ಕಟ್ಟಡ ಕುಸಿತ: 40 ಮಂದಿ ನಮ್ಮ ಮೆಟ್ರೋ ಕಾರ್ಮಿಕರು ಬಚಾವ್ ಆಗಿದ್ದು ಹೇಗೆ?
ಬೆಂಗಳೂರು, ಸೆ.27: ಕ್ಷಣಾರ್ಧದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಈ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಅದೇ ಕಟ್ಟಡದಲ್ಲಿ ವಾಸವಾಗಿದ್ದ 40 ಕ್ಕೂ ಹೆಚ್ಚು ಮಂದಿ ಮೆಟ್ರೊ ಕಾರ್ಮಿಕರು ಇದ್ದಿದ್ದರೆ ಮಣ್ಣು ಪಾಲು ಆಗುತ್ತಿದ್ದರು. ಅದೃಷ್ಟವಶಾತ್, ಕಟ್ಟಡ ಬೀಳುವ ಮುನ್ನವೇ ಅಲ್ಲಿಂದ ಜಾಗ ಖಾಲಿ ಮಾಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಮಿಕರು ಮನೆ ಖಾಲಿ ಮಾಡಿದ ಕೆಲವೇ ತಾಸಿನಲ್ಲಿ ಕಟ್ಟಡ ಕುಸಿದು ಬಿದ್ದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
Recommended Video
ಹೌದು. ಬೆಂಗಳೂರಿನ ಲಕ್ಕಸಂದ್ರದಲ್ಲಿ ಸೋಮವಾರ ಬೆಳಗ್ಗೆ ಕುಸಿದು ಬಿದ್ದ ಕಟ್ಟಡ ದುರಂತದ ಅಸಲಿ ಚಿತ್ರಣ. ಸುಮಾರು ಐವತ್ತು ವರ್ಷಗಳಿಗೂ ಹಳೆಯದಾದ ಮೂರು ಹಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಸದ್ಯದವರೆಗೂ ಯಾವುದೇ ಪ್ರಾಣಾ ಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ದೃಶ್ಯ ಸ್ಥಳೀಯರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ಬೆಂಗಳೂರು ನಗರ ಭಾರತ್ ಬಂದ್ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಬೆಳಗ್ಗೆ 11.30ರ ಸುಮಾರಿಗೆ ಲಕ್ಕಸಂದ್ರದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಸ್ವಲ್ಪ ವಾಲಿದೆ. ಅಷ್ಟರಲ್ಲಿ ಅದರಲ್ಲಿ ತಂಗಿದ್ದ ಮೆಟ್ರೋ ಕಾರ್ಮಿಕರು ಕ್ಷಣಾರ್ಧದಲ್ಲಿ ಜಾಗ ಖಾಲಿ ಮಾಡಿದ್ದಾರೆ. ಇದಾದ ಕೂಡಲೇ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ.
ಸುಮಾರು ದಿನದಿಂದ ಅದೇ ಮನೆಯಲ್ಲಿದ್ದ 40 ಮೆಟ್ರೊ ಕಾರ್ಮಿಕರು ಬಚಾವ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕುಸಿಯುವ ಹಂತದಲ್ಲಿತ್ತು: ಈ ಕಟ್ಟಡದಲ್ಲಿ ಮೆಟ್ರೊ ಕಾರ್ಮಿಕರು ಇದ್ದರು. ರಾತ್ರಿಯಿಂದಲೇ ಯಾಕೋ ನಮಗೆ ಅನುಮಾನ ಮೂಡಿತ್ತು. ಬೆಳಗ್ಗೆ ಮನೆಯಿಂದ ಹೊರ ಬರುವಂತೆ ಕಾರ್ಮಿಕರಿಗೆ ಸೂಚಿಸಿದ್ದೆವು. ಅವರೆಲ್ಲರೂ ಹೊರಗೆ ಬಂದಿದ್ದರು. ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿದು ಬಿತ್ತು. ಒಂದು ವೇಳೆ ರಾತ್ರಿ ಕಟ್ಟಡ ಕುಸಿದು ಬಿದ್ದಿದ್ದರೆ ಹೊರ ರಾಜ್ಯದ ನಲವತ್ತು ಕಾರ್ಮಿಕರು ಮಣ್ಣು ಪಾಲಾಗುತ್ತಿದ್ದರು. ಸ್ಥಳೀಯರು ಎಚ್ಚರಿಸಿದ ಪರಿಣಾಮ ನಲವತ್ತು ಕಾರ್ಮಿಕರು ಜೀವ ಉಳಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಟ್ಟಡ ಬೀಳುತ್ತಿದ್ದಂತೆ ಪರಾರಿ:
ಕಟ್ಟಡ ಕುಸಿಯುವ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ ಅಕ್ಕ ಪಕ್ಕದ ಮನೆಯವರನ್ನು ಖಾಲಿ ಮಾಡಿಸಿದ್ದಾರೆ. ಆನಂತರ ಬೆಸ್ಕಾಂಗೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಮನೆ ಮುಂಭಾಗದಲ್ಲಿದ್ದವರನ್ನು ಸಹ ಅಗ್ನಿ ಶಾಮಕ ಪೊಲೀಸರು ಹೊರಗೆ ಕಳಿಸಿದ್ದರಿಂದ ಸಣ್ಣ ಗಾಯವೂ ಆಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿಯ ಮುನ್ನೆಚ್ಚರಿಕೆ ಕ್ರಮದಿಂದ ಅಕ್ಕ ಪಕ್ಕದವರಿಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಲೀಕನ ವಿರುದ್ಧ ಕ್ರಮ:
ತ್ರಿಕೋನಾ ಕಾರದಲ್ಲಿದ್ದ ಮೂರು ಮಹಡಿ ಕಟ್ಟಡ ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮನೆ ಮಾಲೀಕ ಸುರೇಶ್ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ. ಕಟ್ಟಡ ಕುಸಿಯುವ ಹಂತದಲ್ಲಿದ್ದರೂ ಅದನ್ನು ನೆಲಸಮ ಮಾಡದೇ ನಿರ್ಲಕ್ಷ್ಯ ವಹಿಸಿರುವ ಸುರೇಶ್ ವಿರುದ್ಧ ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳಾಗಲೀ, ಮನೆ ಮಾಲೀಕರಾಗಲೀ ಕಟ್ಟಡದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾಲೀಕರು ನಿರ್ಲಕ್ಷ್ಯ ವಹಿಸಿದರು ಎಂದು ಸ್ಥಳೀಯರು ಆರೋಪಿದ್ದಾರೆ.