ಬೆಂಗಳೂರಿನಲ್ಲಿ ನೀರುಪಾಲಾದ ಮೂವರು ಯುಕರು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ಬೆಂಗಳೂರು, ಮೇ 26 : ಬೆಂಗಳೂರಿನಲ್ಲಿ ಮೂವರು ಯುವಕರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗುಬ್ಬಿ ಕೆರೆಯಲ್ಲಿ ನಡೆದಿದೆ. ಸಾರಾಯಿಪಾಳ್ಯದಿಂದ ಮೇ 26ರ ಮಧ್ಯಾಹ್ನ ದೊಡ್ಡ ಗುಬ್ಬಿ ಕೆರೆಗೆ ಆಗಮಿಸಿದ್ದ ಐದು ಮಂದಿ ಯುವಕರಲ್ಲಿ ಇಮ್ರಾನ್ ಪಾಷಾ, ಮುಬಾರಕ್, ಶಾಹೀದ್ ಎಂಬುವರು ನೀರಿನಲ್ಲಿ ಮುಳುಗಿದ್ದಾರೆ. ಇವರ ಮೃತದೇಹ ಪತ್ತೆಗಾಗಿ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸತತ ಐದು ಗಂಟೆ ಶೋಧಿಸಿದ್ದರು ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿಲ್ಲ.
ದೊಡ್ಡ ಗುಬ್ಬಿ ಕೆರೆಯಲ್ಲಿ ಮೂವರು ಯುವಕರು ಮುಳುಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. ಸಾಕಷ್ಟು ಹುಡುಕಾಟ ನಡೆಸಿದ್ದರು ಯಾರ ಶವ ಕೂಡ ಪತ್ತೆಯಾಗಲಿಲ್ಲ. ಕತ್ತಲಾಗಿದ್ದರಿಂದ ಮೇ27ಕ್ಕೆ ಪತ್ತೆ ಕಾರ್ಯಚರಣೆಯನ್ನು ಮುಂದೂಡಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಈಜಾಡುತ್ತಿರುವ ಬಗ್ಗೆ ಇನ್ಸ್ಟ್ರಾಗ್ರಾಮ್ನಲ್ಲಿ ಪೋಸ್ಟ್
ಸಾರಾಯಿಪಾಳ್ಯದಿಂದ ಮಧ್ಯಾಹ್ನ ದೊಡ್ಡಗುಬ್ಬಿ ಕೆರೆಗೆ ಐವರು ಯುವಕರು ಈಜಲು ಬಂದಿದ್ದರು. ಐವರ ಪೈಕಿ ಮೂರು ಜನ ನೀರು ಪಾಲಾಗಿದ್ದರೇ ಅಬ್ದುಲ್ ರೆಹಮಾನ್ ಹಾಗೂ ಶಾಹೀಲ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತನಾದ ಇಮ್ರಾನ್ ಕಳೆದ ವಾರ ಇದೇ ಕೆರೆಯಲ್ಲಿ ಈಜಾಡಲು ಬಂದಿದ್ದ. ತಾನು ಈಜಾಡುತ್ತಿರುವ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಸ್ನೇಹಿತರಿಗೂ ಹೇಳಿದ್ದ. ಗೆಳೆಯರನ್ನೆಲ್ಲಾ ಒಗ್ಗೂಡಿಸಿಕೊಂಡು ಬಾಡಿಗೆ ಆಟೊ ಮಾಡಿ ಕೆರೆ ಬಳಿ ಕರೆತಂದಿದ್ದ. ಮುಬಾರಕ್, ಶಾಹೀದ್ ಗೆ ಈಜು ಬರದಿದ್ದರೂ ಇಮ್ರಾನ್ ಬಲವಂತವಾಗಿ ನೀರಿಗಿಳಿಯುವಂತೆ ಮಾಡಿದ್ದನಂತೆ. ನಂತರ ಈಜಾಡಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ. ದಡದಲ್ಲಿದ್ದ ಇಬ್ಬರು ಶಾಹೀಲ್ ಹಾಗೂ ಅಬ್ದುಲ್ ಪೋಷಕರಿಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಮುಳುಗಿ ಕಾಣೆಯಾದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದರೂ ಇದುವರೆಗೂ ಮೂವರ ಶವಗಳು ಪತ್ತೆಯಾಗಿಲ್ಲ.
ಸ್ಥಳೀಯ ನಿವಾಸಿಗಳು ಹೇಳಿದ್ದೇನು..?
ಸ್ಥಳೀಯ ನಿವಾಸಿ ಲಕ್ಷ್ಮೀ ನರಸಿಂಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಾರಾಯಿಪಾಳ್ಯದ ನಿವಾಸಿಗಳು ಐದು ಜನ ಈಜಾಡೋಕೆ ಅಂತಾ ಬಂದಿದ್ದಾರೆ. ಆಗ ಮೂವರು ಕೆರೆಯಲ್ಲಿ ಮುಳುಗಿದ್ದಾರೆ. ಉಳಿದ ಇಬ್ಬರು ಹೇಗೋ ಹೊರಗೆ ಬಂದಿದ್ದಾರೆ. ನಂತರ ಅವರು ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಹುಡುಕಾಟ ನಡೆಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದರೂ ಮೂವರ ಮೃತದೇಹ ಸಿಕ್ಕಿಲ್ಲ. ಕತ್ತಲಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು ಮೇ 27 ಬೆಳಗ್ಗೆ ಪತ್ತೆಕಾರ್ಯ ಮುಂದುವರೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Recommended Video