸುತ್ತಮುತ್ತಲ ಪ್ರದೇಶ ಸಂಪೂರ್ಣ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ ತ್ಯಾಜ್ಯ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದೆ. ಬೆಳ್ಳಂದೂರು ಕಣಿವೆಗೆ ಸರೋವರ ಮತ್ತು ಜೌಗು ಪ್ರದೇಶ ಸಂರಕ್ಷಣಾ ನಿಯಮಗಳಡಿ ವಿಶೇಷ ರಕ್ಷಣೆ ಒದಗಿಸಲಾಗಿದೆ. ಈ ಕೆರೆಯನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ 2006ರ ರಾಷ್ಟ್ರೀಯ ಪರಿಸರ ನೀತಿ ಹಾಗೂ 2002ರ ರಾಷ್ಟ್ರೀಯ ಜಲ ನೀತಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.