ಮೇ 25ರಿಂದ ಪ್ರಮುಖ ನಗರಗಳಲ್ಲಿ ತಿರುಪತಿ ಲಡ್ಡು ಮಾರಾಟ
ಬೆಂಗಳೂರು, ಮೇ 25: ಲಾಕ್ಡೌನ್ನಿಂದ ತಿರುಪತಿ ದೇವಾಲಯ ಬಂದ್ ಆಗಿದೆ. ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಸುಮಾರು ಎರಡೂವರೆ ತಿಂಗಳಿನಿಂದ ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಲಾಗಿದ್ದು, ಭಕ್ತರು ನಿರಾಸೆಯಾಗಿದ್ದಾರೆ.
Recommended Video
ದೇವಸ್ಥಾನ ಬಂದ್ ಆಗಿದ್ದರೂ ತಿರುಪತಿ ಲಡ್ಡುಗಳನ್ನು ಮಾರಾಟ ಮಾಡಲು ತಿರುಮಲ ತಿರುಪತಿ ದೇವಸ್ಥಾನ ಸಂಸ್ಥೆ ಮುಂದಾಗಿತ್ತು. ಸಬ್ಸಿಡಿ ಬೆಲೆಯಲ್ಲಿ ಲಡ್ಡು ಮಾರಾಟ ಮಾಡಲು ನಿರ್ಧರಿಸಿದ್ದ ದೇವಾಯಲದ ಆಡಳಿತ ಮಂಡಳಿ ಇಂದಿನಿಂದ ಪ್ರಮುಖ ನಗರಗಳಲ್ಲಿ ಲಡ್ಡು ಮಾರಾಟಕ್ಕೆ ಚಾಲನೆ ನೀಡಿದೆ.
ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್
ಆಂಧ್ರಪ್ರದೇಶದ ಎಲ್ಲ ಜಿಲ್ಲಾ ಪ್ರಮುಖ ಕಚೇರಿಗಳಲ್ಲಿ ಹಾಗೂ ಬೆಂಗಳೂರು, ಚೆನ್ನೈ, ಹೈದರಾಬಾದ್, ತೆಲಂಗಾಣದ ಟಿಟಿಡಿ ಕಲ್ಯಾಣ ಮಂಟಪಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿ ಲಡ್ಡು ದೊರೆಯಲಿದೆ.
ಈ ಲಡ್ಡು 179 ಗ್ರಾಂ ತೂಕ ಇರುತ್ತೆ. ಒಂದು ಲಡ್ಡು ತಯಾರಿಸಲು 40 ರೂಪಾಯಿ ಖರ್ಚಾಗಲಿದೆ. ತಿರುಪತಿಯಲ್ಲಿ ಆ ಲಡ್ಡಿನ ಬೆಲೆ 50 ರೂಪಾಯಿ. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗುತ್ತಿತ್ತು. ಈಗ 50 ರೂಪಾಯಿ ಬದಲು 25 ರೂಪಾಯಿಗೆ ಲಡ್ಡು ಮಾರಾಟ ಮಾಡಲಾಗುತ್ತೆ ಎಂದು ಟಿಟಿಡಿ ಸಂಸ್ಥೆ ಹೇಳಿದೆ.
ಲಾಕ್ಡೌನ್ನಿಂದ ದೇವಸ್ಥಾನದ ನಿರ್ವಹಣೆ ಮಂಡಳಿ ಮೇಲೆ ಪರಿಣಾಮ ಬೀರಿರುತ್ತೆ. ಈ ಬಗ್ಗೆ ಮಾತನಾಡಿದ ಟಿಟಿಡಿ ಮುಖ್ಯಸ್ಥ ''ನಮ್ಮ ಉದ್ಯೋಗಿಗಳಿಗೆ ಸಂಬಳ ಮತ್ತು ಪಿಂಚಣಿ ಪಾವತಿಸಲು ಅಥವಾ ದೇವಾಲಯದ ನಿರ್ವಹಣೆಗೆ ಯಾವುದೇ ಹಣದ ಕೊರತೆಯಿಲ್ಲ'' ಎಂದು ಹೇಳಿದ್ದರು.