ತಿರುಪತಿ ಲಡ್ಡುಗೂ ಪರವಾನಗಿಯೇ? ಗೋವಿಂದಾ ಗೋವಿಂದ
ಬೆಂಗಳೂರು,ಡಿಸೆಂಬರ್ 13: ಗುಣಮಟ್ಟದಲ್ಲಿ ತಿರುಪತಿಯ ಲಡ್ಡುವನ್ನು ಮೀರಿಸಲು ಯಾವ ಲಡ್ಡುವಿನಿಂದಲೂ ಸಾಧ್ಯವಿಲ್ಲ ಎಂಬುದು ಎಲ್ಲೆಡೆ ಜನಜನಿತವಾಗಿರುವ ಮಾತು ಆದರೆ ತಿರುಪತಿ ಲಡ್ಡುವನ್ನೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಗೆ ಒಳಪಡಿಸಿ ಪರೀಕ್ಷಿಸಿದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇದಕ್ಕೆ ಟಿಟಿಡಿ ಮುನಿಸಿಕೊಂಡು ಅವಕಾಶ ಮಾಡಿಕೊಟ್ಟಿದೆ.
ಲಡ್ಡು ತಯಾರಿಕೆಯಲ್ಲಿ ಗುಣಮಟ್ಟ ನಿಯಮ ಪಾಲಿಸದಿರುವ ಬಗ್ಗೆ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹಮೂರ್ತಿ ಎಫ್ಎಸ್ಎಸ್ಎಐಗೆ ದೂರಿತ್ತಿದ್ದರು. ಈ ಹಿನ್ನೆಲೆ ಎಫ್ಎಸ್ಎಸ್ಎಐ ನಿರ್ದೇಶಕರು ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ನಂತರ ಪ್ರಾಧಿಕಾರ ಕ್ರಮಕ್ಕೆ ಮುಂದಾದಾಗ ಆಹಾರ ಸುರಕ್ಷತೆ ಕಾಯ್ದೆಯಡಿ ಪ್ರಸಾದ ರೂಪದ ಲಡ್ಡು ಬರುವುದಿಲ್ಲ ಎಂದು ಟಿಟಿಡಿ ವಾದಿಸಿತ್ತು. ಆದರೆ ಇದನ್ನು ತಳ್ಳಿಹಾಕಿರುವ ಆಂಧ್ರದ ಆಹಾರ ಸುರಕ್ಷತಾ ಅಯುಕ್ತರು ಕ್ರಮಕ್ಕೆ ಸೂಚಿಸಿದ್ದರು.[ತಿರುಪತಿ ಲಡ್ಡು ಪೇಟೆಂಟ್ ತಿಮ್ಮಪ್ಪನಿಗೇ ಉಳಿಯಿತು]
ಆಂಧ್ರ ಸರ್ಕಾರದ ಜಂಟಿ ಆಹಾರ ನಿಯಂತ್ರಕರು, ವಲಯ4ರ ಸಹಾಯಕ ಆಹಾರ ನಿಯಂತ್ರಕರು, ಆಹಾರ ನಿರೀಕ್ಷಕರು ಹಾಗೂ ಅಂಕಿತ ಅಧಿಕಾರಿಯವರನ್ನು ಒಳಗೊಂಡ ತಂಡ ಸೆ. 22ರಂದು ಲಡ್ಡು ತಯಾರಿಸುವ ಸ್ಥಳ (ಪೊಟ್ಟು) ಪರಿಶೀಲನೆಗೆ ತೆರಳಿದಾಗ ಟಿಟಿಡಿಯ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಅದಕ್ಕೆ ಅವಕಾಶ ನೀಡಿರಲಿಲ್ಲ. 'ಇದು ಪವಿತ್ರ ಪ್ರದೇಶ. ಹೊರಗಿನವರನ್ನು ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ' ಎಂದು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಅವಕಾಶ ನಿರಾಕರಿಸಿದ್ದರು.[ತಿರುಪತಿ ದೇವಾಲಯದ ಬಳಿ ಅಗ್ನಿ ಆಕಸ್ಮಿಕ]
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 3 (1)(1) ಪ್ರಕಾರ ಟಿಟಿಡಿಯೂ ಆಹಾರೋದ್ಯಮ (ಎಫ್ಬಿಒ) ವ್ಯಾಖ್ಯಾನದಡಿ ಬರುತ್ತದೆ. ಆಹಾರ ಉಚಿತವಾಗಿ ನೀಡಿದರೂ ಅಥವಾ ಮಾರಾಟ ಮಾಡಿದರೂ 'ಆಹಾರ'ದ ವ್ಯಾಖ್ಯೆ ಬದಲಾಗುವುದಿಲ್ಲ. ಹಾಗಾಗಿ ಟಿಟಿಡಿ ಈ ಕಾಯ್ದೆ ಪ್ರಕಾರ ಪರವಾನಗಿ ಪಡೆಯಲೇಬೇಕು. ಕಾಯ್ದೆಯ ಸೆಕ್ಷನ್ 23ರ ಪ್ರಕಾರ ಆಹಾರೋದ್ಯಮ ನಡೆಸುವ ಸಂಸ್ಥೆ ಪಾಲಿಸಬೇಕಾದ ಎಲ್ಲ ನಿಯಮಗಳು ಟಿಟಿಡಿಗೂ ಅನ್ವಯ' ಎಂದು ಎಫ್ಎಸ್ಎಸ್ಎಐ ಹೇಳಿದೆ.
ಟಿಟಿಡಿಯಲ್ಲಿ ಬಾಣಸಿಗರು ಅಂಗಿಯನ್ನೂ ಧರಿಸದೆ ಲಡ್ಡು ತಯಾರಿಸುವ ವಿಡಿಯೊವನ್ನು ಯೂಟ್ಯೂಬ್ ನಲ್ಲಿ ನೋಡಿದ್ದ ನರಸಿಂಹ ಮೂರ್ತಿ, 'ತಿರುಪತಿ ಲಡ್ಡು ಸಿದ್ಧಪಡಿಸುವವರು ಆರೋಗ್ಯ ಸುರಕ್ಷತೆ ಮಾನದಂಡದ ಪ್ರಕಾರ ಉಡುಗೆಯನ್ನೂ ತೊಡುವುದಿಲ್ಲ, ಕೈಗವಸು ಧರಿಸುವುದಿಲ್ಲ. ಅವರ ದೇಹದ ಬೆವರು, ಕೂದಲು ಲಡ್ಡನ್ನು ಸೇರಿಕೊಳ್ಳುತ್ತಿದೆ. ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದರಿಂದಲೇ ಲಡ್ಡುವಿನಲ್ಲಿ ಬೋಲ್ಟ್, ನಟ್, ಕೀ-ಚೈನ್ ನಂತಹ ವಸ್ತುಗಳು ಪತ್ತೆಯಾಗಿವೆ' ಎಂದು ಎಫ್ಎಸ್ಎಸ್ಎಐಗೆ ಜೂನ್ 28 2016 ರಂದು ದೂರು ನೀಡಿದ್ದರು. ಹೀಗೆಯೇ ಟೋಕನ್ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ವಿವರಿಸಿದ್ದರು.[ತಿರುಪತಿಯಲ್ಲಿ ಈಗ ಊಟದ ಜತೆ ರೋಟಿ]
ಆಹಾರವನ್ನು ಉತ್ಪಾದಿಸುವ ಯಾವುದೇ ವ್ಯಕ್ತಿ, ಸಂಸ್ಥೆ ಎಫ್ಎಸ್ಎಸ್ ಕಾಯ್ದೆ ಪ್ರಕಾರ ನೋಂದಣಿ ಮಾಡಿಸಿಕೊಳ್ಳಲೇಬೇಕು. ಪರವಾನಗಿ ಪಡೆಯದೆಯೇ ನಡೆಸುವ ಆಹಾರೋದ್ಯಮ ನಡೆಸುವವರಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ ₹ 5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ.